ಬ್ಯಾಡಗಿ: ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ರೈತರ ಸಂಘ ನಡೆಸುತ್ತಿದ್ದೇವೆ. ರೈತರಿಗೆ ಅನ್ಯಾಯವಾದಲ್ಲಿ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೇಂಚಳ್ಳೇರ ಎಚ್ಚರಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಪಟ್ಟಣದ ರೈತ ಸಂಘದ ಕಾರ‍್ಯಾಲಯದಲ್ಲಿ ಆಯೋಜಿಸಲಾಗಿದ್ದ ದಿ.ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಾಜ್ಯ ಸರ್ಕಾರ ತಂದಿರುವ ನಿಯಮಗಳಿಂದಾಗಿ ಅಕ್ರಮ ಸಕ್ರಮದಲ್ಲಿ ರೈತರು ವಿದ್ಯುತ್ ಪಡೆಯುವುದು ಬಡ ರೈತರ ಪಾಲಿಗೆ ಅಸಾಧ್ಯದ ಕೆಲಸವಾಗಿದೆ, ಒಂದು ಟಿಸಿ ಅಳವಡಿಕೆ ಮಾಡಿಕೊಳ್ಳಲು ಲಕ್ಷಾಂತರ ರುಪಾಯಿ ಭರಣ ಮಾಡುವ ಸ್ಥಿತಿ ಎದುರಾಗಿದೆ, ನಾವೇನು ನಿಮ್ಮ ಆಸ್ತಿ ಕೇಳುತ್ತಿಲ್ಲ ಬದಲಾಗಿ ಹೊಲಕ್ಕೆ ವಿದ್ಯುತ ಕೊಟ್ಟರೇ ನಿಮಗೆ ಅನ್ನದ ರೂಪದಲ್ಲಿ ಅದನ್ನ ವಾಪಸ್ ನೀಡಲಿದ್ದೇವೆ. ಆದ್ದರಿಂದ ಮೊದಲಿದ್ದ ಹಾಗೆ ನಿಯಮ ಮುಂದುವರೆಸಿ ರೈತರಿಗೆ ಟಿಸಿ ಕೊಟ್ಟು ಅನೂಕೂಲ ಮಾಡಿಕೊಡಿ ಎಂದರು.ಮಹಾನ್ ಚೇತನ: ಪ್ರೊ.ಪಿ.ಟಿ.ಲಕ್ಕಣ್ಣನವರ ಮಾತನಾಡಿ, ಪ್ರೊ. ಎಂ.ಡಿ.ನಂಜುಂಡಸ್ವಾಮಿ 1980ರಿಂದ ರೈತರ ಹಕ್ಕುಗಳಿಗಾಗಿ ಹೋರಾಟ, ಬಹು ರಾಷ್ಟ್ರೀಯ ಕಂಪನಿಗಳ ವಿರುದ್ಧ ಹಾಗೂ ಜಿಡಿಪಿ ವಿರೋಧಿಸಿ ಹಲವು ರೈತ ಪರ ಹೋರಾಟ ನಡೆಸಿ ರೈತ ಕುಲದ ಉಳಿವಿಗಾಗಿ ಶ್ರಮಿಸಿದ ಮಹಾನ್ ಚೇತನ ಎಂದರು.ಸಮಾವೇಶಲ್ಲಿ ಪರಿಹಾರ ನೀಡಲಿ:ಮುಖಂಡ ಗಂಗಣ್ಣ ಎಲಿ ಮಾತನಾಡಿ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಬದಲಾಗಿ ಸರಕಾರ ರೈತರನ್ನ ಹತ್ಯೆ ಮಾಡುತ್ತಿದೆ. ಒಂದೆಡೆ ಅತೀವೃಷ್ಟಿ, ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದರೆ ಇದೀಗ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ, ತಾಲೂಕಿನ ರೈತ ನಾಗರಾಜ ಬಿದರಿ ಅವರ ಕುಟುಂಬ 8 ದಿನಗಳ ತಡವಾಗಿ ಅರ್ಜಿ ಸಲ್ಲಿಸಿದೆ ಎಂಬ ಕಾರಣ ನೀಡಿ ಪರಿಹಾರ ನೀಡದೇ ರಾಜ್ಯ ಸರಕಾರ ರೈತರ ಸಾವಿನಲ್ಲೂ ಸಹ ರಾಜಕೀಯ ಮಾಡುತ್ತಿದೆ, ಇಂತಹ 30ಕ್ಕೂ ಹೆಚ್ಚು ಪ್ರಕರಣ ರಾಜ್ಯದಲ್ಲಿದ್ದು ಮೃತರ ಕುಟುಂಬಕ್ಕೆ ರಾಜ್ಯದ ಮುಖ್ಯ ಮಂತ್ರಿಗಳೇ ಸಮಾವೇಶದಲ್ಲಿ ಪರಿಹಾರ ನೀಡಲಿ ಎಂದರು.ರೈತರ ಶವದ ಮೇಲೆ ಸಮಾವೇಶ: ತಾಲೂಕಾಧ್ಯಕ್ಷ ರುದ್ರನಗೌಡ್ರ ಕಾಡನಗೌಡ್ರ ಮಾತನಾಡಿ, ಸಾಲ ಬಾಧೆಯಿಂದ ಆತ್ಮ ಹತ್ಯೆ ಮಾಡಿ ಕೊಂಡ ರೈತರ ಸಾವಿಗೆ ಸರಕಾರ ನೇರವಾಗಿ ಹೊಣೆ. ಆತ್ಮಹತ್ಯೆ ಮಾಡಿ ಕೊಂಡ ರೈತರ ಕುಟುಂಬಗಳಿಗೆ 3 ವರ್ಷವಾದರೂ ಪರಿಹಾರ ನೀಡಲಾಗುತ್ತಿಲ್ಲ ಇದೀಗ ರೈತರ ಶವಗಳ ಮೇಲೆ ನಿಮ್ಮ ಸಾಧನಾ ಸಮಾವೇಶ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಮೊದಲು ರೈತರ ಬೇಡಿಕೆ ಈಡೇರಿಕೆಗೆ ಮುಂದಾಗಿ ಇಲ್ಲದೇ ಹೋದಲ್ಲಿ ತಿನ್ನಲು ನಿಮ್ಮಗಳ ತಟ್ಟೆಯಲ್ಲಿ ಒಂದು ಅಗಳು ಅನ್ನವು ಸಿಗದಂತಾಗುತ್ತದೆ ಎಂದರು. ಎಚ್.ಎಚ್.ಮುಲ್ಲಾ, ಮರೀಗೌಡ್ರ, ಮೌನೇಶ ಕಮ್ಮಾರ, ಸೇರಿದಂತೆ ಹಲವು ರೈತ ಮುಖಂಡರು ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನ ರೈತ ಸಂಘದ ಅಧ್ಯಕ್ಷರು ಸದಸ್ಯರು ಪದಾಧಿಕಾರಿಗಳು ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.