ರಾಮನಗರ: ಕಲ್ಲು ಗಣಿಗಾರಿಕೆ ಟಿಪ್ಪರ್ ಲಾರಿಗಳ ಸಂಚಾರದಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆಯಿಂದ ಬೇಸತ್ತ ಹೆಗ್ಗಡಗೆರೆ ಗ್ರಾಮದ ನಿವಾಸಿಗಳು ಮಂಗಳವಾರ ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು

ರಾಮನಗರ: ಕಲ್ಲು ಗಣಿಗಾರಿಕೆ ಟಿಪ್ಪರ್ ಲಾರಿಗಳ ಸಂಚಾರದಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆಯಿಂದ ಬೇಸತ್ತ ಹೆಗ್ಗಡಗೆರೆ ಗ್ರಾಮದ ನಿವಾಸಿಗಳು ಮಂಗಳವಾರ ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟಿಸಿದರು.

ಹೆಗ್ಗಡಗೆರೆ ಗ್ರಾಮದಲ್ಲಿ ಬಿಡದಿ-ಮುದುವಾಡಿ ಮುಖ್ಯರಸ್ತೆ ಹಾದು ಹೋಗಿದ್ದು, ಸಾರಿಗೆ ಸಂಸ್ಥೆ ಬಸ್ ಗಳು, ಶಾಲಾ ವಾಹನಗಳು ಹಾಗೂ ಖಾಸಗಿ ವಾಹನಗಳು ಸೇರಿದಂತೆ ಕ್ರಷರ್ ಗಳಿಂದ ಬರುವ ಟಿಪ್ಪರ್ ಲಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ.

ಜಲ್ಲಿಕಲ್ಲು ಮತ್ತು ಎಂಸ್ಯಾಂಡ್ ಸಾಗಣೆ ಮಾಡುವ ಟಿಪ್ಪರ್ ಲಾರಿಗಳ ಮಿತಿ ಮೀರಿದ ಓಡಾಟದಿಂದ ಮನೆಗಳಿಗೆ ಯಥೇಚ್ಚವಾಗಿ ಧೂಳು ಹರಡುತ್ತಿದೆ. ಅಲ್ಲದೆ ಹಗಲು ರಾತ್ರಿ ಬಿಡುವಿಲ್ಲದೆ ಸಂಚರಿಸುವ ಲಾರಿಗಳ ಮೊರೆತದಿಂದ ನಿದ್ರೆ ಮಾಡಲಾಗುತ್ತಿಲ್ಲ, ಸಾವಿರಾರು ಟಿಪ್ಪರ್ ಲಾರಿಗಳ ಓಡಾಟ ಜನಜೀವನದ ಮೇಲೆ ಹೆಚ್ಚು ದಷ್ಪರಿಣಾಮವನ್ನು ಬಿರುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಲಾರಿಗಳನ್ನು ತಡೆದರು. ಇದರಿಂದ ರಸ್ತೆಯಲ್ಲಿ ನೂರಾರು ಟಿಪ್ಪರ್ ಲಾರಿಗಳು ಸಾಲುಗಟ್ಟಿ ನಿಂತಿದ್ದವು.

ಕ್ರಷರ್ ಗಳಿಂದ ಜಲ್ಲಿಕಲ್ಲು ಹಾಗೂ ಎಂಸ್ಯಾಂಡ್ ಸಾಗಣೆ ಮಾಡುವ ದೈತ್ಯಾಕಾರದ ಟಿಪ್ಪರ್ ಲಾರಿಗಳು ಓವರ್ ಲೋಡ್ ತುಂಬಿಕೊಂಡು ರಸ್ತೆಗಿಳಿಯುತ್ತವೆ. ಪ್ರತಿದಿನ ಸಂಜೆ ಕಲ್ಲು ಗಣಿಗಾರಿಕೆಗಳಲ್ಲಿ ಬಳಸುವ ಸಿಡಿಮದ್ದುಗಳ ಶಬ್ದವು ಭೂಕಂಪನದ ಅನುಭವವಾಗುತ್ತದೆ. ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯದಿಂದ ನಿದ್ರೆ ಮತ್ತು ನೆಮ್ಮದಿ ಹಾಳಾಗಿದೆ. ಈ ಜ್ವಲಂತ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವ ಕ್ರಮವನ್ನು ವಹಿಸಿಲ್ಲ. ಹಾಗಾಗಿ ಲಾರಿಗಳನ್ನು ತಡೆದಿದ್ದೇವೆ. ಲಾರಿಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಕೋಟ್............

ಜಲ್ಲಿ ಹಾಗೂ ಕಲ್ಲಿನಪುಡಿ ತುಂಬಿದ ಟಿಪ್ಪರ್ ಲಾರಿಗಳು ಬಿಡುವಿಲ್ಲದೆ ಸಂಚರಿಸುವುದರಿಂದ ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಧೂಳಿನಿಂದ ಸುತ್ತಮುತ್ತಲ ಪ್ರದೇಶ ವಾಯುಮಾಲಿನ್ಯಕ್ಕೆ ಒಳಗಾಗಿದೆ. ಸೊಪ್ಪು ತರಕಾರಿ ಸಹಿತ ಯಾವ ಬೆಳೆಗಳು ಕೂಡ ಬೆಳೆಯಲಾಗದ ದುಸ್ಥಿತಿಯಿದೆ. ಕುಡಿಯುವ ನೀರು ಮತ್ತು ತಿನ್ನುವ ಆಹಾರ ಧೂಳು ಹಿಡಿಯುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.

-ಸೋಮಶೇಖರ್, ಸ್ಥಳೀಯ, ಹೆಗ್ಗಡಗೆರೆ

7ಕೆಆರ್ ಎಂಎನ್ 9.ಜೆಪಿಜಿ

ಬಿಡದಿಯ ಹೆಗ್ಗಡಗೆರೆ ಗ್ರಾಮದಲ್ಲಿ ಎಂಸ್ಯಾಂಡ್ ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ತಡೆದಿರುವ ಗ್ರಾಮಸ್ಥರು.