ಸಾರಾಂಶ
ತುಂಗಭದ್ರಾ ನದಿಯಿಂದ ಕೆರೆ ತುಂಬುವ ಯೋಜನೆಯಡಿ ತಾಲೂಕಿನ ಹಲವು ಕೆರೆಗಳು ತುಂಬಿಲ್ಲ. ಅದಕ್ಕಾಗಿ ಕೃಷ್ಣ ಬಿ ಸ್ಕೀಂ ಯೋಜನೆ ವಿಸ್ತರಿಸಿ ಕನಕಗಿರಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ತುಂಗಭದ್ರಾ ನದಿಯಿಂದ ಎಡದಂಡೆ ಕಾಲುವೆಗೆ ಏ. ೨೦ರ ವರೆಗೆ ನೀರು ಹರಿಸಬೇಕು.
ಕನಕಗಿರಿ:
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಏ. ೨೦ರ ವರೆಗೆ ನೀರು ಹರಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಸಂಸ್ಥಾಪಕ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ತುಂಗಭದ್ರಾ ನದಿಯಿಂದ ಕೆರೆ ತುಂಬುವ ಯೋಜನೆಯಡಿ ತಾಲೂಕಿನ ಹಲವು ಕೆರೆಗಳು ತುಂಬಿಲ್ಲ. ಅದಕ್ಕಾಗಿ ಕೃಷ್ಣ ಬಿ ಸ್ಕೀಂ ಯೋಜನೆ ವಿಸ್ತರಿಸಿ ಕನಕಗಿರಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ತುಂಗಭದ್ರಾ ನದಿಯಿಂದ ಎಡದಂಡೆ ಕಾಲುವೆಗೆ ಏ. ೨೦ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಧಾರ್ಮಿಕ ಹಾಗೂ ಐತಿಹಾಸಿಕ ಪ್ರಸಿದ್ಧಿಯಾದ ಕನಕಗಿರಿಯಲ್ಲಿ ಕೆಲ ರೆಸಾರ್ಟ್ಗಳು ಅಕ್ರಮವಾಗಿ ನಡೆಯುತ್ತಿದ್ದು, ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇದರಿಂದ ಪಟ್ಟಣದ ಗೌರವ ಹರಾಜಾಗುತ್ತಿದೆ. ಜಂಗಲ್ ರೆಸಾರ್ಟ್ನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಕಾನೂನು ಬಾಹಿರವಾಗಿ ಆತನ ಶವ ಸಾಗಣೆ ಮಾಡಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿದ ಮಟ್ಕಾ, ಅಕ್ರಮ ಮರಳು ಸಾಗಣೆಗೆ ಪೊಲೀಸರೇ ಬೆಂಗಾವಲಾಗಿರುವ ಆರೋಪಗಳಿವೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಹುಲಿಹೈದರ ಗ್ರಾಮದಲ್ಲಿ ಪಿಯು ಕಾಲೇಜ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು. ಕನಕಗಿರಿ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟೀನ್, ಪಟ್ಟಣದಲ್ಲಿ ಸಬ್ ರೆಜಿಸ್ಟ್ರಾರ್ ಕಚೇರಿ ಆರಂಭಿಸಬೇಕು. ಜೆಸ್ಕಾಂ ಎಇಇ ಕಚೇರಿ ಮಂಜೂರು ಬಗ್ಗೆ ಸ್ಪಷ್ಟನೆ ನೀಡಬೇಕು. ಕನಕಗಿರಿ ಧೂಳು ಮುಕ್ತ ಮಾಡಬೇಕು. ಶೀಘ್ರ ಕನಕಗಿರಿ ಉತ್ಸವದ ದಿನಾಂಕ ನಿಗದಿಪಡಿಸಬೇಕು. ಕಿರಿದಾಗಿರುವ ಹುಲಿಹೈದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಪಂಪಾಪತಿ ಅಕ್ಕಸಾಲಿ, ಆದೇಶ, ಶೇಖರಪ್ಪ, ಮಹೇಶ, ಆಂಜನೇಯ ಬಿ, ಬಸವರಾಜ, ವೀರೇಶ, ಹನುಮನಗೌಡ ಇದ್ದರು.