ಅಲೆಗಳ ಅಬ್ಬರ : ಮುರ್ಡೇಡೇಶ್ವರ ಕಡಲಲ್ಲಿ ಪ್ರವಾಸಿಗರಿಗೆ ನೋ ಎಂಟ್ರಿ

| N/A | Published : May 26 2025, 01:05 AM IST / Updated: May 26 2025, 12:24 PM IST

ಸಾರಾಂಶ

ಮುಂಜಾಗ್ರತಾ ಕ್ರಮವಾಗಿ ಸಮುದ್ರಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿ ಪೊಲೀಸ್ ಕಾವಲು ಹಾಕಲಾಗಿದೆ.

ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳ ಅಬ್ಬರ ಮಧ್ಯೆಯೂ ಪ್ರವಾಸಿಗರು ಈಜಾಡಲು ಸಮುದ್ರಕ್ಕಿಳಿಯತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮುದ್ರಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿ ಪೊಲೀಸ್ ಕಾವಲು ಹಾಕಲಾಗಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 2 - 3  ದಿನಗಳ ಕಾಲ ಭಾರೀ ವೇಗದಲ್ಲಿ ಗಾಳಿ ಬೀಸುವ ಹಾಗೂ ಮಳೆಯಾಗುವ ಸಂಭವ ಇದೆ. ಸಮುದ್ರದಲ್ಲಿ ಅಲೆಗಳು ಎತ್ತರಕ್ಕೆ ಏರುವ ಕಾರಣ ಮೀನುಗಾರಿಕೆಗೆ ಹಾಗೂ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯ ಪ್ರಕಟಣೆ ಹೊರಡಿಸಿತ್ತು. ಮುರ್ಡೇಶ್ವರದಲ್ಲಿ ಮಾತ್ರ ಇದ್ಯಾವುದೂ ನಮಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು- ಮಸ್ತಿಗಿಳಿದಿದ್ದರು. ಜಿಲ್ಲೆಯ ಮಾಜಾಳಿಯಿಂದ ಗೊರಟೆಯ ತನಕ ಸಮುದ್ರದಲ್ಲಿ ಮೀನುಗಾರಿಕೆ ಹಾಗೂ ಸಮುದ್ರದಲ್ಲಿಯ ಎಲ್ಲ ಚಟುವಟಿಕೆ ರದ್ದು ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಲಾಗಿದ್ದರು ಸಹ ಮುರ್ಡೇಶ್ವರದಲ್ಲಿ ಕೆಲವು ಪ್ರವಾಸಿಗರು ಸಮುದ್ರಕ್ಕೆ ಇಳಿದು ಮೋಜು- ಮಸ್ತಿ ಮಾಡುತ್ತಿದ್ದರು.

ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರು ಸಮುದ್ರದಂಚಿನಲ್ಲಿರುವ ಲೈಫ್ ಗಾರ್ಡ್‌ ಹಾಗೂ ಪೊಲೀಸರ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಿವುದನ್ನು ನಿಯಂತ್ರಿಸಲು ಮುರ್ಡೇಶ್ವರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಣಮಂತ ಬಿರಾದಾರ ಮತ್ತು ಸಿಬ್ಬಂದಿ ಸಮುದ್ರಕ್ಕೆ ಹೋಗುವ ದಾರಿಯನ್ನೇ ಬಂದ್ ಮಾಡಿ ಪೊಲೀಸ್ ಕಾವಲು ಹಾಕಿದ್ದಾರೆ. ವರ್ಷಂಪ್ರತಿ ಮಳೆಗಾಲದಲ್ಲಿ ಅಲೆಗಳ ಅಬ್ಬರಕ್ಕೆ ಪ್ರವಾಸಿಗರು ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಾರೆ. ಈ ಬಾರಿ ಯಾವುದೇ ಅವಘಡ ಉಂಟಾಗಬಾರದೆಂದು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Read more Articles on