ಕನ್ನಡಪ್ರಭ ವಾರ್ತೆ ಶಿಕಾರಿಪುರ

ಜಗತ್ತಿನ ಹಲವು ದೇಶಗಳು ಯುದ್ದದ ಆತಂಕದ ಸ್ಥಿತಿಯಲ್ಲಿದ್ದು, ಶಾಂತಿ ನೆಮ್ಮದಿ ಇಲ್ಲದೆ ಅನಿಶ್ಚಿತತೆಯ ಸಂದಿಗ್ದ ಸ್ಥಿತಿ ಎದುರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವದಿಂದಾಗಿ ಭಾರತದಲ್ಲಿ ಮಾತ್ರ ಯುದ್ದದ ಭೀತಿಯ ವಾತಾವರಣದಿಂದ ಮುಕ್ತವಾಗಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಪಟ್ಟಣದ ವಿನಾಯಕ ನಗರದಲ್ಲಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ಪ್ರೇರಣ ಫಿಟ್ನೆಸ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಆಪರೇಷನ್ ಸಿಂದೂರ್‌ಗೆ ಗೌರವ ಸಲ್ಲಿಸುವ ‘ಸಿಂಧೂರ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಯ ಮೂಲಕ ಸದೃಡ ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಮಹಿಳೆಯರಲ್ಲಿನ ಛಲ,ಆತ್ಮವಿಶ್ವಾಸ, ತಾಳ್ಮೆ ಸಾಧನೆಗೆ ಪ್ರತೀಕವಾಗಿದ್ದು ಪುರುಷ ಪ್ರಧಾನ ಸಮಾಜ ಮಹಿಳೆಯರಿಗೆ ಅವಕಾಶ ನೀಡಿದಲ್ಲಿ ಸರ್ವ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಸಾಬೀತುಪಡಿಸಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಸರ್ವ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಿಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮೀಸಲಾತಿಯನ್ನು ಶೇ.30ಕ್ಕೆ ಹೆಚ್ಚಿಸಲು ನಿರ್ದರಿಸಿದ್ದು ಈ ದಿಸೆಯಲ್ಲಿ ಅಧಿವೇಶನದಲ್ಲಿ ಸಮಗ್ರ ಚರ್ಚೆ ಮೂಲಕ ಮಂಡನೆಯಾಗಲಿದೆ ಎಂದ ಅವರು ತೊಟ್ಟಿಲು ತೂಗುವ ಕೈ ಕೇವಲ ಕುಟುಂಬ ನಿರ್ವಹಣೆ ಮಾತ್ರವಲ್ಲದೆ ದೇಶವನ್ನು ಮುನ್ನಡೆಸಬಲ್ಲರು ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಸಹಿತ ಹಲವು ಮಹಿಳೆಯರು ಸಂವಿಧಾನಾತ್ಮಕವಾಗಿರುವ ದೇಶದ ವಿವಿಧ ಉನ್ನತ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಮಾದರಿಯಾಗಿದ್ದಾರೆ ಸೈನ್ಯದಲ್ಲಿ ಅತ್ಯಂತ ಉತ್ಸಾಹದಿಂದ ದೇಶಕ್ಕೆ ಭದ್ರತೆಯನ್ನು ಒದಗಿಸುತ್ತಿರುವ ಮಹಿಳೆಯರು ಅಸಾಮಾನ್ಯ ದೈರ್ಯ ಸಾಹಸ ಪ್ರವೃತ್ತಿಯಿಂದ ಪುರುಷ ಸಮಾಜಕ್ಕೆ ಪ್ರೇರಣೆಯಾಗಿದ್ದು ಸಮಾಜದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಧನೆಯನ್ನು ಸಂಭ್ರಮಿಸುವ ಇಂತಹ ಕಾರ್ಯಕ್ರಮಗಳು ಸ್ತುತ್ಯಾರ್ಹ ಎಂದು ತಿಳಿಸಿದರು.


ಪ್ರೇರಣ ಫಿಟ್ನೆಸ್ ಸೆಂಟರ್ ಮೂಲಕ ಸ್ಥಳೀಯ ಉತ್ಸಾಹಿ ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಕಾರ್ಯದಿಂದ ಮಾದರಿಯಾಗಿದ್ದಾರೆ ಸಮಾಜದ ಆರೋಗ್ಯ ಕಾಪಾಡುವಲ್ಲಿ ವಹಿಸಿರುವ ಆಸಕ್ತಿ ಶ್ಲಾಘನೀಯವಾಗಿದೆ ಪೆಹಲ್ಗಾಂ ನಲ್ಲಿ ನಡೆದ ಭಯೋತ್ಪಾದಕರ ದಾಳಿ ನಂತರದಲ್ಲಿ ಭಾರತೀಯ ಸೇನೆ ಸಿಂಧೂರ ಕಾರ್ಯಾಚರಣೆ ಮೂಲಕ ನೀಡಿದ ದಿಟ್ಟ ಉತ್ತರವನ್ನು "ಸಿಂಧೂರ ಸಂಭ್ರಮದ "ಹೆಸರಿನಲ್ಲಿ ಸೈನ್ಯದ ಕಾರ್ಯಾಚರಣೆಯನ್ನು ಮಹಿಳೆಯರು ಅತ್ಯಂತ ಮನೋಜ್ಞವಾಗಿ ಅಭಿನಯಿಸಿ ದೇಶಭಕ್ತಿ ಹೆಚ್ಚಿಸಲು ಪ್ರಯತ್ನಿಸಿದ್ದಾರೆ ಎಂದು ಶ್ಲಾಘಿಸಿದರು.

ಸಂಸದ ರಾಘವೇಂದ್ರರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಪ್ರೇರಣ ಫಿಟ್ನೆಸ್ ಸೆಂಟರ್ ಅಧ್ಯಕ್ಷೆ ಪವಿತ್ರ ವಹಿಸಿದ್ದರು. ಸ್ವಾತಿ ರೇಣುಕಪ್ಪ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಸುಧೀರ್ ಮಾರವಳ್ಳಿ ಮುಖಂಡ ಚನ್ನವೀರಪ್ಪ, ಪಾಲಾಕ್ಷಪ್ಪ,ಪಾಪಯ್ಯ,ರೇಣುಕಪ್ಪ, ಶಿಕ್ಷಕ ಶಿವಕುಮಾರ್ ಇತರರು ಹಾಜರಿದ್ದರು.

ದೀಪಾ ಸತೀಶ್ ಸ್ವಾಗತಿಸಿ, ರೇಣುಕಾ ಸ್ವಾಗತಿಸಿ, ಪವಿತ್ರಾ ನಿರೂಪಿಸಿ ವಂದಿಸಿದರು.