ಸಾರಾಂಶ
ಗದಗ: ಸಹಕಾರ ಕ್ಷೇತ್ರವು ಇಂದು ತನ್ನ ಕ್ಷೇತ್ರ ವಿಸ್ತಾರ ಮಾಡಿಕೊಳ್ಳದ ಕಾರಣ ಕಾರ್ಪೋರೇಟ್ ಸಂಸ್ಥೆಗಳು, ಅನಧೀಕೃತ ಫೈನಾನ್ಸ್ ಕಂಪನಿಗಳು ಬೃಹದಾಕಾರವಾಗಿ ಬೆಳೆಯುತ್ತಿರುವ ಪರಿಣಾಮ ದೇಶದ ಮತ್ತು ರಾಜ್ಯದ ಆರ್ಥಿಕ ಕ್ಷೇತ್ರ ಹಿಂಸಾತ್ಮಕ ವಾತಾವರಣವಾಗಿ ಬದಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಹುಬ್ಬಳ್ಳಿ ರಸ್ತೆಯ ಗದಗ ಕೋ.ಆಪ್ ಇಂಡಸ್ಟ್ರಿಯಲ್ ಎಸ್ಟೇಟ್ ಆವರಣದಲ್ಲಿನ ತಿರಂಗಾ ಪಾರ್ಕನಲ್ಲಿ ಗದಗ ಪರಿಸರದ ಸಹಕಾರಿಗಳು ಹಮ್ಮಿಕೊಂಡಿದ್ದ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮೈಕ್ರೋ ಫೈನಾನ್ಸ್ಗಳು ಇಂದು ಜನರನ್ನು ಹಿಡಿದು,ಹೊಡೆದು ಸಾಲ ವಸೂಲಿ ಮಾಡುವುದು, ಬಂದೂಕು ಹಿಡಿದು ಬೆದರಿಕೆ ಹಾಕುವುದು ಮಾಡುತ್ತಿರುವುದರಿಂದ ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ಖೇದಕರ ವಿಷಯವಾಗಿದೆ. ಆದ್ದರಿಂದಲೇ ಜೋರು ಮಾಡಿ ಹಣ ವಸೂಲಿ ಮಾಡುವವರಿಗೆ, ಅಮಾನವೀಯವಾಗಿ ಹಣ ವಸೂಲಿ ಮಾಡುವವರಿಗೆ ಅಂಕುಶದ ಜತೆಗೆ ಮಟ್ಟ ಹಾಕಲು ಸರಕಾರ ಕಾನೂನು ತರಲು ಚಿಂತನೆ ನಡೆಸಿದೆ ಎಂದರು.
ಇಂದಿನ ದಿನಮಾನದಲ್ಲಿ ಸಹಕಾರ ಕ್ಷೇತ್ರದಲ್ಲಿ ಲಾಭವಿಲ್ಲದ ಕಾರಣ ಯುವಜನತೆ ಸಹಕಾರ ಕ್ಷೇತ್ರದಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಹಿರಿಯರೆಲ್ಲರೂ ಸೇವೆಗೆ ಕೀರ್ತಿ ಅಪೇಕ್ಷೆ ಮಾಡುತ್ತಿದ್ದ ಪರಿಣಾಮ ದೊಡ್ಡಮನುಷ್ಯರಾಗುತ್ತಿದ್ದರು. ಆದರೆ, ಇಂದು ಪ್ರತಿಯೊಬ್ಬರೂ ಸೇವೆಗೆ ಕೀರ್ತಿ ಅಪೇಕ್ಷೆ ಮಾಡದೆ ಲಾಭ ನಿರೀಕ್ಷಿಸುತ್ತಿದ್ದಾರೆ. ಅದರ ಪರಿಣಾಮ ಸಹಕಾರ ಕ್ಷೇತ್ರದ ತನ್ನ ವ್ಯಾಪ್ತಿ ಕ್ಷೀಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.ದೇಶದ ಇತಿಹಾಸ ಮೆಲುಕು ಹಾಕಿದಾಗ ಶಾಸಕರಾದವರು, ರಾಜ್ಯದ ನಾಯಕರಾದವರು ಸಹಕಾರಿ ಬ್ಯಾಂಕ್, ಶಿಕ್ಷಣ ಸಂಸ್ಥೆ, ಟೆಕ್ಸಟೈಲ್ ಮಿಲ್, ಪ್ರೊಸೆಸ್ಸಿಂಗ್ ಯುನಿಟ್, ಸಕ್ಕರೆ ಕಾರ್ಖಾನೆ, ಖಾದಿ ಗ್ರಾಮೋದ್ಯೋಗ ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡಿದ್ದರು. ಆದರೆ, ಕಳೆದ 25 ವರ್ಷಗಳಿಂದ ಇತ್ತೀಚೆಗೆ ಸಹಕಾರಿ ಕ್ಷೇತ್ರದ ಆಸ್ತಿ ಪಡೆದುಕೊಂಡು ಖಾಸಗಿ ಮಾಡಿಕೊಂಡು ಸರ್ಕಾರದ ಸವಲತ್ತು ಪಡೆದುಕೊಂಡವರು ರಾಜಕೀಯ ನಾಯಕತ್ವ ಪಡೆದುಕೊಳ್ಳುತ್ತಿದ್ದಾರೆ. ಈ ವ್ಯತ್ಯಾಸದಿಂದ ಯುವಕರು ಸಹಕಾರಿ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಂಡು ಕೇವಲ ಲಾಭದ ಉದ್ದೇಶಕ್ಕಾಗಿ ಗಮನ ಹರಿಸುತ್ತಿರುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದರು.
ಗದಗದಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ ಆರಂಭಿಸುವಾಗ ಇದೊಂದು ಯಶಸ್ವಿ ಪ್ರಯೋಗ ಆಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಇಂದು ಹಲವಾರು ಉದ್ಯಮಿಗಳು ಸಹಕಾರಿ ಮನೋಭಾವನೆ ಹೊಂದಿ ಯಶಸ್ವಿಯಾಗಿರುವುದನ್ನು ನೋಡಿದಾಗ ಹೆಮ್ಮೆ, ಅಭಿಮಾನ ಉಂಟಾಗುತ್ತದೆ. ಸ್ಥಳೀಯ ಉದ್ಯಮಿಗಳು ಹೊಸಪೀಳಿಗೆಯನ್ನು ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸಿದ್ಧಮಾಡಿದರೆ ಸಹಕಾರಿ ಕ್ಷೇತ್ರಕ್ಕೆ ಬಹುದೊಡ್ಡ ಲಾಭವಾಗುತ್ತದೆ ಎಂದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಗದಗ ಸಹಕಾರಿ ರಂಗದ ತೊಟ್ಟಿಲು. ಈ ತೊಟ್ಟಿಲಿನಿಂದ ಬೆಳೆದು, ಸಹಕಾರಿ ರಂಗ ಬೆಳೆದವರನ್ನು ಸನ್ಮಾನಿಸುವುದು ಒಂದು ಖುಷಿಯ ಸಂಗತಿಯಾಗಿದೆ ಎಂದರು.
ಎಚ್.ಜಿ. ಹಿರೇಗೌಡರ ಮಾತನಾಡಿದರು. ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಸರಕಾರದಿಂದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಕೆ.ಎಲ್. ಪಾಟೀಲ, ಎಚ್.ಜಿ.ಹಿರೇಗೌಡರ, ಶಂಕರಣ್ಣ ಮುನವಳ್ಳಿ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹನುಮಾನಸಿಂಗ್ ಜಮಾದಾರ ಅವರನ್ನು ಸನ್ಮಾನಿಸಲಾಯಿತು.ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಏಕನಾಥ ನಾಗನೂರ, ಬಸು ತಿರ್ಲಾಪೂರ, ಮೋಹನ ದುರಗಣ್ಣವರ, ಪ್ರಭು ದಂಡಾವತಿಮಠ, ಶಶಿ ಪಾಟೀಲ, ಪ್ರಕಾಶ ಬೊಮ್ಮನಹಳ್ಳಿ, ರಂಗನಗೌಡ ಓದುಗೌಡರ, ಎಂ.ಆರ್. ಪಾಟೀಲ, ಬಸಲಿಂಗಪ್ಪ ಮುಂಡರಗಿ ಸೇರಿದಂತೆ ಅನೇಕರು ಇದ್ದರು.
ನಿವೃತ್ತ ಪ್ರಾಚಾರ್ಯ ಅನಿಲ್ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಗೌಡ ಎಚ್.ಪಾಟೀಲ ಸ್ವಾಗತಿಸಿದರು. ಮಧುಸೂದನ ಪುಣೇಕರ, ಆನಂದ ಪೋತ್ನಿಸ್ ಪರಿಚಯಿಸಿದರು. ಜಿ.ಕೆ. ಆದಪ್ಪಗೌಡರ ವಂದಿಸಿದರು.ಜನರ ಕಲ್ಯಾಣಕ್ಕಾಗಿ ಸಹಕಾರ ಕ್ಷೇತ್ರ ವಿಸ್ತರಿಸುವಲ್ಲಿ ಸಹಕಾರಿಗಳು ಧೈರ್ಯದಿಂದ ಹೊಸ ವಾತಾವರಣ ನಿರ್ಮಿಸಬೇಕಿದೆ.ಯಾರಿಗೆ ಹಣಕಾಸಿನ ಅವಶ್ಯವಿದೆ, ಅಗತ್ಯವಿದ್ದವರನ್ನು ಹುಡುಕಿಕೊಂಡು ಸಾಲ ಕೊಡುವಂತಾಗಲು ಸಹಕಾರಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.