ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಕ್ಕಿ ದೊರಕಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳಿ ವಿರಾಜಪೇಟೆ ಫೆಡರೇಶನ್ ಸಂಸ್ಥೆಯು ತನ್ನ ಬ್ರಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ ವಿರಾಜಪೇಟೆ ಫೆಡರೇಶನ್ ಸಂಸ್ಥೆಯು ನಗರದ ದಖ್ಖನಿ ಮೊಹಲ್ಲದಲ್ಲಿರುವ ಅಕ್ಕಿ ಗಿರಣಿಯಲ್ಲಿ ‘ಫೆಡರೇಶನ್ ಬ್ರಾಂಡ್ ಅಕ್ಕಿ’ ಬಿಡುಗಡೆ ಕಾರ್ಯಕ್ರಮ ನಡೆಯಿತು.ಬ್ರಾಂಡ್ ಅಕ್ಕಿಯ 25 ಕೆ.ಜಿ. ಚೀಲವನ್ನು ಗ್ರಾಹಕರಿಗೆ ಹಸ್ತಾಂತರ ಮಾಡುವ ಮೂಲಕ ಬಿಡುಗಡೆಗೊಳಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ ವಿರಾಜಪೇಟೆ ಫೆಡರೇಶನ್ ಅಧ್ಯಕ್ಷ ವಾಟೇರಿರ ಪಿ. ಬೋಪಣ್ಣ, ಹಿರಿಯ ಸಹಕಾರಿಗಳು ರೈತರ ಬಾಳು ಹಸನಾನುವ ಸದುದ್ದೇಶದಿಂದ, ರೈತಾಪಿ ವರ್ಗಕ್ಕೆ ಕಡಿಮೆ ದರದಲ್ಲಿ ಕೃಷಿ ಉಪಕರಣಗಳು, ಯಂತ್ರಗಳು, ಗೊಬ್ಬರ ಮುಂತಾದ ವಸ್ತುಗಳನ್ನು ಒಂದೇ ಸೂರಿನ ಅಡಿಯಲ್ಲಿ ದೊರಕುವಂತೆ ಮಾಡಿದ್ದಾರೆ. ಇದೀಗ ಕೊಡಗು ಜಿಲ್ಲೆಯಲ್ಲಿ ಬೆಳೆಯುವ ಭತ್ತವನ್ನು ಅಕ್ಕಿಯಾಗಿಸಿ ನಾಡಿನ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ವಿತರಿಸಲು ಮುಂದಾಗಿದೆ. ಪ್ರಯೋಗಿಕವಾಗಿ 10 ಕೆ.ಜಿ. ಮತ್ತು 25 ಕೆ.ಜಿ. ತೂಕದ ಚೀಲದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ ಎಂದರು.
ರಾಜ್ಯ ಸರ್ಕಾರವು ನೀಡುತ್ತಿರುವ ಬೆಂಬಲ ಬೆಲೆಗಿಂತ ಅಲ್ಪ ಮೊತ್ತ ಹೆಚ್ಚಿಸಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡಲಾಗುತ್ತಿದೆ. ರೈತರಿಂದ ರೈತರಿಗೆ ಎನ್ನುವ ಧ್ಯೇಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡುವ ಕೇಂದ್ರ ಸ್ಥಾಪಿಸಿ, ಮಾರುಕಟ್ಟೆ ದರಕ್ಕಿಂತ ಉತ್ತಮ ಬೆಲೆ ನೀಡುವ ಕಾರ್ಯಕ್ಕೆ ಮುಂದಾಗುತ್ತೇವೆ. ಬ್ರಾಂಡ್ ಅಕ್ಕಿಯು ನಮ್ಮ ಅಕ್ಕಿ ಗಿರಣಿಯಲ್ಲಿ ಮಾತ್ರ ದೊರಕುವುದರಿಂದ ಗ್ರಾಹಕರು ನೇರವಾಗಿ ಬಂದು ಅಕ್ಕಿ ಚೀಲ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳಿ ವಿರಾಜಪೇಟೆ ಫೆಡರೇಶನ್ ಉಪಾಧ್ಯಕ್ಷ ತಾತಂಡ ಎಂ.ಕಾವೇರಪ್ಪ, ನಿರ್ದೇಶಕರಾದ ಕಂಜಿತಂಡ ಮಂದಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಮುಲ್ಲೇಂಗಡ ಎಂ. ಕುಟ್ಟಪ್ಪ, ಚೇನಂಡ ಗಿರೀಶ್ ಪೂಣಚ್ಚ, ಮಾಚಿಮಂಡ ಬಿ.ವಸಂತ, ಕುಂಬೇರ ಮನು ಕುಮಾರ್, ಮೂಕೊಂಡ ಪಿ.ಸುಬ್ರಮಣಿ, ಕೆ.ಆರ್. ವಿನೋದ್, ಅಂಜಪರವಂಡ ಎಂ. ಮಂದಣ್ಣ, ಕೂತಂಡ ಬಿ.ಸಚಿನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕರ್ತಚ್ಚೀರ ಬಿ.ಲತಾ, ಪುಟ್ಟಿಚಂಡ ವೀಣಾ ಮಹೇಶ್, ಎಚ್.ಎನ್. ಶೇಖರ್ ಮತ್ತು ಎಚ್.ಎ. ಆನಂದ ಹಾಗೂ ವ್ಯವಸ್ಥಾಪಕರಾದ ಕೆ.ಎಂ., ಚಂದ್ರಕಾಂತ್, ಮುಖೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.