ನನಗೆ ಅವಕಾಶಕೊಟ್ಟ ಸೊರಬ ಕ್ಷೇತ್ರದ ಮತದಾರರಿಂದಾಗಿ, ಶಿಕ್ಷಣ ಇಲಾಖೆಯ ಸಚಿವನಾಗಿದ್ದು, 1.16 ಲಕ್ಷ ಮಕ್ಕಳ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಆನವಟ್ಟಿ: ನನಗೆ ಅವಕಾಶಕೊಟ್ಟ ಸೊರಬ ಕ್ಷೇತ್ರದ ಮತದಾರರಿಂದಾಗಿ, ಶಿಕ್ಷಣ ಇಲಾಖೆಯ ಸಚಿವನಾಗಿದ್ದು, 1.16 ಲಕ್ಷ ಮಕ್ಕಳ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟಿಪುರ ತಾಂಡದಲ್ಲಿ ₹15 ಲಕ್ಷ ವೆಚ್ಚದ ಕಾಂಕ್ರೀಟ್‌ ಚರಂಡಿ, ಅಜಾದ್‌ ಬೀದಿಯಲ್ಲಿ ₹15 ಲಕ್ಷ ವೆಚ್ಚದ ಡಾಂಬರ್‌ ರಸ್ತೆ, ತಲ್ಲೂರಿನಲ್ಲಿ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಬಿಡುವಿಲ್ಲ ಕೆಲಸವಿರುವುದರಿಂದ, ಈಗಾಲೇ ಹಿರೇಇಡುಗೂಡು ಸೇರಿದಂತೆ ಅನೇಕ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಖಂಡರೇ ಭೂಮಿಪೂಜೆ ಮಾಡಿ ಕಾಮಗಾರಿ ಪೂರ್ಣ ಮಾಡುವಂತೆ ತಿಳಿಸಿದ್ದೇನೆ. ಕೆಲವೊಂದು ಮಗಿದಿವೆ ಇನ್ನೂ ಕೆಲವೊಂದು ಪ್ರಗತಿಯಲ್ಲಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ಮೇಲೆ ಇಟ್ಟ ಭರವಸೆಗೆ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿದ್ದು, ಪಠ್ಯಪರಿಷ್ಕರಣೆಯಂತಹ ದಿಟ್ಟ ನಿರ್ಧಾರ ಹಾಗೂ ಶಿಕ್ಷಣ ಇಲಾಖೆಗೆ ಅಗತ್ಯ ಅನುದಾನ ಒದಗಿಸಿದ್ದಾರೆ. ಇನ್ನಷ್ಟು ಯೋಜನೆಗಳು ಹಾಕಿಕೊಂಡಿದ್ದು ಸರ್ಕಾರಿ ಶಾಲೆಗಳನ್ನು ಜನ ನೋಡುವ ದೃಷ್ಟಿಕೋನ ಬದಲಾಗಲಿದೆ ಎಂದರು.

ಮುಖ್ಯ ರಸ್ತೆಗಳ ರಿಪೇರಿ ಕಾಮಗಾರಿ ನಡೆಯುತ್ತಿದ್ದು, ನಂತರದಲ್ಲಿ ಹಳ್ಳಿ ರಸ್ತೆಗಳ ಅಭಿವೃದ್ಧಿ ಕಡೆಗೆ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸದಾನಂದ ಗೌಡ ಬಿಳಗಲಿ, ಕೆ.ಪಿ.ರುದ್ರಗೌಡ, ಪರಶುರಾಮ ಹುಳ್ಳೇರ್‌, ಸಂತೋಷ ಕಾತುವಳ್ಳಿ, ಮಧುಕೇಶ್ವರ ಪಾಟೀಲ್‌, ಅನೀಶ್‌ ಪಾಟೀಲ್‌, ಕೆ.ಓಂಕಾರಿ ನಾಯ್ಕ, ಗೋವಿಂದ ನಾಯ್ಕ, ವೆಂಕ್ಯನಾಯ್ಕ, ಚಂದ್ರಪ್ಪ ವೃತ್ತಿಕೊಪ್ಪ, ಎಲ್‌.ಜಿ.ಮಾಲತೇಶ್‌, ಅಜೀಂ ಸಾಬ್‌, ಮಹಮ್ಮದ್‌ ಗೌಸ್‌, ಹಬಿಬುಲ್ಲಾ ಹವಾಲ್ದಾರ್‌, ಸಂಜೀವ ತರಕಾರಿ, ಪ್ರವೀಣ ಹಿರೇಇಡುಗೋಡು ಇದ್ದರು.