ಆಳಂದ ನಾಡ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

| Published : Feb 28 2024, 02:32 AM IST

ಸಾರಾಂಶ

ಅಟಲ್‌ ಜಿ ಜನಸ್ಮೇಹಿ ಕೇಂದ್ರದಲ್ಲಿನ ಕಡತಗಳ ಪರಿಶೀಲನೆ, ಕೆಲ ತಿಂಗಳ ಹಿಂದಷ್ಟೇ ಕಂದಾಯ ನಿರೀಕ್ಷರೊಬ್ಬರ ಮೇಲೆ ನಡೆದ ದಾಳಿಯ ಮರೆ ಮಾಚುವ ಮುನ್ನವೇ ಈಗ ಮತ್ತೊಮ್ಮೆ ಲೋಕಾಯುಕ್ತ ಅಧಿಕಾರಿಗಳು ಹಠಾತ ಭೇಟಿ ನೀಡಿದ ಹಿನ್ನೆಲೆ ಆಡಳಿತ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಹಸವಾಗಿದೆ.

ಕನ್ನಡಪ್ರಭ ವಾರ್ತೆ ಆಳಂದ

ತಾಲೂಕು ಆಡಳಿತ ಸೌಧದಲ್ಲಿರುವ ನಾಡ ಕಚೇರಿಗೆ ಬೀದರ್ ಲೋಕಾಯುಕ್ತ ಅಧಿಕಾರಿಗಳು ಹಠಾತ್‌ ಭೇಟಿ ನೀಡಿ ರಾತ್ರಿ ಅಟಲ್‌ ಜಿ ಜನಸ್ಮೇಹಿ ಕೇಂದ್ರದಲ್ಲಿನ ಕಡತಗಳನ್ನು ಪರಿಶೀಲನೆ ಕೈಗೆತ್ತಿಕೊಂಡಿದ್ದರು.

ಕೆಲ ತಿಂಗಳ ಹಿಂದಷ್ಟೇ ಕಂದಾಯ ನಿರೀಕ್ಷರೊಬ್ಬರ ಮೇಲೆ ನಡೆದ ದಾಳಿಯ ಮರೆ ಮಾಚುವ ಮುನ್ನವೇ ಈಗ ಮತ್ತೊಮ್ಮೆ ಲೋಕಾಯುಕ್ತ ಅಧಿಕಾರಿಗಳು ಹಠಾತ ಭೇಟಿ ನೀಡಿದ ಹಿನ್ನೆಲೆ ಆಡಳಿತ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಹಸವಾಗಿದೆ.

ಬೀದರ್ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ ರಾಠೋಡ ನೇತೃತ್ವದಲ್ಲಿ ಎಚ್‍ಸಿ ವಿಜಯಶೇಖರ, ಪಿಸಿ ಅಡೆಪ್ಪ ಮತ್ತು ಎಪಿಸಿ ಜಗದೀಶ ಒಳಗೊಂಡ ತಂಡವು ಆಡಳಿತಸೌಧನಲ್ಲಿರುವ ನಾಡ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದೆ. ಅರ್ಜಿಗೆ ಸಂಬಂಧಿತ ಪಡೆಯುವ ಶುಲ್ಕದ ಕುರಿತು ಹಾಗೂ ವಿಲೇವಾರಿ ಮಾಹಿತಿ ಕಲೆ ಹಾಕಲಾಗಿದೆ. ಈ ಕುರಿತು ಇನ್ಸ್‌ಪೆಕ್ಟರ್‌ ರಾಠೋಡ ಕಲಬುರಗಿ ಕಚೇರಿಯಿಂದ ಸಂಬಂಧಿತ ವಿವರಣೆ ನೀಡಲಾಗುತ್ತದೆ ಎಂದಷ್ಟೇ ಮಾಧ್ಯಮಕ್ಕೆ ಹೇಳಿದರು.

ನಾಡ ತಹಸೀಲ್ದಾರ್‌ ಶ್ರೀನಿವಾಸ್ ಕುಲಕರ್ಣಿ ಇದ್ದರು. ಉಪನೋಂದಣಾಧಿಕಾರಿ ಕಚೇರಿಯ ಎರಡರಲ್ಲೂ ಪರಿಶೀಲನೆ ನಡೆಸಿದ ಅಧಿಕಾರಿಗಳನ್ನು ಸಿಬ್ಬಂದಿ ಸಹಕರಿಸುತ್ತಿದ್ದರು.

ತಹಸೀಲ್ದಾರ್‌ ಕಚೇರಿಯಲ್ಲಿ ಸಾರ್ವಜನಿಕರು ಸಲ್ಲಿಸಿದ ಅರ್ಜಿ ವಿಲೇವಾರಿಯಾಗಲು ಸಹ ಸಂಬಂಧಿತ ಕೆಳಹಂತದ ಕೆಲವು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರಿಂದ ವರದಿ ಸಲ್ಲಿಸಲು ವಿಳಂಬ ಮಾಡುತ್ತಿದ್ದರಿಂದ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದರಿಂದ ಸಕಾಲಕ್ಕೆ ದಾಖಲೆ ದೊರೆಯದೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗತೊಡಗಿದೆ.

ಈ ಕುರಿತು ತಹಸೀಲ್ದಾರ್‌ ಮುಂಜಾಗೃತೆ ಕ್ರಮವಹಿಸಿ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಸಕಾಲಕ್ಕೆ ದಾಖಲೆ ಒದಗಿಸುವ ಕಾರ್ಯ ಕೈಗೊಳ್ಳುವರೆ ಎಂದು ಸಾರ್ವಜನಿಕರು ಎದುರು ನೋಡುವಂತಾಗಿದೆ.