ವಿಜಯಪುರ: ಎಂ.ಬಿ. ಪಾಟೀಲರಿಗೆ ಸಚಿವ ಸ್ಥಾನ ಲಭಿಸಿದ್ದಕ್ಕಾಗಿ ಅವರ 25 ಅಭಿಮಾನಿಗಳು ನಗರದ ಬಸವೇಶ್ವರ ವೃತ್ತದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ದೀಡ (ದೀರ್ಘದಂಡ) ನಮಸ್ಕಾರ ಹಾಕಿದರು. ಬಬಲೇಶ್ವರ ಕ್ಷೇತ್ರದ ಕೊಟ್ಯಾಳ ಗ್ರಾಮದ 25 ಜನ ಬೆಂಬಲಿಗರು ದೀಡ ನಮಸ್ಕಾರ ಹಾಕಿ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಎಂ.ಬಿ.ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನವೂ ಸಿಗಲಿ ಎಂದು ವಿಶೇಷ ಪೂಜೆ ಮಾಡಿಸಿದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ:

ವಿಜಯಪುರ: ಎಂ.ಬಿ.ಪಾಟೀಲರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ನಗರದಲ್ಲಿ ಎಂ.ಬಿ.ಪಾಟೀಲ ಅಧ್ಯಕ್ಷತೆಯ ಬಿಎಲ್‌ಡಿಇ ಸಂಸ್ಥೆಯ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಬಳಿಕ ಪರಸ್ಪರ ಸಿಹಿ‌‌ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಬಿಎಲ್‌ಡಿಇ ಸಂಸ್ಥೆಯ ಸಿಬ್ಬಂದಿಗಳು ಭಾಗಿಯಾಗಿದ್ದರು ಹಾಗೂ ಬೆಂಬಲಿಗರು ಸಚಿವ ಎಂ.ಬಿ.ಪಾಟೀಲ ಪರ ಜಯಘೋಷಣೆ ಕೂಗಿದರು.