ಕನ್ನಡಪ್ರಭ ವಾರ್ತೆ ಹೊಸಕೋಟೆ
ರೋಗದಿಂದ ಮುಕ್ತಿ ನೀಡಿ ಆರೋಗ್ಯವಂತ ಹೊಸಕೋಟೆ ನಿರ್ಮಾಣಕ್ಕೆ ನಗರದ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ತನ್ನದೇ ಆದ ಕೊಡುಗೆ ನೀಡಿದ್ದು, ಇದಕ್ಕೆ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರ ಸಹಕಾರ ಅಪಾರ ಎಂದು ವಿವೇಕಾನಂದ ಯೋಗ ಶಿಕ್ಷಣ ಸಮಿತಿಯ ಮಹಾ ಪೋಷಕ ಡಾ.ಸಿ.ಜಯರಾಜ್ ತಿಳಿಸಿದರು.ನಗರದ ವಿವೇಕಾನಂದ ಶಾಲಾ ಆವರಣದಲ್ಲಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ವತಿಯಿಂದ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ಶೇಕಡ 30ಕ್ಕೂ ಹೆಚ್ಚು ಮಧುಮೇಹ ಹಾಗೂ ರಕ್ತದೊತ್ತಡದಿಂದ ಜನ ರೋಗಗಳಿಗೆ ತುತ್ತಾಗುತಿದ್ದಾರೆ, ಒತ್ತಡದ ಜೀವನ ಶೈಲಿ ಹಾಗೂ ಇಂದಿನ ಆಹಾರ ಪದ್ಧತಿಯೇ ಇದಕ್ಕೆ ಕಾರಣವಾಗಿದ್ದು, ಪ್ರತಿ ದಿನ ಕನಿಷ್ಠ 1 ಗಂಟೆಗಳ ಕಾಲ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆ ದಿನವೆಲ್ಲಾ ಲವಲವಿಕೆಯಿಂದ ಕಾಲ ಕಳೆಯಬಹುದಾಗಿದೆ, ಸಣ್ಣ ವಯಸ್ಸಿನಿಂದ ವಯಸ್ಕರವರೆಗೆ ಎಲ್ಲಾ ವರ್ಗದ ಜನ ಯೋಗಾಭ್ಯಾಸ ಮಾಡಬಾಹುದಾದ ದಿವ್ಯ ಕ್ರಿಯೆಯಾಗಿದೆ ಎಂದರು.ವಿವೇಕಾನಂದ ಶಾಲೆಯ ಕಾರ್ಯದರ್ಶಿ ನಾಗರಾಜ್ ಗುಪ್ತಾ ಮಾತನಾಡಿ, ಯೋಗ ಸಮಿತಿ ಸ್ಥಾಪಿಸಲು ಅನೇಕ ಮಹನೀಯರ ಶ್ರಮ ಇದೆ, ನೂರಾರು ಯೋಗ ಬಂಧುಗಳು ಯೋಗ ಶಿಕ್ಷಕರಾಗಿ ತಮ್ಮದೇ ಆದ ಸೇವೆಯನ್ನು ಸಮಾಜಕ್ಕೆ ನೀಡುತ್ತಾ ರೋಗಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದರು.
ವಿಎಚ್ಪಿ ಬೆಂಗ್ರಾ ಜಿಲ್ಲಾಧ್ಯಕ್ಷ ಜಮಿನಿ ಸತೀಶ್ ಮಾತನಾಡಿ, ಕೇವಲ ನಾಲ್ಕು ಜನರಿಂದ ಶುರುವಾದ ಈ ವಿವೇಕಾನಂದ ಯೋಗ ಸಮಿತಿ ಇಂದು 40ಕ್ಕೂ ಹೆಚ್ಚು ಶಾಖೆಗಳನ್ನು ಹೊಸಕೋಟೆ ಹೊರತುಪಡಿಸಿ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ, 300ಕ್ಕೂ ಹೆಚ್ಚು ಯೋಗ ಶಿಕ್ಷಕರು ಪ್ರತಿ ದಿನ ಸಾವಿರಾರು ಯೋಗಬಂಧುಗಳಿಗೆ ಉಚಿತವಾಗಿ ಯೋಗ ಕಲಿಸಿಕೊಡುತ್ತಿದ್ದು ನಮ್ಮ ಹೊಸಕೋಟೆಯ ಹೆಮ್ಮೆಯಾಗಿದೆ ಎಂದು ತಿಳಿಸಿದರು. ಋಷಿ ಮುನಿಗಳಿಂದ ಬಳುವಳಿಯಾಗಿ ಬಂದ ಈ ಯೋಗವನ್ನು 2015ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜೂನ್ 21ರಂದು ಇಡೀ ವಿಶ್ವಾದ್ಯಂತ ಆಚರಣೆಗೆ ತಂದಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಖೆಗಳ ಯೋಗ ಬಂಧುಗಳು ವಿಶೇಷ ಯೋಗಾ ಭಂಗಿಗಳನ್ನು ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಆರ್ ನಾಗರಾಜ್, ಉಪಾಧ್ಯಕ್ಷ ರುಮಾಲೆ ಆಂಜಿನಪ್ಪ, ವಿವೇಕಾನಂದ ಶಾಲೆ ಕಾರ್ಯಾದರ್ಶಿ ನಾಗರಾಜ್ ಗುಪ್ತಾ, ಮುಖ್ಯಸ್ಥ ಶಂಕರ್ ಜಿ, ಯೋಗ ಶಿಕ್ಷಣ ಸಮಿತಿಯ ಚೀಮಂಡಳ್ಳಿ ಮಂಜುನಾಥ್, ಟೆಕ್ಸಿಮೊ ವೆಂಕಟೇಶ್, ಟೌನ್ ಬ್ಯಾಂಕ್ ನಿರ್ದೇಶಕಿ ಸರೋಜಮ್ಮ ಬಚ್ಚಣ್ಣ, ಸಂಪನ್ಮೂಲ ವ್ಯಕ್ತಿ ಸೋಮ ರೆಡ್ಡಿ, ಡೆಕೆತ್ಲಾನ್ ಅನುಪಮಾ ಸೇರಿ ನೂರಾರು ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.