ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಸಂತ ಪೌಲರ ದೇವಾಲಯದ ವಾರ್ಷಿಕೋತ್ಸವ ನಡೆಯಿತು. ವಾರ್ಷಿಕೋತ್ಸವದ ಉದ್ಘಾಟಣೆಗೆ ಆಗಮಿಸಿದ ಮೈಸೂರಿನ ಪ್ರೇಷಿತ ಆಡಳಿತಾಧಿಕಾರಿ ಬಿಷಪ್ ಪೂಜ್ಯ ಬರ್ನಾಡ್ ಮೋರೆಸ್ರನ್ನು ಮಕ್ಕಳು ಪುಷ್ಪಗುಚ್ಚ ನೀಡಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಕರೆತರಲಾಯಿತು.ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಗುರು ಗೃಹ ಪೌಲ್ ನಿವಾಸ್ನ್ನು ಬಿಷಪ್ ಬರ್ನಾರ್ಡ್ ಮೊರೆಸ್ ಉದ್ಘಾಟಿಸಿ ಮಾತನಾಡಿ, ಗುರುಗಳು ಜನರ ಸೇವೆ ಮಾಡಲು ನಿಯೋಜಿಸಲ್ಪಟ್ಟಿದ್ದಾರೆ. ದೇವರ ಮತ್ತು ಮನುಷ್ಯರ ನಡುವೆ ಅವರು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅವರೊಂದಿಗೆ ಭಕ್ತರು ಪ್ರೀತಿ, ವಿಶ್ವಾಸ, ಗೌರವದಿಂದ ನಡೆದು ಸಹಕರಿಸಬೇಕು ಎಂದರು.ಧೃಡಿಕರಣ ಸಂಸ್ಕಾರ: ವಿದ್ಯುತ್ ದೀಪಗಳಿಂದ ಅಲಂಕೃತವಾದ ದೇವಾಲಯದಲ್ಲಿ ಧರ್ಮಾಧ್ಯಕ್ಷರಾದ ಬರ್ನಾರ್ಡ್ ಮೊರೇಸ್ ಆಡಂಬರದ ದಿವ್ಯ ಬಲಿಪೂಜೆ ಅರ್ಪಿಸಿದರು. 13 ಬಾಲಕ ಬಾಲಕಿ ಅಭ್ಯರ್ಥಿಗಳಿಗೆ ಏಳು ಪವಿತ್ರ ಸಂಸ್ಕಾರಗಳಲ್ಲಿ ಒಂದಾದ ಧೃಡಿಕರಣ ಸಂಸ್ಕಾರ ನೀಡಿದರು. ಈ ವೇಳೆ ಆಶೀರ್ವಚನ ನೀಡಿ, ಕ್ರೈಸ್ತಧರ್ಮ ಸಭೆ ಜೋಕಿಂ ಮತ್ತು ಅನ್ನಮ್ಮ ಸ್ಮರಣಾರ್ಥ ಹಿರಿಯರ ನಾಗರಿಕರ ದಿನವಾಗಿ ಆಚರಿಸಲಾಗುತ್ತದೆ. ನಮ್ಮ ಅಜ್ಜ, ಅಜ್ಜಿಯರು ಪ್ರೀತಿ ಬಯಸುತ್ತಾರೆ. ಅವರನ್ನು ಪ್ರೀತಿ ಆದರಗಳಿಂದ ನೋಡಿಕೊಳ್ಳಬೇಕು. ಅವರನ್ನು ವೃದ್ದಾಶ್ರಮಗಳಿಗೆ ಸೇರಿಸಿ ಜೀವಮಾನವಿಡಿ ನೋವಿನಲ್ಲಿ ಕಾಲ ನೂಕುವಂತೆ ಮಾಡಬಾರದು. ಹಿರಿಯರು ವಾಸಿಸುವ ಮನೆಗಳಿಗೆ ಹೋಗಿ ಅವರನ್ನು ಮಾತನಾಡಿಸಬೇಕು ಎಂದರು.ಪುಷ್ಪಾಲಂಕೃತ ತೇರು ಮೆರವಣಿಗೆ: ವಾರ್ಷಿಕೋತ್ಸವದ ಅಂಗವಾಗಿ ಪುಷ್ಪ ಮತ್ತು ವಿದ್ಯುತ್ ದೀಪಾಲಕೃಂತ ಪೌಲರ ಪುತ್ಥಳಿಯ ತೇರು ಮೆರವಣಿಗೆ ದೇವಸ್ಥಾನದಿಂದ ಹೊರಟು ರಾಮ ಸಮುದ್ರದ ಮಾರ್ಗ ಸಾಗಿ ಹಿಂತಿರುಗಿ ಡಿವೈಎಸ್ಪಿ ಕಚೇರಿಯ ಬಳಿ ತಿರುಗಿ ಮತ್ತೆ ದೇವಸ್ಥಾನದ ಬಳಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಗುರುಗಳು, ಬಾಲರ ಪಟ್ಟಣದ ಸಹೋದರರು, ಸೆಂಟ್ ಜೋಸೆಪ್ ಕಾನ್ವೆಂಟ್ನ ಸಹೋದರಿಯರು ಭಾಗವಹಿಸಿದ್ದರು.ಬಲಿಪೂಜೆಯ ಬಳಿಕ ನಡೆದ ಸಮಾರಂಭದಲ್ಲಿ ಎಲ್ಲಾ ದೈವಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಪೂಜ್ಯ ಬಿಷಪ್ ಬರ್ನಾರ್ಡ್ ಮೊರೇಸ್ರನ್ನು, ವಿಶ್ರಾಂತ ಬಿಷಪ್ ತಾಮಸ್ ಆಂಟನಿ ವಾಳಪಿಳ್ಳೈರವರನ್ನು, ಶ್ರೇಷ್ಠ ಗುರುಜಾನ್ ಆಲ್ಫೇಡ್ ಮೆಂಡೊನ್ಸಾರನ್ನು, ಹಬ್ಬದ ಸಿದ್ದತೆಯ ಭಾಗವಾಗಿ ನಡೆದ ದಿನ ನವೇನಾ ಪೂಜಾವಿಧಿಗಳನ್ನು ನಡೆಸಿ ಕೊಟ್ಟ ಗುರುಗಳಾದ ಅಂತೋಣಿ ರಾಜ್, ಅಂತೋಣಿರಾಜ್, ನಿರ್ಮಲ್ ಅವರನ್ನು ಸನ್ಮಾನಿಸಲಾಯಿತು.