ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಭಾರತೀಯ ಚುನಾವಣಾ ಆಯೋಗ ಜಿಲ್ಲಾಡಳಿತ ಕೊಡಗು ಜಿಲ್ಲೆ ಹಾಗೂ ಮಡಿಕೇರಿ ನಗರಸಭೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆ ಆಯೋಜಿಸಿತು.ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸೃಜನಶೀಲ ಅಭಿವ್ಯಕ್ತಿಗೆ ರೂಪ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲು ಮತ್ತು ಅಭಿಯಾನದ ಅಂಗವಾಗಿ ಪರಿಶೀಲನೆ ನಡೆಸಲು ಮುಖ್ಯ ಲೆಕ್ಕಾಧಿಕಾರಿಗಳಾದ ಜುವೆಲ್ ಖಾನ್, ನಗರಸಭೆಯ ಕಮಿಷನರ್ ವಿಜಯ, ಎಇಇ ಸೌಮ್ಯ, ಕಂದಾಯ ಅಧಿಕಾರಿಗಳಾದ ತಾಹಿರ್ ಎಂ.ಎ., ಬೂತ್ ಮಟ್ಟದ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಹಾಜರಿದ್ದರು. ಕಾಲೇಜಿನ ವತಿಯಿಂದ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ., ಸಹ ಪಠ್ಯ ಚಟುವಟಿಕೆಯ ಸಂಯೋಜಕ ಡಾ. ರೇಣುಶ್ರೀ, ಕಾಲೇಜಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ನಗರಸಭೆಯ ಕಮಿಷನರ್ ವಿಜಯ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರುವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಫಲಿತಾಂಶ:ರಂಗೋಲಿ ಸ್ಪರ್ಧೆಯಯಲ್ಲಿ ಶಿವ - ದ್ವಿತೀಯ ಎಂಕಾಂ ( ಪ್ರಥಮ), ಯೋಗಿನಿ ದ್ವಿತೀಯ ಬಿಕಾಂ ( ದ್ವಿತೀಯ), ಯಶೋಧ ದ್ವಿತೀಯ ಎಂ.ಎ. ( ತೃತೀಯ) ಪ್ರಶಸ್ತಿ ಪಡೆದರು.
ಚಿತ್ರಕಲೆ ಸ್ಪರ್ಧೆ ವಿಭಾಗದಲ್ಲಿ ರೋಹಿತ್ ಪಿ.ವಿ. ದ್ವಿತೀಯ ಬಿಸಿಎ (ಪ್ರಥಮ), ಭೀಮಾ ಪ್ರಥಮ ಬಿ.ಎ. ( ದ್ವಿತೀಯ) ಹಾಗೂ ಮೋನಿಕಾ ದ್ವಿತೀಯ ಬಿಸಿಎ ( ತೃತೀಯ) ಬಹುಮಾನ ಗಳಿಸಿದರು.ವಾಹನ ತಪಾಸಣಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ:
ಕುಶಾಲನಗರ ಗಡಿ ಭಾಗದ ವಾಹನ ತಪಾಸಣಾ ಕೇಂದ್ರಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿಲ್ಲೆಗೆ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸುವ ಮೂಲಕ ಸಾಗಾಟವಾಗುವ ದಾಖಲೆ ರಹಿತ ನಗದು , ಚುನಾವಣಾ ಸಾಮಗ್ರಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಕೊಡಗು ಜಿಲ್ಲಾ ಗಡಿ ಭಾಗಗಳ ವಾಹನ ತಪಾಸಣಾ ಕೇಂದ್ರಗಳಲ್ಲಿ ಇದುವರೆಗೆ ಸಮರ್ಪಕ ದಾಖಲೆಗಳು ಇಲ್ಲದ ಸುಮಾರು 14 ಲಕ್ಷ ರು. ಗಳ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಕುಶಾಲನಗರ ಶಿರಂಗಾಲ ಗಡಿ ಭಾಗಗಳ ವಾಹನ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಹಸೀಲ್ದಾರ್ ಕಿರಣ್ ಗೌರಯ್ಯ, ಚುನಾವಣಾ ಅಧಿಕಾರಿಗಳಾದ ಆನಂದ್ , ಎಸ್ ಕೆ ಕಿರಣ್, ಪ್ರವೀಣ್, ಕುಶಾಲನಗರ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿ ಜಿ ಎನ್ ಲೋಹಿತ್, ತಾಲೂಕು ಕಚೇರಿ ಅಧಿಕಾರಿಗಳಾದ ಸಂತೋಷ್ , ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮಾ, ಸಿಬ್ಬಂದಿ ಕುಮಾರಿ, ಜಯಪ್ರಕಾಶ್, ಸನಂತ್ ಮತ್ತಿತರರು ಇದ್ದರು.