ಸಾರಾಂಶ
ಸಾರ್ವಜನಿಕರ ಕುಂದು ಕೊರತೆ ಕುರಿತು ಜಿಲ್ಲಾಧಿಕಾರಿ ಅಹವಾಲು ಸಭೆರೋಣ: ಅಳತೆ, ವಾಟ್ನಿ, ಪೋಡಿ, ಆಕಾರ ಬಂದು ನಕಲು ಸೇರಿದಂತೆ ಯಾವುದೇ ಸೇವೆಯಾಗಲಿ ತ್ವರಿತಗತಿಯಲ್ಲಿಯೇ ಕಲ್ಪಿಸುವಲ್ಲಿ ಸರ್ವೇ ಇಲಾಖೆ ಪ್ರತಿಯೋರ್ವ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸಬೇಕು. ಅನಗತ್ಯ ವಿಳಂಬ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ವೈಶಾಲಿ ಅವರು ರೋಣ ಸರ್ವೇ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಜರುಗಿದ ಸಾರ್ವಜನಿಕರ ಕುಂದು ಕೊರತೆ ಕುರಿತು ಅಹವಾಲು ಸಭೆಯಲ್ಲಿ ಬಹುತೇಕ ಅರ್ಜಿಗಳು ಸರ್ವೇ ಇಲಾಖೆ ವಿರುದ್ಧವೇ ಸಲ್ಲಿಕೆಯಾಗಿದ್ದನ್ನು ಗಮನಿಸಿದ ಡಿಸಿ ಅವರು, ಸ್ಥಳದಲ್ಲಿ ಸರ್ವೇ ಇಲಾಖೆ ಮೇಲ್ವಿಚಾರಕಿ ಹಾಗೂ ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ರೈತರು ಸಲ್ಲಿಸಿದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಬೇಕೆ ಹೊರತು ಅವಸರದಲ್ಲಿ ಏನಾದರೂ ದಾಖಲಿಸಿ ಎಡವಟ್ಟು ಮಾಡಿದ ಬಳಿಕ ತಾಂತ್ರಿಕ ತೊಂದರೆ ಮುಂದಿಟ್ಟು ರೈತರನ್ನು ಅನಗತ್ಯ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತೀರಿ. ಇದರಿಂದ ರೈತರಿಗೆ ಸಮಸ್ಯೆಯಾಗುವದಿಲ್ಲವೇ ? ಎಂದು ಸರ್ವೇ ಇಲಾಖೆ ಮೇಲ್ವಿಚಾರಕಿ ಉಮಾ ಜಾಲಿಹಾಳ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಯಾವುದೇ ರೀತಿಯ ತಪ್ಪಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಸರ್ವೇ ಮೇಲ್ವಿಚಾರಕಿ ವಿರುದ್ಧ ಡಿಸಿ ಗರಂ ಸ್ಮಶಾನ ಜಾಗೆಗೆ ನನ್ನ 2 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಕೊಡುತ್ತೇನೆ, ಈ ಕುರಿತು ರಾಜ್ಯಪಾಲರ ಹೆಸರಿಗೆ ನೋಂದಾವಣೆ ಮಾಡಿ, ಅಳತೆಗೆ ಮುಂದಾಗುವಂತೆ ಕಳೆದ 2018ರಿಂದ ನಿರಂತರ 5 ವರ್ಷಗಳ ಕಾಲ ಸರ್ವೇ ಇಲಾಖೆ ಕಚೇರಿಗೆ ಅಲೆಯುತ್ತಿದ್ದೇನೆ. ನಾ ಕಚೇರಿಗೆ ಬಂದಾಗಲೊಮ್ಮೆ ಟೆಕ್ನಿಕಲ್ ಪ್ರಾಬ್ಲಂ ಹೇಳಿ ಕಳಿಸುತ್ತಿದ್ದಾರೆ. ಗ್ರಾಮದ ಜನತೆಗೆ ಅನುಕೂಲವಾಗಲಿ ಎಂದು ಸ್ಮಶಾನಕ್ಕೆ ನಾನೇ ಸ್ವತಃ ಜಾಗೆ ಕೊಡಲು ಮುಂದಾದರೂ ಸಹ ಸರ್ವೇ ಇಲಾಖೆ ಅಧಿಕಾರಿ ಮನಸ್ಸು ಮಾಡುತ್ತಿಲ್ಲ ಎಂಬುದು ಬಹಳ ಬೇಸರ ತಂದಿದೆ ಎಂದು ತಾಲೂಕಿನ ಗುಳಗುಳಿ ಗ್ರಾಮದ ರೈತ ಸಂಗಯ್ಯ ವಸ್ತ್ರದ ಸರ್ವೇ ಅಧಿಕಾರಿಗಳ ನಡೆ ವಿರುದ್ಧ ದೂರಿದರು. ಇದರಿಂದ ತೀವ್ರ ಗರಂ ಆದ ಡಿಸಿ ಎಂ. ವೈಶಾಲಿ ಅವರು, ಏನ್ರಿ, ಸ್ಮಶಾನಕ್ಕೆ ಜಾಗೆ ಸಿಗುವುದೇ ವಿರಳ. ಅಂತದರಲ್ಲಿ ಜಾಗೆ ಕೊಡಲು ರೈತರೇ ಮುಂದೆ ಸ್ವತಃ ಬಂದಿದ್ದರೂ ಈ ರೀತಿ ಅಲೆದಾಡಿಸುವದು ಎಷ್ಟು ಸರಿ? ತಾಂತ್ರಿಕ ತೊಂದರೆ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕಲ್ಲವೆ? ಮೊದಲು ದಾಖಲೆಯಲ್ಲಿ ಎಡನಾದರು ಎಡವಟ್ಟು ಮಾಡೋದು, ಬಳಿಕ ತಾಂತ್ರಿಕ ಸಮಸ್ಯೆ ಮುಂದಿಡೊದೆ ಸರ್ವೇ ಇಲಾಖೆ ಅಧಿಕಾರಿಗಳ ಕೆಲಸವಾಗಿದೆ. ಈ ರೀತಿ ಮಾಡಿದರೇ ಹೇಗ್ರಿ ಎಂದು ಸರ್ವೇ ಇಲಾಖೆ ಮೇಲ್ವಿಚಾರಕಿ ಉಮಾ ಜಾಲಿಹಾಳ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ನಾನು ಪ್ರಾಥಮಿಕ ಶಾಲಾ ಶಿಕ್ಷಕಿ ಹುದ್ದೆಗೆ ನೇಮಕವಾಗಿದ್ದು, ಈ ಕುರಿತು ಸಿಂಧುತ್ವಕ್ಕೆ ಅರ್ಜಿ ಸಲ್ಲಿಸಿದ್ದೆ, ಆದರೆ ನಾನು ಸಾಮಾನ್ಯ ವರ್ಗದಲ್ಲಿ ನೇಮಕವಾಗಿದ್ದರಿಂದ, ಸಿಂಧುತ್ವ ಅವಶ್ಯವಿರುದಿಲ್ಲ. ಆದರೆ ಈಗಾಗಲೇ ನಾನು ಸಿಂಧುತ್ವಕ್ಕೆ ಅರ್ಜಿ ಸಲ್ಲಿಸಿದ್ದೆ, ಆದ್ದರಿಂದ ಈ ಅರ್ಜಿಯನ್ನು ರದ್ದು ಮಾಡಬೇಕು ಎಂದು ತಾಲೂಕಿನ ಹೊಳೆಮಣ್ಣೂರ ಗ್ರಾಮದ ಸಾವಿತ್ರಿ ವಸ್ತ್ರದ ಅವರು ಅರ್ಜಿ ಸಲ್ಲಿಸಿದರು. ಸಾರ್ವಜನಿಕರಿಂದ ಸಲ್ಲಿಕೆಯಾದ ಬಹುತೇಕ ಅಹವಾಲುಗಳು ಸರ್ವೇ ಇಲಾಖೆ ವಿರುದ್ಧವೇ ಇದ್ದರಿಂದ, ಜಿಲ್ಲಾಧಿಕಾರಿ ಎಂ. ವೈಶಾಲಿ ಅವರು, ಸಾರ್ವಜನಿಕರ ಅಹವಾಲು ಸಭೆ ಮುಗಿದ ಬಳಕ ದಿಡೀರ್ ಸರ್ವೇ ಇಲಾಖೆ ಕಚೇರಿಗೆ ತೆರಳಿ, ಅಲ್ಲಿನ ಕಡತಗಳನ್ನು ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದರು. ತಿಂಗಳಿಗೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತವೆ ? ಅವುಗಳಲ್ಲಿ ಸರಿಯಾಗಿರುವದು ಎಷ್ಟು ? ಅವುಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಬೇಕು. ಸರ್ವೇ ಪೂರ್ಣಗೊಳಿಸಿದ ಮಾಹಿತಿ ಹಾಗೂ ಲೆವ್ಹನಿ ಸ್ಕೆಚ್ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.ಈ ವೇಳೆ ತಹಸೀಲ್ದಾರ್ ನಾಗರಾಜ.ಕೆ.ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ, ಕಂದಾಯ ನಿರೀಕ್ಷಕ ಹಾದಿಮನಿ ಉಪಸ್ಥಿತರಿದ್ದರು.