ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಯುವಜನತೆಯನ್ನು ವಿವೇಕಾನಂದರು ಅಪೇಕ್ಷಿಸಿದ್ದರು. ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು ಎಂದು ಲಕ್ಷ್ಮೀ ಎಸ್ಟೇಟ್ ಮಾಲೀಕರಾದ ಕೆ.ಪಿ. ಉತ್ತಪ್ಪ ಅಭಿಪ್ರಾಯ ಪಟ್ಟರು.ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದಿವಂಗತ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಸ್ಮರಣಾರ್ಥ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಾಧನೆ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಉದ್ಘಾಟನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿವೇಕಾನಂದರು ಅದ್ಭುತ ದೇಶಭಕ್ತ, ಚಿಂತಕ, ಧಾರ್ಮಿಕ ನಾಯಕ. ಮಾನವೀಯರಾಗಿ ಬದುಕುವುದನ್ನು ಕಲಿಸಿದ, ಆತ್ಮ ಜಾಗೃತಿ ಹೊಂದುವಂತೆ ಬೋಧಿಸಿದ ಸಂತ. ಅವರ ಕೊಲಂಬೊ ದಿಂದ ಅಲ್ಮೇರ ಪುಸ್ತಕವನ್ನು ಯುವ ಜನರು ಹೆಚ್ಚಾಗಿ ಓದಬೇಕು . ಇದರಿಂದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆ, ಅವರು ನಡೆಸಿದಂತಹ ಸಮಾಜ ಸೇವೆಯ ಕಾರ್ಯಗಳು ಯುವ ಸಮೂಹಕ್ಕೆ ತಿಳಿಯಲು ಸಾಧ್ಯ. ವಿವೇಕಾನಂದರ ಜೀವನ ಮತ್ತು ಸಾಧನೆ ಯುವಜನತೆಗೆ ಸದಾ ಸ್ಪೂರ್ತಿದಾಯಕವಾದಂತಹದ್ದು. ದೇಶದ ಮೇಲೆ ಅವರಿಗೆ ಇದ್ದಂತಹ ಅಭಿಮಾನ, ದೇಶ ಪ್ರೇಮ ಎಲ್ಲವನ್ನು ಅರಿತು ಯುವ ಜನರು ಸ್ವಾಮಿ ವಿವೇಕಾನಂದರ ಕನಸಿನ ಭಾರತದ ನಿರ್ಮಾಣದ ಕಡೆಗೆ ಸಾಗಬೇಕು. ದೇವರು ಎಲ್ಲವನ್ನು ಸುಂದರವಾಗಿ ನಿರ್ಮಿಸಿದ್ದಾನೆ. ಆದ್ದರಿಂದ ಪ್ರತಿಯೊಬ್ಬರು ದೇವರ ಮೇಲೆ ಧನ್ಯತಾಭಾವವನ್ನು ಹೊಂದಿ ದೇಶವು ಹೆಮ್ಮೆ ಪಡುವಂತಹ ಪ್ರಜೆಯಾಗಿ ಬಾಳಬೇಕು ಎಂದರು.ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಪರಹಿತಾನಂದರು ಮಾತನಾಡಿ, ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹವಾದದ್ದು. ಪೊನ್ನಂಪೇಟೆ ಶಾರದಾ ಆಶ್ರಮ 99 ವಸಂತಗಳನ್ನು ಪೂರ್ಣಗೊಳಿಸಿದ್ದು. ಈ ಆಶ್ರಮ ನಿರಂತರವಾಗಿ ವಿವೇಕಾನಂದರ ಕನಸಿನಂತೆ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ವಿವೇಕಾನಂದರ ಕನಸು ನನಸಾಗಿಸಲು ಭಾರತೀಯರು ತಮ್ಮಲ್ಲಿ ಮುಖ್ಯವಾಗಿ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರೊಂದಿಗೆ ಇತರರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡಯದೆ ಅವರ ಯಶಸನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು. ಪ್ರತಿಯೊಬ್ಬರಲ್ಲು ದೇವರು ಇದ್ದಾನೆ. ಅದರಿಂದ ಈ ಆಧ್ಯಾತ್ಮಿಕ ಶಕ್ತಿಯನ್ನು ಅರಿತು ಸರ್ವರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗೆ, ಸಮಾಜಕ್ಕೆ ಸದಾ ಋಣಿಗಳಾಗಿರಬೇಕು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಲ್ದಾನ , ಸಮಾಜದ ಕೆಡುಕು ಸ್ವರೂಪ ಬಿಡಿಸುವಂತಹ ಕಾರ್ಯವನ್ನು ಹಲವಾರು ಮಹನೀಯರು ಮಾಡಿದ್ದಾರೆ. ಇಂತಹ ಮಹನೀಯರಲ್ಲಿ ಅತ್ಯಂತ ಪ್ರಮುಖರಂದರೆ ಸ್ವಾಮಿ ವಿವೇಕಾನಂದ ಅವರಿಲ್ಲಿ ಜನಿಸಿದ ಉದ್ದೇಶವೇ ಸಮಾಜವನ್ನು ಸರಿಪಡಿಸುವುದೆಂದನಿಸುತ್ತದೆ. ಅವರಿಗೆ ಕೇವಲ ಒಂದು ಮನುಷ್ಯರಲ್ಲ ಮನುಷ್ಯ ಕುಲ ಅವರು ತಮ್ಮ ಜೀವನದಲ್ಲಿ ಮನುಷ್ಯತ್ವದ ಬಗ್ಗೆ ಬೋಧಿಸಿದಷ್ಟೇ ಅಲ್ಲ ಅದನ್ನು ಹೇಗೆ ಅಳವಡಿಸಿಕೊಂಡು ಬಾಳಬೇಕೆಂದು ತೋರಿಸಿದಂತವರು. ಆದ್ದರಿಂದ ಇಷ್ಟು ವರ್ಷಗಳು ಬಂದರೂ ಅವರ ಜೀವನ ಬೋಧನೆ ಪ್ರಸ್ತುತವೆನಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರೊ. ದಂಬೆಕೋಡಿ ಪಿ.ಎ. ಸುಶೀಲಾ ಹಾಗೂ ಸರ್ಕಾರಿ ಪಿ.ಯು ಕಾಲೇಜು ಪಾಲಿಬೆಟ್ಟದ ನಿವೃತ ಉಪನ್ಯಾಸಕರಾದ ಡಾ.ಕೆ.ಎಂ. ಭವಾನಿ ಅವರನ್ನು ಅವರ ವಿಶಿಷ್ಟ ಸೇವೆಗಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ನಂತರ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಟ್ಟು 29 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ನಡೆಸಲಾಯಿತು. ಆಂಗ್ಲ ಭಾಷಾ ವಿಭಾಗದಲ್ಲಿ ಪ್ರಥಮ ಸ್ಥಾನ ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಎನ್.ಬಿ. ಮುತ್ತಮ್ಮ, ದ್ವಿತೀಯ ಸ್ಥಾನ ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನ ಕವನ ಕಾವೇರಮ್ಮ, ತೃತೀಯ ಸ್ಥಾನವನ್ನು ಸೈಂಟ್ ಅನ್ಸ್ ಪದವಿ ಕಾಲೇಜಿನ ಅಮಾನತ್ ಹಾಗೂ ನಾಪೋಕ್ಲು ಮರ್ಕಜ್ಹ್ ಕಾಲೇಜಿನ ಮುನ್ಶೀನಾ ಪಡೆದುಕೊಂಡರು. ಕನ್ನಡ ಭಾಷಾ ವಿಭಾಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ಬಿ.ಎಸ್ ರಕ್ಷಿತಾ ಪ್ರಥಮ ಸ್ಥಾನ , ಸೈಂಟ್ ಅನ್ಸ್ ಪದವಿ ಕಾಲೇಜಿನ ಟಿ.ಹೆಚ್ ಧನ್ಯ ದ್ವಿತೀಯ ಸ್ಥಾನ, ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ಎಚ್.ಎನ್ ಶೃತಿ ತೃತೀಯ ಸ್ಥಾನ ಪಡೆದು ಕೊಂಡರು. ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯ ಓವರಾಲ್ ಚಾಂಪಿಯನ್ ಪ್ರಥಮ ಟ್ರೋಫಿಯನ್ನು ವಿರಾಜಪೇಟೆ ಕಾವೇರಿ ಕಾಲೇಜು ಪಡೆದು ಕೊಂಡರೆ, ದ್ವಿತೀಯ ಸ್ಥಾನವನ್ನು ಸೈಂಟ್ ಆನ್ಸ್ ಪದವಿ ಕಾಲೇಜು ಪಡೆದುಕೊಂಡಿತು. ತೀರ್ಪುಗಾರರಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ರೇವತಿ ಹಾಗೂ ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಸುಜಾತ ಆಗಮಿಸಿದ್ದರು.ಈ ಸಂದರ್ಭ ಕಾವೇರಿ ವಿದ್ಯಾ ಸಂಸ್ಥೆಯು ನಿರ್ದೇಶಕರಾದ ಪಿ.ಟಿ. ಸುಭಾಶ್, ಕೆ.ಪಿ.ಅಚ್ಚಯ್ಯ, ಕಾರ್ಯಕ್ರಮದ ಸಂಚಾಲಕರಾದ ಡಾ. ಮುತ್ತಮ್ಮ, ಉಪನ್ಯಾಸಕರಾದ ಡಾ. ವೀಣಾ, ಅಕ್ಷಿತಾ, ನಿರ್ಮಿತ, ಕೂತಂಡ ವಾಣಿ ಉತ್ತಪ್ಪ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.