ವಧು-ವರರ ಶೋಧನೆಗೆ ವಿಶ್ವಗುರು ವೇದಿಕೆ

| Published : Jan 10 2025, 12:46 AM IST

ಸಾರಾಂಶ

ಇಂದಿನ ದಿನಮಾನಗಳಲ್ಲಿ ಪಾಲಕರಿಗೆ ವಧು-ವರರನ್ನು ಹುಡಕುವದು ಕಷ್ಟಕರವಾಗಿದೆ. ಮತ್ತು ದಿನನಿತ್ಯ ಸಾವಿರಾರು ಹಣ ಖರ್ಚುಮಾಡಿ ಊರಿಂದ ಊರಿಗೆ ವಧು-ವರರ ಶೋಧನೆಗೆ ಹೋಗುತ್ತಿರುವದು ಸಾಮಾನ್ಯವಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಇಂದಿನ ದಿನಮಾನಗಳಲ್ಲಿ ಪಾಲಕರಿಗೆ ವಧು-ವರರನ್ನು ಹುಡಕುವದು ಕಷ್ಟಕರವಾಗಿದೆ. ಮತ್ತು ದಿನನಿತ್ಯ ಸಾವಿರಾರು ಹಣ ಖರ್ಚುಮಾಡಿ ಊರಿಂದ ಊರಿಗೆ ವಧು-ವರರ ಶೋಧನೆಗೆ ಹೋಗುತ್ತಿರುವದು ಸಾಮಾನ್ಯವಾಗಿದೆ. ಇದರ ಮಧ್ಯೆ ಮದ್ಯವರ್ತಿಗಳು ಇದನ್ನು ಉದ್ಯೋಗವಾಗಿ ಮಾಡಿಕೊಂಡಿರುವುದು ಪಾಲಕರಿಗೆ ತಲೆನೋವಾಗಿದೆ ಎಂದು ಗೋಕಾಕದ ನಿವೃತ್ತ ಸೈನಿಕ ವಿಶ್ವಗುರು ವಧು-ವರ ಮಾಹಿತಿ ಕೇಂದ್ರದ ಮುಖ್ಯ ಕಚೇರಿ ಅಧ್ಯಕ್ಷ ಪ್ರಕಾಶ ಕರೆಪ್ಪಗೋಳ ಹೇಳಿದರು.

ನಗರದ ಗವಳಿಗಲ್ಲಿಯಲ್ಲಿ ವಿಶ್ವಗುರು ವಧು-ವರರ ಮಾಹಿತಿ ಕೇಂದ್ರದ ಶಾಖಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿಗೊಂದು ವಧು-ವರರ ವೇದಿಕೆಯಾಗಿರುವುದರಿಂದ ಸಣ್ಣ ಧರ್ಮಿಯರ ವಧು ವರರ ಶೋಧನೆ ಕಷ್ಟದಾಯಕವಾಗಿದೆ. ಆದ್ದರಿಂದ ವಿಶ್ವಗುರು ವಧು-ವರರ ಮಾಹಿತಿ ಕೇಂದ್ರದಲ್ಲಿ ಎಲ್ಲ ಸಮಾಜದ ವಧು-ವರರ ಮಾಹಿತಿ ಸಂಗ್ರಹಿಸಿ ಅವರ ವಿದ್ಯಾರ್ಹತೆ ವಯಸ್ಸು ಉದ್ಯೋಗಕನುಸಾರವಾಗಿ ಅವರವರ ವಾಟ್ಸಪ್ ಗ್ರೂಪಿಗೆ ಮಾಹಿತಿ ನೀಡಲಾಗುವುದು ಇದರಿಂದ ಪಾಲಕರಿಗೆ ವಧು ವರರಿಗೆ ಬಹಳಷ್ಟು ಅನುಕೂಲಕರವಾಗಿದೆ ಎಂದು ಹೇಳಿದರು. ಸೇವಾ ಮನೋಭಾವನೆಯಿಂದ ಮತ್ತು ಯಾವುದೇ ಆಸೆ ಆಮಿಷಗಳಿಗೆ ಅವಕಾಶವಿಲ್ಲದೆ ಈ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ವಿ.ಪ ಮಾಜಿ ಸದಸ್ಯ ಜಿ.ಎಸ್ ನ್ಯಾಮಗೌಡ ಹಾಗೂ ಮುಖಂಡ ಉಮೇಶ ಮಹಾಬಳಶೆಟ್ಟಿ ಮಾಹಿತಿ ಕೇಂದ್ರದ ಗಣಕಯಂತ್ರವನ್ನು ಉದ್ಘಾಟಿಸಿದರು. ಜಮಖಂಡಿ ಶಾಖಾ ಅಧ್ಯಕ್ಷ ಬಸವರಾಜ ಬಳಗಾರ ಮಾತನಾಡಿ, ಉಪ ಪಂಗಡಗಳ ವಧು-ವರರ ಮಾಹಿತಿ ಮಾರ್ಗದರ್ಶಿ ಕೇಂದ್ರವನ್ನು ಆರಂಭಿಸಲಾಗಿದ್ದು, ಇಲ್ಲಿ ವಧು-ವರರ ಮಾಹಿತಿ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಲಾಗುತಿದೆ. ಹೆಚ್ಚಿನ ಮಾಹಿತಿಗೆ ಶ್ರೀವಿಶ್ವಗುರು ವಧು-ವರರ ಮಾಹಿತಿ ಕೇಂದ್ರಕ್ಕೆ ಸಂಪರ್ಕಿಸಬೇಕು ಎಂದು ತಿಳಿಸಿದರು. ಮುತ್ತಿನಕಂತಿ ಹಿರೇಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ಓಲೇಮಠದ ಶ್ರೀ ಆನಂದ ದೇವರು ಜಕನೂರ- ಕುಂಚನೂರ ಕಮರಿಮಠದ ಶ್ರೀ ಸಿದ್ದಲಿಂಗೇಶ್ವರ ಶ್ರೀಗಳು ಆಲಗೂರ ದರಿದೇವರಮಠದ ಶಾಂತಮೂರ್ತಿ ಶ್ರೀ ಲಕ್ಷ್ಮಣ ಮುತ್ಯಾ ಬಸವರಾಜ ಶಾಸ್ತ್ರಿಗಳು, ಲಿಂಗರಾಜ ಪಾಟೀಲ, ಪ್ರಕಾಶ ಪಾಟೀಲ, ಸದಾನಂದ ಬಾಗೇವಾಡಿ ಕಾಡು ಗಡಾದ, ಎಸ್.ಬಿ.ಜಾಮಗೊಂಡ, ಮಹೇಶ ಬಾಂಗಿ ಇತರರು ಇದ್ದರು. ಸುನೀತಾ ಬಳಗಾರ ಸ್ವಾಗತಿಸಿ, ಶಿವಾನಂದ ಕೊಣ್ಣೂರ ವಂದಿಸಿದರು.