ಸಾರಾಂಶ
ತಿಪ್ಪನಾಳದಲ್ಲಿ ನಿರಂತರ ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲಬುರ್ಗಾಪ್ರತಿಯೊಬ್ಬರು ನೀರನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗಾಗಿ ನೀರಿನ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.ತಾಲೂಕಿನ ತಿಪ್ಪನಾಳ ಗ್ರಾಮದಲ್ಲಿ ಶನಿವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ ಮೀಷನ್ ಯೋಜನೆಯಡಿ ತಿಪ್ಪನಾಳ ಗ್ರಾಮವು ನಿರಂತರ ನೀರು ಸರಬರಾಜು ಘೋಷಣೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನೀರಿನ ಸಂರಕ್ಷಣೆ, ಅಂತರ್ಜಲ ಅಭಿವೃದ್ಧಿ ಮತ್ತು ಅವಶ್ಯಕತೆಗನುಗುಣವಾಗಿ ನೀರಿನ ಸದ್ಬಳಕೆ ಮಾಡಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಹಿಂದಿನ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ಯ ಸಚಿವ ಅಬ್ದುಲ್ ನಜೀರಸಾಬ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದರು, ರಾಜ್ಯದ ಎಲ್ಲ ಬೋರವೆಲ್ಗಳನ್ನು ರೀಚಾರ್ಜ್ ಮಾಡಿಸಿದ್ದರು. ಹಿಂದಿನ ಕಾಲದಲ್ಲಿ ಹಳ್ಳದಲ್ಲಿ ದೊರೆಯುತ್ತಿದ್ದ ಒರತೆ ನೀರನ್ನು ಸೇವಿಸುತ್ತಿದ್ದರು, ಹಾಗಾಗಿ ರೋಗಗಳು ಬರುತ್ತಿದ್ದವು, ಇದೀಗ ಶುದ್ಧ ಕುಡಿವ ನೀರು ಪೂರೈಕೆಗೆ ಇಲಾಖೆ ಮುಂದಾಗಿದೆ ಎಂದು ಹೇಳಿದರು.ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ಈ ತಾಲೂಕಿಗೆ ಜನಜೀವನ ಮೀಷನ್ ಯೋಜನೆಯಡಿ ದಿನದ ೨೪ ಗಂಟೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ತಂದಿರುವ ಕೀರ್ತಿ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಸಲ್ಲುತ್ತದೆ. ಊಟ ಇಲ್ಲದೇ ಇರಬಹುದು, ನೀರು ಇಲ್ಲದೇ ಇರಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳನ್ನು ಐದು ಗ್ರಾಪಂಗಳು ಸೇರಿಕೊಂಡು ಆಯೋಜನೆ ಮಾಡಬೇಕು, ನಲ್ಲಿ ಪಡೆದುಕೊಂಡ ಪ್ರತಿಯೊಬ್ಬರು ಪ್ರತಿ ತಿಂಗಳು ₹೧೦೦ ಪಾವತಿಸಿ, ಅಧಿಕಾರಿಗಳು ಶ್ರಮಪಟ್ಟು ಯೋಜನೆ ಯಶಸ್ವಿಗೊಳಿಸಿದ್ದಾರೆ. ಶುದ್ಧ ಸ್ವಚ್ಚ ಪರಿಸರ ನಿರ್ಮಾಣಕ್ಕೆ ನೀರು ಅಗತ್ಯವಾಗಿದೆ. ಈಗಾಗಲೇ ಕ್ಷೇತ್ರದ ಕೆರೆಗಳನ್ನು ತುಂಬಿಸಿದ್ದು ಸಂತಸದ ಸಂಗತಿಯಾಗಿದೆ, ಅಂತರ್ಜಲ ಸಂರಕ್ಷಣೆಯಲ್ಲಿ ಯಲಬುರ್ಗಾ ತಾಲೂಕು ಮುಂದಿದೆ. ಜತೆಗೆ ತಾಲೂಕಿನ ೧೫೩ ಗ್ರಾಮಗಳಲ್ಲಿ ಶೇ. ೮೦ರಷ್ಟು ಜೆಜೆಎಂ ಕಾಮಗಾರಿ ಪ್ರಗತಿ ಹಂತದಲ್ಲಿವೆ ಎಂದರು.
ಜೆಜೆಎಂ ಸಂಯೋಜಕ ಡಾ. ನಂದಕುಮಾರ ಪ್ರಾಸ್ತವಿಕವಾಗಿ ಮಾತನಾಡಿದರು. ಗಾಣದಾಳ ಗ್ರಾಪಂ ಅಧ್ಯಕ್ಷೆ ಹೊನ್ನಮ್ಮ ಸಣ್ಣೆಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಿಜ್ವಾನಬೇಗಂ, ಕೊಪ್ಪಳದ ಮಹೇಶ ಶಾಸ್ತ್ರಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಬಂಗಾರಿ, ಪಿಡಿಒ ನೀಲಾ ಸೂರ್ಯಕುಮಾರಿ, ಗ್ರಾಪಂ ಸರ್ವ ಸದಸ್ಯರು, ಮತ್ತಿತರರು ಇದ್ದರು.