ಸಾರಾಂಶ
ಗದಗ: ವಿಶ್ವಕರ್ಮರು ತಮ್ಮ ಕುಲಕಸಬನ್ನು ಆಧುನಿಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನರಗುಂದ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಲಕ್ಕುಂಡಿ ಗ್ರಾಮದ ಕಾಳಿಕಾ ಕಮ್ಮಟೇಶ್ವರ ಸೇವಾ ಟ್ರಸ್ಟ್ ಕಮೀಟಿಯ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶದ ಕಲೆ,ಸಂಸ್ಕ್ರತಿ, ಪರಂಪರೆಯ ಉಳಿವಿಗಾಗಿ ವಿಶ್ವಕರ್ಮರ ಪಾತ್ರ ಮಹತ್ವದಾಗಿದೆ. ಇದನ್ನು ಅರಿತ ಮೋದಿಯವರು ಕೇಂದ್ರ ಸರ್ಕಾರ ದೇಶದ 18 ಕುಲ ಕಸುಬುದಾರ ವಿಶ್ವಕರ್ಮರ ಆರ್ಥಿಕ ಬೆಳವಣಿಗೆಗೆ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ. ಆಧುನಿಕತೆಯ ಉಪಕರಣ ತಯಾರಿಸಲು ಉದ್ಯೋಗವನ್ನು ಉದ್ಯೋಮವನ್ನಾಗಿ ರೂಪಿಸಲು ಅಧಿಕ ಮಟ್ಟದ ಸಾಲ ಸೌಲಭ್ಯ ಒದಗಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ವಿಶ್ವಕರ್ಮರು ಇಲ್ಲದ ಗ್ರಾಮ ಬಹುತೇಕ ನಮ್ಮ ದೇಶದಲ್ಲಿಯೇ ಇಲ್ಲ. ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುವ ಅವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ಜಾರಿಗೆ ತಂದರೂ ಸಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ಯುವಕರು ಗಮನ ಹರಿಸಬೇಕು. ಕಲ್ಯಾಣ ಮಂಟಪ ನಿರ್ಮಾಣಕ್ಕೆ ನಿವೇಶನ ಬೇಡಿಕೆ ಇಟ್ಟಿದ್ದು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ಮಾತನಾಡಿ, ಕಬ್ಬಿಣ, ಕಲ್ಲು ಕಟ್ಟಿಗೆ, ಮಣ್ಣಿನಲ್ಲಿ ತಮ್ಮ ಕೌಶಲ್ಯದಿಂದ ಹಲವಾರು ಕಲಾಕೃತಿ ತಯಾರಿಸಿ ತಮ್ಮ ಜೀವನೋಪಾಯ ಸಾಗಿಸುತ್ತಿದ್ದಾರೆ, ಶ್ರಮಜೀವಿಗಳಾಗಿರುವ ಇವರು ಸಮಾಜದಲ್ಲಿ ಉತ್ತಮ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾರೆ. ಇವರು ಆರ್ಥಿಕವಾಗಿ ಹಿಂದುಳಿದವರಿದ್ದು, ಇಲ್ಲಿಯ 70 ಕುಟುಂಬಗಳಿಗೆ ಅವರು ತಯಾರಿಸಿರುವ ಉಪಕರಣಗಳ ಸಂರಕ್ಷಣೆಗಾಗಿ ಸರ್ಕಾರ ಬೃಹತ್ ಸೆಡ್ಡು ನಿರ್ಮಾಣ ಮಾಡಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಲ್ಲಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು, ನಿವೃತ್ತ ಶಿಕ್ಷಕ ವಿ.ಐ. ಬಡಿಗೇರ ಮಾತನಾಡಿದರು. ಸೇವೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಜರುಗಿತು.ಈರಣ್ಣ ಕಂಚಗಾರ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಬಿಜೆಪಿ ಮುಖಂಡರಾದ ವಸಂತ ಮೇಟಿ, ಪ್ರದೀಪ ನವಲಗುಂದ, ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಬಸವರಾಜ ಯಲಿಶಿರುಂದ, ವಿರುಪಾಕ್ಷಪ್ಪ ಬೆಟಗೇರಿ, ಅಮೀನಾ ಹುಬ್ಬಳ್ಳಿ, ರಜೀಯಾಬೇಗಂ ತಹಸೀಲ್ದಾರ್, ಫಕ್ಕೀರಮ್ಮ ಬೇಲೇರಿ, ಕುಬೇರಪ್ಪ ಕಮ್ಮಾರ, ಸುಮಾ ಬಡಿಗೇರ ಇದ್ದರು. ಮಲ್ಲಿಕಾರ್ಜುನ ಬಡಿಗೇರ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯದರ್ಶಿ ದೇವೆಂದ್ರಪ್ಪ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಅರಹುಣಶಿ ನಿರೂಪಿಸಿದರು. ಗೋವಿಂದಪ್ಪ ಬಡಿಗೇರ ವಂದಿಸಿದರು.