ವಿವಿ ಸಾಗರ ಡ್ಯಾಂ 3ನೇ ಬಾರಿ ಕೋಡಿ ಹರ್ಷ ತಂದಿದೆ

| Published : Jan 22 2025, 12:32 AM IST

ವಿವಿ ಸಾಗರ ಡ್ಯಾಂ 3ನೇ ಬಾರಿ ಕೋಡಿ ಹರ್ಷ ತಂದಿದೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ 130 ಅಡಿ ಭರ್ತಿಯಾಗಿ ಮೂರನೇ ಬಾರಿಗೆ ಕೋಡಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ರಾಜವಂಶಸ್ಥ, ಹಾಗೂ ಸಂಸತ್ ಸದಸ್ಯ ಯದುವೀರ್ ಶ್ರೀಕೃಷ್ಣದತ್ತ ಒಡೆಯರ್ ಅವರು ಮಂಗಳವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

- ಜಲಾಶಯಕ್ಕೆ ಬಾಗಿನ ಅರ್ಪಿಸಿ ಮೈಸೂರು ಸಂಸದ ಯದುವೀರ ಒಡೆಯರ್‌ ಹೇಳಿಕೆ । - ಆತ್ಮೀಯವಾಗಿ ಸ್ವಾಗತಿಸಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು- - - ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ 130 ಅಡಿ ಭರ್ತಿಯಾಗಿ ಮೂರನೇ ಬಾರಿಗೆ ಕೋಡಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ರಾಜವಂಶಸ್ಥ, ಹಾಗೂ ಸಂಸತ್ ಸದಸ್ಯ ಯದುವೀರ್ ಶ್ರೀಕೃಷ್ಣದತ್ತ ಒಡೆಯರ್ ಅವರು ಮಂಗಳವಾರ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಬಾಗಿನ ಅರ್ಪಣೆಗೆ ಹಿರಿಯೂರು ನಗರಕ್ಕೆ ಆಗಮಿಸಿದ್ದ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮೈಸೂರಿನ ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಾಣಿವಿಲಾಸ ಜಲಾಶಯಕ್ಕೆ ತೆರಳಿ, ಬಾಗಿನ ಅರ್ಪಿಸಿದರು.

ಈ ಸಂದರ್ಭ ಯದುವೀರ್‌ ಒಡೆಯರ್‌ ಅವರು ಮಾತನಾಡಿ, ವಾಣಿವಿಲಾಸ ಜಲಾಶಯ ಮೂರನೇ ಬಾರಿಗೆ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಈ ಜಲಾಶಯಕ್ಕೆ ನಾನು ಎರಡನೇ ಬಾರಿಗೆ ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ. ಈ ಜಿಲ್ಲೆಯ ಜನರಿಗೆ ವರ್ಷಪೂರ್ತಿ ನೀರು ಲಭ್ಯವಾಗುವಂತಾಗಲಿ. ಈ ಜಲಾಶಯಕ್ಕೂ ನಮಗೂ ಮೊದಲಿನಿಂದಲೂ ಸಂಬಂಧ ಇದೆ. ಆದ್ದರಿಂದ ಬಾಗಿನ ಅರ್ಪಣೆ ಮಾಡಲಾಯಿತು ಎಂದರು.

ಜಲಾಶಯ ತುಂಬಿರುವುದನ್ನು ಕಂಡ ಒಡೆಯರ್, ಗಂಗಾಮಾತೆಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದು ಬಣ್ಣಿಸಿದರು. ಬಾಗಿನ ಅರ್ಪಿಸುವ ಮೂಲಕ ನಮ್ಮ ವಂದನೆಗಳನ್ನು ಅರ್ಪಿಸುತ್ತೇವೆ. ಯಾರು ಅಧಿಕಾರದಲ್ಲಿ ಇರುತ್ತಾರೋ ಅವರು ಡ್ಯಾಂಗೆ ಬಾಗಿನ ಅರ್ಪಿಸುತ್ತಾರೆ. ಅಧಿಕಾರ ಇದ್ದಾಗ ಪ್ರಕ್ರಿಯೆ ಏನಿದೆ ಅದನ್ನು ಅನುಸರಿಸುತ್ತಾರೆ. ನಮಗೆ ಈ ಹಿಂದೆಯೂ ವಿಶೇಷವಾಗಿ ಆಹ್ವಾನಿಸಿರಲಿಲ್ಲ. ಸ್ಥಳೀಯರು ನಮ್ಮನ್ನು ಆಹ್ವಾನಿಸುತ್ತಿದ್ದರು. ಇವತ್ತೂ ಹಾಗೆ ನಡೆದಿದೆ. ಇದರಲ್ಲಿ ರಾಜಕೀಯ ಮಾಡುವ ಯಾವ ಅವಶ್ಯಕತೆ ಇಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯದಲ್ಲಿ ರಾಜಕೀಯ ಬೇಡ. ಬಿಜೆಪಿ ಬಣ ರಾಜಕೀಯದ ಬಗ್ಗೆ ನಾನು ಮಾತನಾಡೊಲ್ಲ. ಮೇಲ್ಮಟ್ಟದಲ್ಲಿ ನಡೆಯೋದನ್ನು ಕಾರ್ಯಕರ್ತನಾಗಿ ಅನುಭವಿಸುತ್ತೇನೆ. ಎಲ್ಲ ಸಮಸ್ಯೆಗಳನ್ನು ಹೈಕಮಾಂಡ್ ಬಗೆಹರಿಸುತ್ತೆ ಎಂದರು.

ಈ ಸಂದರ್ಭದಲ್ಲಿ ಎಂಎಲ್‌ಸಿ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್, ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಜೀವದಾತೆ ಫೌಂಡೇಶನ್ ಸಂಸ್ಥಾಪಕ ಕೆ.ಅಭಿನಂದನ್, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಯಶೋಧರ್, ಮುಖಂಡರಾದ ದ್ಯಾಮೇಗೌಡ, ಶಿವಶಂಕರ್, ಜೆ.ಜಿ.ಹಳ್ಳಿ ಮಂಜುನಾಥ್, ಎ.ರಾಘವೇಂದ್ರ, ಎಂಎಸ್ ರಾಘವೇಂದ್ರ, ಹರ್ಷ, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯ, ಟಿ. ಶಂಕರಮೂರ್ತಿ, ಕೇಶವಮೂರ್ತಿ, ರೈತ ಸಂಘದ ಅಧ್ಯಕ್ಷ ಕೆಟಿ.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ ಮುಂತಾದವರು ಉಪಸ್ಥಿತರಿದ್ದರು.

- - -

ಬಾಕ್ಸ್‌ * 25 ಕೋಟಿ ಜನರಿಗೆ ಬಡತನದಿಂದ ಮುಕ್ತಿ ನೀಡಿದ ಮೋದಿ

- ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಒಡೆಯರ್‌ಹಿರಿಯೂರು ನಗರದ ಟಿ.ಬಿ. ವೃತ್ತದ ಆಂಜನೇಯ ದೇವಸ್ಥಾನ ಹಿಂಭಾಗದ ದಲಿತ ಕಾಲೋನಿಯಲ್ಲಿ ಯದುವೀರ್‌ ಒಡೆಯರ್‌ ಅವರು ಸಹಪಂಕ್ತಿ ಭೋಜನ ಮಾಡಿದರು. ಈ ಸಂದರ್ಭ ಅವರು ಮಾತನಾಡಿ, ಸಮಸ್ತ ನಾಗರೀಕರಿಗೂ ಸಂವಿಧಾನದಡಿ ಸಮಾನ ಹಕ್ಕುಗಳಿವೆ. ಯಾರೇ ಅಧಿಕಾರದಲ್ಲಿರಲಿ, ನಾಗರೀಕರಿಗೆ ಸಮಾನ ಹಕ್ಕುಗಳಿರುತ್ತವೆ. ಅರ್ಧಸತ್ಯ ಮಂಡಿಸುವ ಮೂಲಕ ಅಪಪ್ರಚಾರ ಮಾಡುವ ಮಂದಿಗೆ ನಾವು ಉತ್ತರ ಕೊಡಬೇಕಿದೆ. ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ ಸಂವಿಧಾನ ಬದಲಿಸುತ್ತಾರೆ ಎಂದರು.

ನಮ್ಮ ಪಕ್ಷದ ನಾಯಕರು ಎಂದೂ ಅಧಿಕೃತವಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಪಕ್ಷದ ಲಾಭಕ್ಕಾಗಿ ಸಂವಿಧಾನ ಬಳಸಿರುವವರು ಯಾರು ಸಂವಿಧಾನದ ಮೂಲಕ ಜನರನ್ನು ಸುಭದ್ರವಾಗಿ ಇಟ್ಟಿರುವವರು ಯಾರು ಎಂದು ಜನ ನೋಡಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ತಿದ್ದುಪಡಿಯ ಮೂಲಕ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡಿದವರ ಬಗ್ಗೆ ಜನಕ್ಕೆ ತಿಳಿದಿದೆ. ಅಗತ್ಯ ಇರುವುದಕ್ಕಿಂತ ಹೆಚ್ಚಿನ ತಿದ್ದುಪಡಿ ಮಾಡಿದರು. ಅದು ಸಂವಿಧಾನದ ಮೇಲೆ ನಡೆದ ಹಲ್ಲೆಯಾಗಿತ್ತು. ತಿದ್ದುಪಡಿ ಮಾಡುವ ನಿಯಮಗಳನ್ನೇ ತಿದ್ದುಪಡಿ ಮಾಡಿದರು. ಸಂಪೂರ್ಣ ಭಾರತದ ಅಭಿವೃದ್ಧಿ ನಮ್ಮ ಗುರಿ. 25 ಕೋಟಿ ಜನರನ್ನು ಪ್ರಧಾನಿಗಳು ಬಡತನದಿಂದ ಆಚೆ ತಂದಿದ್ದಾರೆ. ಮುಂದಿನ ಎರಡು ದಶಕಕ್ಕೆ ಭಾರತ ಎಷ್ಟು ಬಲಿಷ್ಠ ಇರಬೇಕೆಂದು ಪ್ರಧಾನಿ ಯೋಚಿಸಿದ್ದಾರೆ. ಮುಂಬರುವ ಪೀಳಿಗೆಯ ದೃಷ್ಟಿಯಿಂದ ನೀವೆಲ್ಲಾ ನಮಗೆ ಕೈಜೋಡಿಸಿ ಎಂದರು.

ವಿಪ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಬಾಬಾ ಸಾಹೇಬರನ್ನು ಪ್ರತಿನಿತ್ಯ ಪೂಜೆ ಮಾಡಬೇಕು. ನಾವು ರಾಜ್ಯದ ಜಿಲ್ಲೆ, ತಾಲೂಕುಗಳಲ್ಲಿ ಭೀಮ ಸಂಗಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದನ್ನು ಅವರ ಮೃತದೇಹ ಸಾಗಿಸಲು ಕೊಟ್ಟ ತೊಂದರೆಯನ್ನು ಎಲ್ಲರೂ ಕೇಳಿದ್ದೀರಿ. ಈ ಕಾರ್ಯಕ್ರಮ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಜಗಜೀವನರಾಂ ಅವರ ಕೊಡುಗೆ ಯಾರೂ ಮರೆಯಬಾರದು. ಸಂವಿಧಾನಕ್ಕೆ ಗೌರವ ಕೊಡುವಂತಹ ಬದುಕು ಬದುಕೋಣ ಎಂದರು.

ಲೇಖಕ ವಿಕಾಸ್ ಪುತ್ತೂರು ಮಾತನಾಡಿ, ಬಾಬಾ ಸಾಹೇಬರು ಎಂದಿಗೂ ರಾಜಕೀಯ ಅಧಿಕಾರ ಪಡೆಯಬಾರದು ಎಂಬುದು ಕಾಂಗ್ರೆಸ್‌ನವರ ನಿಲುವಾಗಿತ್ತು. ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್‌ನವರು ಸಾಕಷ್ಟು ಅಪಪ್ರಚಾರ ಮಾಡಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿದ್ದ ಅಷ್ಟೂ ದಿನವೂ ಬಾಬಾ ಸಾಹೇಬರ ವಿಚಾರ ಧಾರೆಗಳನ್ನು ಕಾಂಗ್ರೆಸ್‌ನವರು ವಿರೋಧಿಸುತ್ತ ಬಂದರು. ಅವರ ಕಿರುಕುಳಕ್ಕೆ ಬೇಸತ್ತ ಅಂಬೇಡ್ಕರ್‌ರವರು ನೆಹರೂ ಅವರ ಕ್ಯಾಬಿನೆಟ್‌ನಿಂದ ಹೊರಬರುತ್ತಾರೆ. 1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾಬಾ ಸಾಹೇಬರು ಯಾವುದೇ ಕಾರಣಕ್ಕೂ ಅಂಬೇಡ್ಕರ್ ಗೆಲ್ಲಬಾರದು ಎಂದು ಪ್ರಚಾರ ಮಾಡುತ್ತಾರೆ. ಆನಂತರ ಅವರನ್ನು ರಾಜ್ಯಸಭೆಗೆ ತಂದದ್ದು ಭಾರತೀಯ ಜನಸಂಘ. ಸಂವಿಧಾನವನ್ನು ತಿದ್ದುಪಡಿ ಮಾಡುತ್ತಿರುವುದು ಕಾಂಗ್ರೆಸ್‌ನವರು. 50ಕ್ಕೂ ಹೆಚ್ಚು ಅನುಚ್ಛೇದಗಳನ್ನು ಕಾಂಗ್ರೆಸ್‌ನವರು ಬದಲಾಯಿಸಿದ್ದಾರೆ ಎಂದರು.

- - - -ಚಿತ್ರ 1:

ವಿ.ವಿ.ಸಾಗರ ಜಲಾಶಯಕ್ಕೆ ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ ಒಡೆಯರ್ ಮಂಗಳವಾರ ಬಾಗಿನ ಸಲ್ಲಿಸಿದರು. -ಚಿತ್ರ2: ಹಿರಿಯೂರು ನಗರದ ವೇದಾವತಿ ನಗರದಲ್ಲಿ ಮೈಸೂರು ಮಹಾರಾಜರು ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಮಾಡಿದರು.