ಕನ್ನಡಪ್ರಭ ವಾರ್ತೆ ಭದ್ರಾವತಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಎ-೨ ಪಾತ್ರ ಮುಖ್ಯವಾಗಿದ್ದು, ಮತದಾರರಿಗೆ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್ ಕರೆ ನೀಡಿದರು.

ಅವರು ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಿಎಲ್‌ಎ-೨ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಚುನಾವಣಾ ಆಯೋಗದ ಈ ಪ್ರಕ್ರಿಯೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತಿದೆ. ಮತದಾರರಪಟ್ಟಿ ಪರಿಷ್ಕರಣೆ ಹಕ್ಕನ್ನು ಸಂವಿಧಾನವೇ ಚುನಾವಣಾ ಆಯೋಗಕ್ಕೆ ನೀಡಿದ್ದು. ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂಬುದಾಗಿ ನ್ಯಾಯಾಲಯ ಆದೇಶ ನೀಡಿದೆ ಎಂದರು.

ಮತ ಚಲಾಯಿಸುವುದು ಭಾರತೀಯ ನಾಗರೀಕರ ಹಕ್ಕು. ದೇಶದ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆ ಸುರಕ್ಷತೆಗಾಗಿ ಮತದಾನ ಅತ್ಯಂತ ಅವಶ್ಯಕ. ಇದರಿಂದ ಯಾರು ವಂಚಿತರಾಗದಂತೆ ಹಾಗೂ ಹಲವಾರು ಕಾರಣಗಳಿಂದ ಎರಡು-ಮೂರು ಕ್ಷೇತ್ರಗಳಲ್ಲಿ ಹೆಸರು ನೋಂದಾಯಿತಗೊಂಡಿರುವುದು, ನಿಧನರಾದವರನ್ನು ಪಟ್ಟಿಯಿಂದ ಕೈಬಿಡದಿರುವುದು, ೧೮ ವರ್ಷ ಪೂರೈಸಿ ಮತದಾನ ಹಕ್ಕಿನ ಅರ್ಹತೆ ಪಡೆದವರ ಸೇರ್ಪಡೆ, ದೇಶಕ್ಕೆ ಮಾರಕವಾಗಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವುದು, ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯುವುದು ಸೇರಿದಂತೆ ಪ್ರಮುಖ ಜವಾಬ್ದಾರಿಯುತ ಕಾರ್ಯ ಚುನಾವಣಾ ಆಯೋಗ ನಿರ್ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯದಲ್ಲಿ ಬಿಎಲ್‌ಎ-೨ ಪಾತ್ರ ಹೆಚ್ಚಿನದ್ದಾಗಿದೆ. ಇದನ್ನು ಪಕ್ಷದ ಪ್ರತಿಯೊಬ್ಬರು ಅರಿತುಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದರು.

ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್ ನರೇಂದ್ರ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ. ಮಂಜುಳ, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಬಿ.ಎಲ್.ಎ-೧ ಎಂ.ಎಸ್ ಸುರೇಶಪ್ಪ, ಮುಖಂಡರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ಎಂ. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರಸ್ವತಿ, ಗ್ರಾಮಾಂತರ ಮಂಡಲ ಪ್ರಭಾರಿ ತಮ್ಮಡಿಹಳ್ಳಿ ನಾಗರಾಜ್, ಬೂತ್‌ಗಳ ಬಿಎಲ್‌ಎ-೨ ಜವಾಬ್ದಾರಿ ನಿರ್ವಹಿಸಲು ಸಿದ್ದರಾಗಿರುವ ಪಕ್ಷದ ಕಾರ್ಯಕರ್ತರು, ಮಂಡಲದ ಪದಾಧಿಕಾರಿಗಳು, ಮೋರ್ಚಾಗಳ ಹಾಗೂ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಇತರರು ಉಪಸ್ಥಿತರಿದ್ದರು.