ನೀರಿನ ದರ ಪರಿಷ್ಕರಣೆಗೆ ಜಲಮಂಡಳಿ ಪ್ರಸ್ತಾವ

| Published : Jun 11 2024, 01:40 AM IST

ಸಾರಾಂಶ

ಕಾವೇರಿ ನೀರಿನ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಲಮಂಡಳಿಯಿಂದ ತೀಮಾನ ನಡೆಸಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವೇರಿ ನೀರಿನ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ಬೆಂಗಳೂರು ಜಲಮಂಡಳಿ ತೀರ್ಮಾನಿಸಿದ್ದು, ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್‌ ತಿಳಿಸಿದ್ದಾರೆ.

ಈ ಕುರಿತು ವಿವರಣೆ ನೀಡಿದ ಅವರು, 2014ರಲ್ಲಿ ಬೆಂಗಳೂರು ಜಲಮಂಡಳಿಯ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಆದಾದ ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದರೂ ದರ ಪರಿಷ್ಕರಣೆ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿಲ್ಲ. ಆದರೆ, ಕಳೆದ 10 ವರ್ಷದಲ್ಲಿ ಹಲವು ಬಾರಿ ವಿದ್ಯುತ್‌ ದರ ಪರಿಷ್ಕರಣೆ ಮಾಡಲಾಗಿದೆ. ನೀರಿನ ದರ ಮಾತ್ರ ಪರಿಷ್ಕರಣೆ ಮಾಡಿಲ್ಲ. ಇದರಿಂದ ಬೆಂಗಳೂರು ಜಲಮಂಡಳಿಯ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ, ದರ ಪರಿಷ್ಕರಣೆ ಅನಿವಾರ್ಯವಾಗಿದೆ.

ಗೃಹ ಬಳಕೆ ನೀರಿನ ದರವನ್ನು ಶೇ.30ರಿಂದ 40 ಹಾಗೂ ವಾಣಿಜ್ಯ ಬಳಕೆಗೆ ದರ ಶೇ.45 ರಷ್ಟು ದರ ಹೆಚ್ಚಳ ಪ್ರಸ್ತಾವನೆ ಸಲ್ಲಿಕೆಗೆ ಜಲಮಂಡಳಿ ನಿರ್ಧರಿಸಿದೆ. ಅಂತಿಮವಾಗಿ ದರ ಪರಿಷ್ಕರಣೆ ಮಾಡಬೇಕಾ ಬೇಡವೋ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದರು.

₹15 ಕೋಟಿ ಹೆಚ್ಚುವರಿ ವೆಚ್ಚ

ಬೆಂಗಳೂರು ಜಲಮಂಡಳಿಯು 10 ಲಕ್ಷಕ್ಕೂ ಅಧಿಕ ನೀರಿನ ಸಂಪರ್ಕಗಳನ್ನು ಹೊಂದಿದೆ. ಗ್ರಾಹಕರಿಂದ ಪ್ರತಿ ತಿಂಗಳು ಸುಮಾರು ₹131 ಕೋಟಿ ನೀರಿನ ಶುಲ್ಕ ವಸೂಲಿ ಮಾಡುತ್ತಿದೆ. ಈ ಪೈಕಿ ₹68 ಕೋಟಿ ವಿದ್ಯುತ್‌ ಬಿಲ್‌ ಗೆ ಪಾವತಿ ಮಾಡುತ್ತಿದೆ. ₹40 ಕೋಟಿ ಅಧಿಕಾರಿ ಸಿಬ್ಬಂದಿ ವೇತನಕ್ಕೆ, ₹10 ಕೋಟಿ ಸಾಲ ಮರುಪಾವತಿಗೆ, ₹15 ಕೋಟಿ ಎಸ್‌ಟಿಪಿಗಳ ನಿರ್ವಹಣೆಗೆ, ₹2 ಕೋಟಿ ಆಡಳಿತಕ್ಕೆ, ₹2.5 ಕೋಟಿ ನೀರಿನ ಸಂಸ್ಕರಣಾ ಘಟಕದ ನಿರ್ವಹಣೆಗೆ ಹಾಗೂ ಇತರೆ ನಿರ್ವಹಣಾ ವೆಚ್ಚಕ್ಕೆ ₹7.5 ಕೋಟಿ ವೆಚ್ಚ ಮಾಡುತ್ತಿದೆ. ಆದಾಯಕ್ಕಿಂತ ಸುಮಾರು ₹15 ಕೋಟಿ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ನಿರ್ವಹಣೆಗೆ ಸಂಬಂಧಿಸಿದ ಹಣ ಪಾವತಿಯನ್ನು ಎರಡು ತಿಂಗಳು ವಿಳಂಬ ಮಾಡಲಾಗುತ್ತಿದೆ.ಉಚಿತ ನೀರು ಸ್ಥಗಿತ

ಬೇಸಿಗೆ ಅವಧಿಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಬೆಂಗಳೂರು ಜಲಮಂಡಳಿಯು, ನೀರಿನ ಅಭಾವ ಇರುವ ಪ್ರದೇಶಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡುತ್ತಿತ್ತು. ಸಿಂಟೆಕ್ಸ್‌ ಟ್ಯಾಂಕ್‌ ಅಳವಡಿಕೆ ಮಾಡಿ ನೀರು ಪೂರೈಕೆ ಮಾಡಲಾಗುತ್ತಿತ್ತು. ನೀರಿನ ಸಮಸ್ಯೆ ಪರಿಹಾರವಾದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಿದೆ. ಈ ನಿರ್ಧಾರಕ್ಕೆ ಕೊಳಗೇರಿ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.