ಸಾರಾಂಶ
ದೊಡ್ಡಬಳ್ಳಾಪುರ: ಮುಂದೊಂದು ದಿನ ರಕ್ತ ದೊರೆಯಬಹುದು. ಆದರೆ ನೀರು ಸಿಗಲಾರದು. ನೀರಿನ ಬದಲು ನೀರಿನ ಮಾತ್ರೆಗಳನ್ನು ತಿಂದು ಬದುಕಬೇಕಾಗುತ್ತದೆ ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದರು.
ದೊಡ್ಡಬಳ್ಳಾಪುರ: ಮುಂದೊಂದು ದಿನ ರಕ್ತ ದೊರೆಯಬಹುದು. ಆದರೆ ನೀರು ಸಿಗಲಾರದು. ನೀರಿನ ಬದಲು ನೀರಿನ ಮಾತ್ರೆಗಳನ್ನು ತಿಂದು ಬದುಕಬೇಕಾಗುತ್ತದೆ ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದರು.
ವಿಶ್ವ ಜಲ ದಿನದ ಪ್ರಯುಕ್ತ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜನ್ಮದಿನದಂದು ದೀಪ ಆರಿಸುವ ಬದಲು ಗಿಡ ನೆಟ್ಟು ಪೋಷಿಸುವ ಪ್ರಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಕಾಯಕ ಮಾಡುವುದೇ ನಿಜವಾದ ಕಾಯಕ. ನಮ್ಮ ಜೀವಿತಾವಧಿಯಲ್ಲಿ ಬೆಳೆಸಿದ ಮರಗಳು ಮುಂದಿನ ಪೀಳಿಗೆಗೆ ಜೀವ ದಾನವಾಗುತ್ತದೆ. ನೀರು ಬತ್ತದೆ ಪ್ರಕೃತಿ ಹಸಿರಾಗುತ್ತದೆ. ಟಿವಿ ಮುಂದೆ ಕಾಲಕಳೆಯುತ್ತಾ ಮಾನಸಿಕಯಾತನೆ ಅನುಭವಿಸುವ ಬದಲು ಹಸಿರು ಭೂಮಿಯ ಮಡಿಲಲ್ಲಿ ಜೀವನ ಸಾಗಿಸಿದರೆ ಮನಸ್ಸು ಸದೃಢವಾಗುತ್ತದೆ ಎಂದರು.ಪ್ರಾಧ್ಯಾಪಕ ಡಾ.ಜಗದೀಶ್ ಗೋಡಿಹಾಳ್ ಮಾತನಾಡಿ, ಪ್ರಕೃತಿ ಯಾವತ್ತೂ ಮನುಷ್ಯನಿಗೆ ತೊಂದರೆ ಮಾಡಿಲ್ಲ. ಮನುಷ್ಯ ಮಾತ್ರ ಪ್ರಕೃತಿಯನ್ನು ಸ್ವಾರ್ಥಕ್ಕಾಗಿ ವಿಕೃತಗೊಳಿಸಿ ತಾನೂ ವಿಪತ್ತನ್ನು ತಂದುಕೊಂಡಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು. ಡಾ.ಸುನೀಲ್, ಡಾ ರಜನಿ ಮತ್ತಿತರರು ಉಪಸ್ಥಿತರಿದ್ದರು.