ಪ್ರಜಾಪ್ರಭುತ್ವ ಯಶಸ್ವಿಗೆ ಮತದಾನದ ಅರಿವು ಅವಶ್ಯಕ

| Published : Jan 26 2025, 01:30 AM IST

ಸಾರಾಂಶ

ಹನೂರು ತಾಲೂಕಿನ ಜಿವಿ ಗೌಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಕಾನೂನು ಅರಿವು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ನ್ಯಾ.ನಂದಿನಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸಂವಿಧಾನ, ಪ್ರಜಾಪ್ರಭುತ್ವ, ಮತದಾನ ಇವುಗಳ ಮೌಲ್ಯಗಳನ್ನು ಭಾರತದ ಪ್ರತಿಯೊಬ್ಬ ಪ್ರಜೆಗಳು ತಿಳಿದುಕೊಳ್ಳಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶೆ ನಂದಿನಿ ಎಂ.ಎನ್. ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಹನೂರು ಜಿವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹನೂರು ತಾಲೂಕು ಆಡಳಿತ, ಕಾನೂನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಕೊಳ್ಳೇಗಾಲ ಹಾಗೂ ಜಿವಿ ಗೌಡ ಕಾಲೇಜು ಸಹಯೋಗದೊಂದಿಗೆ 15ನೇ ಮತದಾರರ ದಿನಾಚರಣೆ ಹಾಗೂ ಕಾನೂನಿನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂವಿಧಾನದ ಆಶಯಗಳು ಶ್ರೇಷ್ಠವಾದದ್ದು. ಸಂವಿಧಾನವು ಸಮಾಜವಾದ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದೆ. ನಾವೆಲ್ಲರೂ ಕೂಡ ಸಂವಿಧಾನದಡಿಯಲ್ಲಿ ಬದುಕಬೇಕಾಗಿದೆ. ಈ ದೇಶದ ಪ್ರಜೆಗಳು ಮತದಾನದ ಅರಿವನ್ನು ಮೂಡಿಸಿಕೊಳ್ಳಬೇಕಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಆಗ ಈ ದೇಶ ಪ್ರಬುದ್ಧ ಭಾರತವಾಗುತ್ತದೆ ಎಂದು ತಿಳಿಸಿದರು. ತಾಲೂಕು ಆಡಳಿತದಿಂದ ಬಿಎಲ್‌ಒಗಳಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವೈಕೆ ಗುರುಪ್ರಸಾದ್, ಪ್ರಾಂಶುಪಾಲರಾದ ಲಾಜರಸ್, ಉಪ ತಹಸೀಲ್ದಾರ್ ಸುರೇಖಾ, ವಕೀಲ ಸಂಘದ ಕಾರ್ಯದರ್ಶಿ ಸಿ. ಬಿ. ಮಹೇಶ್ ಕುಮಾರ್, ವಕೀಲರಾದ ಚಿನ್ನರಾಜು, ರೋಹಿತ್ ಕುಮಾರ್, ಉಪನ್ಯಾಸಕರಾದ ಫರ್ಹಾನ ಬೇಗಂ, ಕುಸುಮ, ಸವಿತಾ, ಶಿವಕುಮಾರ್, ಮಹೇಂದ್ರ, ಸುಮತಿ, ದೇವಿಕಾ, ಹಾಗೂ ಆಡಳಿತ ಸಿಬ್ಬಂದಿ ಪ್ರಭು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.