ಸಭಾ ನಿಯಮ ಉಲ್ಲಂಘನೆ : ಅಧ್ಯಕ್ಷರ ರಾಜೀನಾಮೆಗೆ ಪ್ರತಿಪಕ್ಷ ಆಗ್ರಹ

| Published : May 15 2025, 01:46 AM IST

ಸಾರಾಂಶ

ಚಿಕ್ಕಮಗಳೂರು, ನಿಯಮ ಉಲ್ಲಂಘಿಸಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಅವರಿಗೆ ನಗರಸಭೆಯ ಆಡಳಿತ ನಡೆಸುವ ಸಾಮಾರ್ಥ್ಯವಿಲ್ಲ. ಅವರಿಗೆ ನಿಯಮಗಳ ಪರಿಜ್ಞಾನವಿಲ್ಲ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬುಧವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ಚಿಕ್ಕಮಗಳೂರು ನಗರಸಭೆಯ ವಿಶೇಷ ಸಾಮಾನ್ಯಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಿಯಮ ಉಲ್ಲಂಘಿಸಿ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಅವರಿಗೆ ನಗರಸಭೆಯ ಆಡಳಿತ ನಡೆಸುವ ಸಾಮಾರ್ಥ್ಯವಿಲ್ಲ. ಅವರಿಗೆ ನಿಯಮಗಳ ಪರಿಜ್ಞಾನವಿಲ್ಲ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬುಧವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಮಾತನಾಡಿ, ನಿಯಮಾನುಸಾರ ಯಾವುದೇ ಸಾಮಾನ್ಯಸಭೆ ಕರೆಯುವುದಾದರೆ ಎಂಟು ದಿನಗಳ ಮುಂಚಿತವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು. ವಿಶೇಷ ಸಭೆ, ತುರ್ತು ಸಭೆಗಳಿಗೆ ಕನಿಷ್ಠ ಮೂರು ದಿನದ ಮೊದಲು ಮಾಹಿತಿ ನೀಡಬೇಕು. ನಗರಸಭೆ ನಿಯಮಗಳ ಬಗ್ಗೆ ಅಧ್ಯಕ್ಷರಿಗೆ ಮಾಹಿತಿಯಿಲ್ಲ. ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಈ ಸಭೆಗೆ ನಾವು ಭಾಗವಹಿಸಬೇಕೆ, ಅಭಿವೃದ್ಧಿ ಪ್ರಸ್ತಾವನೆಗಳಿಗೆ ನಾವು ಸಮಿತಿ ಸೂಚಿಸಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಮುಂದಿನ ದಿನಗಳಲ್ಲಿ ಯಾವುದೇ ಸಭೆ ಕರೆಯುವುದಾದರೆ ಕನಿಷ್ಠ 8 ದಿನಗಳ ಮೊದಲು, ತುರ್ತು ಸಭೆಗೆ ಕನಿಷ್ಠ 3 ದಿನಗಳ ಮೊದಲು ಸಭೆ ಕರೆಯುವಂತೆ ನಿರ್ಣಯ ಕೈಗೊಳ್ಳಲು ಸದಸ್ಯ ಲಕ್ಷ್ಮಣ್ ಆಗ್ರಹಿಸಿದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು.

ಕಳೆದ ಮೂರು ಸಭೆಗಳಿಂದ ಆಡಳಿತ ಪಕ್ಷದ ಸದಸ್ಯರು ನಿರಂತರವಾಗಿ ಗೈರಾಗುತ್ತಿದ್ದು ಅವರದೇ ಪಕ್ಷದ ಅಧ್ಯಕ್ಷರ ಬಗ್ಗೆ ಅಸಮಾಧಾನವಿದೆಯೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ಸದಸ್ಯ ಮುನೀರ್ ಮೂದಲಿಸಿದರು.

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡು ತೀವ್ರ ಮುಜುಗರಕ್ಕೆ ಒಳಪಡಿಸಿದರೂ ಸಹ ಬಿಜೆಪಿಯ ಒಬ್ಬನೇ ಒಬ್ಬ ಸದಸ್ಯ ಸಹ ಅಧ್ಯಕ್ಷರ ಪರವಾಗಿ ಸಮರ್ಥನೆ ಮಾಡಿಕೊಳ್ಳದಿರುವ ಬಗ್ಗೆ ಕಾಂಗ್ರೆಸ್ ನ ಸದಸ್ಯರು ಕುಹಕದ ನಗೆ ಬೀರುತ್ತಿದ್ದದ್ದು ಈ ಸಭೆಯ ವಿಶೇಷ.

ಸಭೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರ ಅನುಪಸ್ಥಿತಿಯನ್ನು ದಂಟರಮಕ್ಕಿ ವಾರ್ಡಿನ ಮಂಜುಳಾ ಶ್ರೀನಿವಾಸ್ ಮತ್ತು ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸಭೆಯಿಂದ ಹೊರ ನಡೆದು ಉಪಾಧ್ಯಕ್ಷರ ಕೊಠಡಿಯಲ್ಲಿದ್ದ ಇಬ್ಬರು ಸದಸ್ಯರನ್ನು ಕಾಂಗ್ರೆಸ್ ಪಕ್ಷದ ಸದಸ್ಯರು ಮನವೊಲಿಸಿ ಸಭೆಗೆ ಕರೆದುಕೊಂಡು ಬರುವ ಮೂಲಕ ಸಭೆಗೆ ಅಗತ್ಯವಿದ್ದ ಸಂಖ್ಯಾಬಲವನ್ನು ಕ್ರೂಢೀಕರಿಸಿದರು.

ಕಾಂಗ್ರೆಸ್ ಪಕ್ಷದ 11 ಮಂದಿ ಸದಸ್ಯರು, ಬಿಜೆಪಿಯ 6 ಮಂದಿ, ಜೆಡಿಎಸ್ ಗೋಪಿ ಸೇರಿದಂತೆ ಒಟ್ಟು 18 ಮಂದಿ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ಆರಂಭವಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಮುನೀರ್ ಮಾತನಾಡಿ ನಗರಸಭೆ ಎಸ್ ಎಫ್ ಸಿ , ನಗರೋತ್ಥಾನ ಸೇರಿದಂತೆ ಲಕ್ಷಾಂತರ ರು. ಅನುದಾನಗಳ ಪಡೆದಿರುವ ಬಿಜೆಪಿ ಸದಸ್ಯರು ಗೈರಾಗುವ ಮೂಲಕ ಅಧ್ಯಕ್ಷರನ್ನು ಅವಮಾನಿಸಿದ್ದಾರೆ. ನಮಗೆ ಯಾವುದೇ ಅನುದಾನ ನೀಡದೆ ಇದ್ದರೂ ಸಹ ನಗರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಸದಸ್ಯರು ನಾವು ಸಭೆಗೆ ಹಾಜರಾಗಿದ್ದೇವೆ. ಈ ತಾರತಮ್ಯ ಧೋರಣೆ ನಡುವೆಯೂ ಅಭಿವೃದ್ಧಿ ಕಾಮಗಾರಿಗಳಿಗೆ ನಾವು ಸಮ್ಮತಿ ಸೂಚಿಸ ಬೇಕೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಬಿಜೆಪಿ ಸದಸ್ಯರು ಮದುವೆ ಸೇರಿದಂತೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು.

ಆಡಳಿತ ಪಕ್ಷದ ಸದಸ್ಯರ ಅನುಪಸ್ಥಿತಿ ಮತ್ತು ವಿರೋಧ ಪಕ್ಷಗಳ ಆಕ್ಷೇಪದ ನಡುವೆ ನಗರದ ವಿವಿಧ ವಾರ್ಡ್‌ಗಳ ವಿವಿಧ ಅನುದಾನಗಳ ಅಡಿ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ನಗರೋತ್ಥಾನ ಕಾಮಗಾರಿ ಆರಂಭಗೊಂಡು 3 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುವವರೆಗೂ ಅವರಿಗೆ ಬಿಲ್ ಪಾವತಿಸಬಾರದು ಅಥವಾ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದಸ್ಯ ಲಕ್ಷ್ಮಣ್ ಒತ್ತಾಯಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕೇಶ್ ಇದ್ದರು.

14 ಕೆಸಿಕೆಎಂ 5ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್‌, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್‌ ಇದ್ದರು.