ಸಾರಾಂಶ
ಸಿದ್ದಾಪುರ: ಉಚಿತವಾಗಿ ವಸ್ತು ನೀಡುವ ಪ್ರಚೋದನೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರಂತದ ಸಂಗತಿ. ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯದಿಂದ ಆರ್ಥಿಕ ಸ್ಥಿತಿ ಕಂಗೆಟ್ಟಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಾಲೂಕಿನ ಬಿಳಗಿಯಲ್ಲಿಯಲ್ಲಿ ನಮೋ ಬ್ರಿಗೇಡ್ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಅವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ನೀಡಿ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ನರೇಂದ್ರ ಮೋದಿ ಸರ್ಕಾರದ ಮೊದಲಿನ ಭಾರತಕ್ಕೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನು ಜನತೆಗೆ ಮನದಟ್ಟು ಮಾಡಲು ನಮೋ ಬ್ರಿಗೇಡ್ ಕೆಲಸ ಮಾಡುತ್ತಿದೆ.
ಬೋಪೋರ್ಸ್ದಿಂದ ಹಿಡಿದು ಅಗಸ್ತಾ ವೆಸ್ಟ್ಲ್ಯಾಂಡ್ ಡೀಲ್ನಲ್ಲಿ ಕಿಕ್ ಬ್ಯಾಕ್ ಪಡೆಯುತ್ತಿದ್ದವರು ಮೋದಿಯನ್ನು ೧೦ ವರ್ಷದಿಂದ ವಿರೋಧಿಸುತ್ತಿದ್ದಾರೆ.
ಈ ದೇಶದ ಕೆಲವೇ ಕೆಲವರು ಕಾಂಗ್ರೆಸ್ಗೆ ಮತ ನೀಡಿದರೆ ನೂರಾರು ಕೋಟಿ ಜನ ಮೋದಿಯನ್ನು ಹೃದಯದಲ್ಲಿಟ್ಟು ಪ್ರೀತಿಸುತ್ತಿದ್ದಾರೆ.
ಕಳೆದ ೫೦೦ ವರ್ಷಗಳಿಂದ ಆಗದ ರಾಮಮಂದಿರ ಮೋದಿ ಅವಧಿಯಲ್ಲಿ ಆಗಿದೆ. ಮಂದಿರ ವಿರೋಧಿಸಿ ಕೋರ್ಟ್ನಲ್ಲಿ ವಾದಿಸಲು ಕಾಂಗ್ರೆಸ್ ೨೪ ವಕೀಲರನ್ನು ನೇಮಿಸಿತು.
ಅದರ ಉಸ್ತುವಾರಿ ವಹಿಸಿಕೊಂಡವರೇ ಕಪಿಲ್ ಸಿಬಲ್. ಆದರೆ ಬಿಜೆಪಿಯ ಪ್ರಯತ್ನದಿಂದ ಇಂದು ರಾಮಮಂದಿರ ನಿರ್ಮಾಣವಾಗಿದೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿ ಸಮರ್ಥ ನಾಯಕತ್ವದ ಪರಿಣಾಮದಿಂದ ರಾಜ ಮರ್ಯಾದೆ ನೀಡುತ್ತಿವೆ ಎಂದರು.
ಮುಂಬರುವ ಲೋಕಸಭಾ ಚುಣಾವಣೆಯಲ್ಲಿ ಎಲ್ಲ ಗೊಂದಲ ಬದಿಗಿಟ್ಟು ಮೋದಿ ಎಂದು ಮತ ಹಾಕಿ. ಮೋದಿ ಗೆಲ್ಲಿಸಿ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮಮಂದಿರ ಕರ ಸೇವಕರಾದ ಲಕ್ಷ್ಮಣ ಲೋಬಿ, ಶ್ರೀಧರ ಬಿಕ್ಕಳಸೆ, ಗೋಪಾಲ ತಂಗಾರುಮನೆ, ಅನಂತ ಊರತೋಟ, ಹಳಿಯಾಳದ ಉಮೇಶ ಬಸಲಿಂಗಪ್ಪ ಬೊಳಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ದೇವದಾಸ್ ಪೈ ಉಪಸ್ಥಿತರಿದ್ದರು. ಕೇಶವ್ ಮೊಗೇರ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಆದರ್ಶ ಪೈ ಬಿಳಗಿ ಸ್ವಾಗತಿಸಿದರು. ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಗಿರೀಶ ಆಲ್ಮನೆ ನಿರೂಪಿಸಿದರು.