ಸಾರಾಂಶ
ಗೋಕಾಕ : ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ನಗರದ ಹೊರವಲಯದ ಎರಡು ಸೇತುವೆ ಜಲಾವೃತಗೊಂಡು ಗೋಕಾಕ ನಗರಕ್ಕೆ ಜಲದಿಗ್ಬಂಧನ ಭೀತಿ ಎದುರಾಗಿದೆ.
ನಗರವನ್ನು ಸಂಪರ್ಕ ಕಲ್ಪಿಸುವ ಲೋಳಸೂರ ಮತ್ತು ಚಿಕ್ಕೊಳಿ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಫಾಲ್ಸ್ ಹಾಗೂ ಗೋಕಾಕ ನಗರದ ಮಧ್ಯೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಗೋಕಾಕ ನಗರಕ್ಕೆ ನುಗ್ಗಿದ ನೀರು:
ಶನಿವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯುಸೆಕ್, ಹಿರಣ್ಣಕೇಶಿ ನದಿಯಿಂದ 24 ಸಾವಿರ ಕ್ಯುಸೆಕ್, ಶಿರೂರು ಜಲಾಶಯ (ಮಾಕೆಂಡೇಯ) 8 ಸಾವಿರ ಕ್ಯುಸೆಕ್ ಹಾಗೂ ಬಳ್ಳಾರಿ ನಾಲಾದಿಂದ 5 ಸಾವಿರ ಕ್ಯುಸೆಕ್ ಸೇರಿ ಒಟ್ಟು 82 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿರುವುದರಿಂದ ಗೋಕಾಕದ ಹಳೇ ದನಗಳ ಪೇಟೆ, ಡೋರ ಓಣಿ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಸಿಂದಿ ಕೂಟದಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 12ಕ್ಕೂ ಅಧಿಕ ಕೈಗಾರಿಕೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಜನರು ಜಾನುವಾರುಗಳ ಜೊತೆಗೆ, ಅವಶ್ಯಕ ಸಾಮಗ್ರಿ ತೆಗೆದುಕೊಂಡು ಮನೆ ಖಾಲಿ ಮಾಡಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹ ಪೀಡಿತ ಸ್ಥಳಕ್ಕೆ ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಮಾಜಿ ಜಿಪಂ ಸದಸ್ಯ ಟಿ.ಆರ್. ಕಾಗಲ್, ಶಾಸಕ ಕಚೇರಿ ಸಹಾಯಕ ಸುರೇಶ ಸನದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
150ಕ್ಕೂ ಅಧಿಕ ಕುಟುಂಬಗಳ ಸ್ಥಳಾಂತರ:
ಗೋಕಾಕ ನಗರಕ್ಕೆ ಜಲಕಂಟಕ ಎದುರಾಗಿದ್ದರಿಂದ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾಗೂ ಎಪಿಎಂಸಿಯಲ್ಲಿ ಎರಡು ಕಾಳಜಿ ಕೇಂದ್ರ ತೆರೆಯಲಾಗಿದೆ. ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮಧ್ಯಾಹ್ನದ ವೇಳೆಗೆ 110 ಕುಟುಂಬಗಳ 400 ಜನರು ಆಶ್ರಯ ಪಡೆದಿದ್ದಾರೆ. ಎಪಿಎಂಸಿಯಲ್ಲಿನ ಕಾಳಜಿ ಕೇಂದ್ರದಲ್ಲಿ 45 ಕುಟುಂಬದ ಒಟ್ಟು 150 ಜನರು ಆಶ್ರಯ ಪಡೆದಿದ್ದಾರೆ. ಕಾಳಜಿ ಕೇಂದ್ರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಹಾರ ಧಾನ್ಯ ವಿತರಿಸಲಾಗಿದ್ದು, ಶಿಕ್ಷಣ ಇಲಾಖೆಯ ಮಧ್ಯಾಹ್ನ ಬಿಸಿಯೂಟ ಸಿಬ್ಬಂದಿ ರುಚಿಕರವಾದ ಭೋಜನ ತಯಾರಿಸಿ ಆಶ್ರಯ ಪಡೆದಿರುವ ಜನರಿಗೆ ಊಟ ಬಡಿಸುತ್ತಿದ್ದಾರೆ.
ಜಾನುವಾರುಗಳಿಗೆ ಲಸಿಕೆ:ಪ್ರವಾಹ ಪೀಡಿತ ಪ್ರದೇಶದ ಜನರು ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಮತ್ತು ಎಂಪಿಎಂಸಿಯಲ್ಲಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದರೆ, ಜಾನುವಾರುಗಳಿಗೆ ಪ್ರತ್ಯೇಕ ಆಶ್ರಯ ಕಲ್ಪಿಸಲಾಗಿದ್ದು, ಪಶು ಸಂಗೋಪನೆ ಇಲಾಖೆಯಿಂದ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ದನ ಕರುಗಳಿಗೆ ಗಂಟಲು ಬೇನೆ ಲಸಿಕೆ ನೀಡಲಾಗುತ್ತಿದೆ.
ಲೋಳಸೂರ, ಚಿಕ್ಕೋಳಿ ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಮುಳುಗಡೆಯಾಗಿರುವ ಸೇತುವೆಗಳನ್ನು ನೋಡಲು ಜನರು ತಂಡೋಪತಂಡವಾಗಿ ಬರುತ್ತಿರುವ ಪರಿಣಾಮ ಅವರನ್ನು ನದಿ ದಡದತ್ತ ತೆರಳದಂತೆ ತಡೆಯಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಪಿಎಸ್ಐ ಕೆ.ವಾಲಿಕರ ನೇತೃತ್ವದಲ್ಲಿ ನಗರದ ನದಿ ತೀರದ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಡುಗಡ್ಡೆಯಾದ ಗ್ರಾಮ:
ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮಕ್ಕೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿದೆ. ಗ್ರಾಮಕ್ಕೆ ತಹಸೀಲ್ದಾರ್ ಶನಿವಾರ ತಹಸೀಲ್ದಾರ್ ಮೋಹನ್ ಬಿಸ್ಮೆ ಭೇಟಿ ಪರಿಸ್ಥಿತಿ ಅವಲೋಕನ ಮಾಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ 6 ಗ್ರಾಮಗಳಿಗೆ ನೀರು ನುಗ್ಗಿದೆ, ಗೋಕಾಕ ನಗರಕ್ಕೂ ನೀರು ಬಂದಿದೆ. ಗೋಕಾಕದಲ್ಲಿ
6 ಕಾಳಜಿ ಕೇಂದ್ರ ತೆರೆಯಲಾಗಿದೆ. ಘಟಪ್ರಭಾ ಜಲಾಶಯದಿಂದ ಇನ್ನೂ 10 ಸಾವಿರ ಕ್ಯುಸೆಕ್ ನೀರು ಬಿಟ್ಟರೆ ಮತ್ತಷ್ಟು ಸಮಸ್ಯೆ ಉದ್ಭವಿಸಲಿದೆ. ತಾಲೂಕಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ನದಿಪಾತ್ರದ ಜನರೂ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಪೆಟ್ರೋಲ್ ಬಂಕ್ ಕೆಳಗೆ ಸಂತ್ರಸ್ತರ ವಾಸ:
ಘಟಪ್ರಭಾ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ನದಿಪಾತ್ರದ ಅನೇಕ ಗ್ರಾಮಗಳಿಗೆ ನೀರುನುಗ್ಗಿದೆ. ತಾಲೂಕಿನ ಚಿಗಡೊಳ್ಳಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ನೂರಾರು ಜನರು ಮನೆಗಳನ್ನು ತೊರೆದಿದ್ದಾರೆ. ಆದರೆ, ತಾಲೂಕಾಡಳಿತ ಕಾಳಜಿ ಕೇಂದ್ರ ತೆರೆಯದ್ದರಿಂದ ಇಲ್ಲಿನ ಜನರು ರಸ್ತೆ ಬದಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಆಶ್ರಯ ಪಡೆದಿದ್ದಾರೆ. ಕೆಲವರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಆಶ್ರಯ ಪಡೆದಿದ್ದಾರೆ.