ಸಾರಾಂಶ
ಭಾರತವು ವಿಶ್ವದ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಈ ಪ್ರಜಾಪ್ರಭುತ್ವದ ಜೀವಾಳವೇ ಮತದಾನವಾಗಿದೆ ಎಲ್ಲರೂ ತಪ್ಪದೇ ಮತಚಲಾಯಿಸಿ ಮತ್ತು ಮತದಾನ ಮಾಡಲು ಪ್ರೇರೇಪಿಸಿ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭವಾರ್ತೆ ಹನೂರು
ಭಾರತವು ವಿಶ್ವದ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಈ ಪ್ರಜಾಪ್ರಭುತ್ವದ ಜೀವಾಳವೇ ಮತದಾನವಾಗಿದೆ ಎಲ್ಲರೂ ತಪ್ಪದೇ ಮತಚಲಾಯಿಸಿ ಮತ್ತು ಮತದಾನ ಮಾಡಲು ಪ್ರೇರೇಪಿಸಿ ಎಂದು ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ತಾಲೂಕಿನ ಎಲ್ಲಾ ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.ತಾಪಂ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ 2024ರ ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಪರ್ವ ದೇಶದ ಗರ್ವ ಎಂಬ ಘೋಷವಾಕ್ಯದೊಂದಿಗೆ ಮಾದೇಶ್ವರ ಬೆಟ್ಟದ ಮುಖ್ಯ ರಸ್ತೆಯಿಂದ ತಾಳುಬೆಟ್ಟದವರಗೆ ಶ್ರಮದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿವರಾತ್ರಿ ಜಾತ್ರೆಯಲ್ಲಿ ಅತಿ ಹೆಚ್ಚು ಭಕ್ತರ ಭೇಟಿಯಿಂದಾಗಿ, ಪಾದಯಾತ್ರೆಯ ಸಂದರ್ಭದಲ್ಲಿ ಸುಮಾರು 25 ಕಿಮೀ ವರೆಗೂ ಅತಿ ಹೆಚ್ಚು ಪ್ಲಾಸ್ಟಿಕ್ ಇತರೆ ಕಸಗಳು ಬೆಟ್ಟದವರೆಗೂ ತುಂಬಿದ್ದ ಕಸವನ್ನು ವಿಂಗಡನೆ ಮಾಡುವುದರ ಜೊತೆಗೆ ಸಮಾಜವನ್ನು ಶುಚಿಗೊಳಿಸಲು ನಿಷ್ಪಕ್ಷಪಾತವಾಗಿ ಮತ ಚಲಾಯಿಸುವಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಯಾರೂ ಹಣದ ಆಸೆಗೆ, ಹೆಂಡದ ಆಸೆಗೆ ಇತರ ಆಮಿಷಗಳಿಗೆ ಒಳಗಾಗದೇ ಉತ್ತಮ ಪ್ರಜಾವ್ಯಕ್ತಿಯನ್ನು ಆಯ್ಕೆ ಮಾಡಿ ದೇಶದ ಅಭಿವೃದ್ಧಿ ಪಥದತ್ತ ಸಾಗಲು ನೆರವಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ರವೀಂದ್ರ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧನೆ ಮಾಡಿದರು. ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗೋವಿಂದಪ್ಪ ಶಿವಣ್ಣ, ಸುರೇಶ, ರಾಮು ಮಾದೇಶ ನಂದೀಶ, ಪುಷ್ಪಲತಾ, ಸಿದ್ದಪ್ಪ ಮತ್ತು ತಾಪಂ ಸಿಬ್ಬಂದಿ, ನರೇಗಾ ಸಿಬ್ಬಂದಿ, ಎನ್ಆರ್ಎಲ್ಎಂ ಸಿಬ್ಬಂದಿ ಹಾಜರಿದ್ದರು.