ಸಾರಾಂಶ
ವೃಕ್ಷಮಾತೆ ತುಳಸಿ ಗೌಡ ಇವರ ಸ್ಮರಣಾರ್ಥ ಮಂಗಳವಾರ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ತುಳಸಿಯಮ್ಮನಿಗೊಂದು ನುಡಿನಮನ ಕಾಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕೋಟ
ವೃಕ್ಷಮಾತೆ ತುಳಸಿ ಗೌಡರಿಗೆ ಅಕ್ಷರಾಭ್ಯಾಸ ಇಲ್ಲದಿದ್ದರೂ ಅವರ ಪ್ರಕೃತಿ ಪ್ರೇಮದಿಂದ ಅವರ ಹೆಸರು ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ ಎಂದು ಖ್ಯಾತ ಪರಿಸರಪ್ರೇಮಿ ಉಡುಪಿ ರವಿರಾಜ್ ಹೇಳಿದರು.ಸೋಮವಾರ ಇಹಲೋಕ ತ್ಯಜಿಸಿದ ವೃಕ್ಷಮಾತೆ ತುಳಸಿ ಗೌಡ ಇವರ ಸ್ಮರಣಾರ್ಥ ಮಂಗಳವಾರ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ತುಳಸಿಯಮ್ಮನಿಗೊಂದು ನುಡಿನಮನ ಕಾಯಕ್ರಮದಲ್ಲಿ ಮಾತನಾಡಿದರು. ತುಳಸಿ ಅಮ್ಮನಿಗಿದ್ದ ಪರಿಸರ ಕಾಳಜಿ ಮುಂದಿನ ತಲೆಮಾರಿಗೆ ಮಾದರಿಯಾಗಿದೆ, ತನ್ನ ಜೀವತ ಅವಧಿಯಲ್ಲಿ ಅವರು ನೆಟ್ಟು ಪೋಷಿಸಿದ ಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಿಂದ ನಮ್ಮ ಉಸಿರು ಉಳಿದುಕೊಂಡಿದೆ. ಪ್ರತಿಯೊಬ್ಬರು ಗಿಡ ನೆಟ್ಟು ಅವರಂತೆ ಜೀವಿಸೋಣ. ಪಂಚವರ್ಣದ ಪ್ರಕೃತಿ ಮಾತೆಯ ಆರಾಧನೆಯ ಕಾರ್ಯಕ್ರಮ ತುಳಸಿ ಅಮ್ಮನಂತೆ ಕಂಗೊಳಿಸಲಿ ಎಂದರು.ಸಭೆಯಲ್ಲಿ ಗಣ್ಯರು ತುಳಸಿ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಹಂದಾಡಿ ಗ್ರಾಪಂ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ, ಕರ್ಣಾಟಕ ಬ್ಯಾಂಕ್ ನಿವೃತ್ತ ಪ್ರಭಂಧಕ ಕೋಡಿ ಚಂದ್ರಶೇಖರ್ ನಾವಡ, ಕೋಟ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣದ ಸದಸ್ಯ ರವೀಂದ್ರ ಕೋಟ ವಂದಿಸಿದರು.