ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ

ನಿರುದ್ಯೋಗ ಸಮಸ್ಯೆಗೆ ಸಾಂಪ್ರದಾಯಿಕ ಶಿಕ್ಷಣಕ್ಕಿಂತ ವೃತ್ತಿಯಾಧಾರಿತ ಶಿಕ್ಷಣದಲ್ಲಿ ಪರಿಹಾರವಿದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.

ಪಟ್ಟಣದ ಎಂ.ಬಿ.ಮಾದೇಗೌಡ ಪ್ಯಾರಾ ಮೆಡಿಕಲ್ ಸೈನ್ಸ್‌ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ನವ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ನಾವು ನಮ್ಮ ಜ್ಞಾನದಾಹವನ್ನು ಹಿಂಗಿಸಿಕೊಳ್ಳಬಹುದಾದರೂ ಸ್ವಯಂ ಉದ್ಯೋಗದ ಅನುಭವವಿರುವುದಿಲ್ಲ. ದೇಶದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಹೆಚ್ಚಬೇಕು. ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿಗಳು ಸಂಸ್ಕಾರ ಕಲಿಯಬೇಕು. ಸೇವಾಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪ್ಯಾರಾ ಮೆಡಿಕಲ್ ಕೋರ್ಸ್ ಮಾಡಿದವರಿಗೆ ದೇಶ ವಿದೇಶಗಳಲ್ಲೂ ಬೇಡಿಕೆಯಿದೆ. ಥಿಯರಿಗಿಂತ ವಿದ್ಯಾರ್ಥಿಗಳು ಪ್ರ್ಯಾಕ್ಟಿಕಲ್ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು. ವೈದ್ಯರಿಗಿರುವಷ್ಠೇ ಜವಾಬ್ದಾರಿ ಅರೆ ವೈದಿಕ ವೃತ್ತಿ ತರಬೇತಿ ಪಡೆದವರಿಗೂ ಇರುತ್ತದೆ. ವೈದ್ಯರ ಯಶಸ್ಸಿನ ಹಿಂದೆ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರವೂ ಇರುತ್ತದೆ. ಪ್ಯಾರಾ ಮೆಡಿಕಲ್ ಕಲಿತವರು ನೀಡುವ ವರದಿಗಳನ್ನು ಅಧರಿಸಿಯೇ ವೈದ್ಯರು ಚಿಕಿತ್ಸೆ ನಿಡುತ್ತಾರೆ. ನೀವು ನೀಡುವ ಒಂದು ತಪ್ಪು ವರದಿ ರೋಗಿಗೆ ವೈದ್ಯರು ನಿಡುವ ಚಿಕಿತ್ಸೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.


ಪಟ್ಟಣ ಪೊಲೀಸ್ ನಿರೀಕ್ಷಕಿ ಸುಮಾರಾಣಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ಆತ್ಮ ವಿಶ್ವಾಸ ಹೊಂದಬೇಕು. ವೃತ್ತಿ ಕ್ಷೇತ್ರಕ್ಕೆ ಬಂದಾಗ ಒಳಿತು-ಕೆಡುಕುಗಳ ಟೀಕೆಗಳು ಸಹಜವಾಗಿರುತ್ತವೆ. ಟೀಕೆಗಳಿಗೆ ಎದೆಗುಂದದೆ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು. ವೃತ್ತಿ ಪರ ಕೋರ್ಸುಗಳಿಗೆ ವಿಶೇಷ ಅವಕಾಶಗಳಿವೆ. ಸಮಾಜದಲ್ಲಿ ನಾವು ಉತ್ತಮ ನಾಗರೀಕರಾಗಬೇಕು. ಸಾಮಾಜಿಕ ನಿಯಮಗಳನ್ನು ಪಾಲಿಸಿ ಆರೋಗ್ಯಕರ ಅಪರಾಧ ಮುಕ್ತ ಸಮಾಜ ನಿಮಿಸಬೇಕು. ಬದುಕಿನಲ್ಲಿ ನಾವು ಅಳವಡಿಸಿಕೊಳ್ಳುವ ಶಿಸ್ತು ನಮ್ಮ ಯಶಸ್ಸಿನ ಗುಟ್ಟು ಎಂದರು.

ಸಂಸ್ಥೆಯ ಪ್ರಾಂಶುಪಾಲ ಡಾ.ಎಂ.ಬಿ.ಲೋಹಿತ್‌, ಶ್ರವಣಬೆಳಗೊಳದ ಬಾಹುಬಲಿ ಪ್ಯಾರಾ ಮೆಡಿಕಲ್ ಸ್ಕೂಲ್‌ನ ಪ್ರಾಂಶುಪಾಲೆ ಪವಿತ್ರ, ಭುವಣೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬೋರೇಗೌಡ, ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಕಾಳೇಗೌಡ, ಉಪ ಪ್ರಾಂಶುಪಾಲೆ ಡಾ.ಅಕ್ಷತಾ, ಮುಖಂಡರಾದ ಶಶಿಧರ್, ಲೋಕೇಶ್ ಗೌಡ, ಚಂದ್ರೇಗೌಡ ಮಾತನಾಡಿದರು.