ಚಳಿ, ಗಾಳಿ, ಹಿಮ, ಮಳೆಯನ್ನೂ ಲೆಕ್ಕಿಸದೆ ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ಗೌರವಾರ್ಥ ರಕ್ತದಾನ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.

ಕನಕಪುರ: ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ನಮ್ಮ ಹೆಮ್ಮೆಯ ಸೈನಿಕರ ಗೌರವಾರ್ಥ ರೋಟರಿ ಕನಕಪುರ ಹಾಗೂ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನೂರಾರು ಯುವಕರು, ಯುವತಿಯರು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಅತ್ತಿಹಳ್ಳಿ ಮಠದ ಪೂಜ್ಯ ನಿರಂಜನ ಸ್ವಾಮೀಜಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಚಳಿ, ಗಾಳಿ, ಹಿಮ, ಮಳೆಯನ್ನೂ ಲೆಕ್ಕಿಸದೆ ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರ ಗೌರವಾರ್ಥ ರಕ್ತದಾನ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು. ಪತಂಜಲಿ ಯೋಗ ಸಮಿತಿಯ ಬಾಲಕೃಷ್ಣ ಆರ್ಯ ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ನಮ್ಮ ಹೆಮ್ಮೆಯ ವೀರ ಸೈನಿಕರಿಗೆ ತಮ್ಮ ಶ್ರದ್ಧೆಯ ನಮನವನ್ನು ಸಲ್ಲಿಸಿದ್ದ ಎಲ್ಲಾ ರಕ್ತದಾನಿಗಳಿಗೂ ಧನ್ಯವಾದ ಅರ್ಪಿಸಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ನ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿ ಸಂಜೆ 5 ಗಂಟೆಯವರೆಗೂ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 182 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ರೋಟರಿ ಟ್ರಸ್ಟ್ ಅಧ್ಯಕ್ಷ ಎಂ.ಡಿ. ವಿಜಯ್ ದೇವ್, ಖಜಾಂಚಿ ಭಾನುಪ್ರಕಾಶ್, ಕನಕಪುರ ರೋಟರಿ ಅಧ್ಯಕ್ಷ ಕಾಂತರಾಜು, ಪ್ರಧಾನ ಕಾರ್ಯದರ್ಶಿ ರಂಜನ್, ಸದಸ್ಯರಾದ ರಾಮಚಂದ್ರು, ಸುರೇಂದ್ರ, ಚಂದ್ರು ಚಂದ್ರಪ್ರಭಾ, ವೆಂಕಟೇಶ್, ದೇಸಯ್ಯ, ಮಾಜಿ ಅಧ್ಯಕ್ಷ ಸಿದ್ಧರಾಜು , ಪತಂಜಲಿ ಯೋಗ ಸಮಿತಿಯ ಪ್ರದ್ಯುಮ್ನ ಆರ್ಯ, ಅಂಕಿತಾ ಪ್ರದ್ಯುಮ್ನ, ಸುಮಂತ್ ದಂಪತಿ, ಪುಟ್ಟರಾಜು, ಸೇರಿ ರೋಟರಿ ಹಾಗೂ ಪತಂಜಲಿ ಸಮಿತಿಯ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.