ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಜಿಲ್ಲೆಗೆ ಬೊಗಸೆ ನೀರು ಕೊಟ್ಟರೆ ಸಾಕು ಇಲ್ಲಿನ ಭೂಮಿ ಅಮೆರಿಕದ ಕ್ಯಾಲಿಫೋರ್ನಿಯಾವನ್ನೇ ಮೀರಿಸುತ್ತದೆ ಎಂದು ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗಳು ಹೇಳುತ್ತಿದ್ದರು. ಜಿಲ್ಲೆಯ ರೈತರು ಅಭಿವೃದ್ಧಿಯಾಗಬೇಕು ಎಂಬ ಶ್ರೀಗಳ ಮಹದಾಸೆಯನ್ನು ನೀರಾವರಿ ಮಾಡುವ ಮೂಲಕ ನಾವು ಈಡೇರಿಸಿದ್ದೇವೆ. ಇದೀಗ ತಿಕೋಟಾದ ರೈತರು ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ದ್ರಾಕ್ಷಿ ಬೆಳೆದಿದ್ದು, ಅದನ್ನು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಗಳ ಪಾದಚರಣಗಳಿಗೆ ನಾವು ಅರ್ಪಿಸುತ್ತೇವೆ ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ನಗರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಮಹಾಸ್ವಾಮೀಜಿಯವರ ಆಶಯದಂತೆ ತಿಕೋಟಾದ ಕೃಷ್ಣವೇಣಿ ಎಫ್.ಬಿ.ಒ (ಫಾರ್ಮರ್ಸ್ ಪ್ರೊಡ್ಯೂಜರ್ಸ್ ಆರ್ಗಾನೈಜೇಶನ್) ಇಂದು ಮಹಾರಾಷ್ಟ್ರದ ನಾಸಿಕನ ಸಹ್ಯಾದ್ರಿ ಫಾರ್ಮ್ಸ್ನ ವಿಲಾಸರಾವ ಶಿಂಧೆ ಅವರ ಸಹಯೋಗದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಔರಾ-36 ತಳಿಯ ದ್ರಾಕ್ಷಿಯ ಬೆಳೆಯನ್ನು 100 ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಅದರಂತೆ ತಿಕೋಟಾದಲ್ಲಿಯೂ ತೋಟಗಾರಿಕೆ ಪದವೀಧರರಾಗಿರುವ ಸಂದೀಪ ಪಾಟೀಲ, ಹಡಲಸಂಗದ ಸಚೀನ ಪಾಟೀಲರು ಸೇರಿ ಸ್ಥಳೀಯ ರೈತರ ತಂಡ ಕಟ್ಟಿ ತಿಕೋಟಾದಲ್ಲೂ ಔರಾ-36 ತಳಿಯ ದ್ರಾಕ್ಷಿಯ ಬೆಳೆ ಬೆಳೆದಿದ್ದಾರೆ.
ಇದಕ್ಕೆ ನನ್ನ ಹಿರಿಯಪುತ್ರ ಬಸನಗೌಡ ಪಾಟೀಲ ಹಾಗೂ ಬಿ.ಎಲ್.ಡಿ.ಇ ತಂಡ ನಾಸಿಕಗೆ ಹೋಗಿ ಭೇಟಿಯಾಗಿ ಅವರನ್ನು ಜಿಲ್ಲೆಯಲ್ಲಿನ ರೈತರಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದರು. ಈ ದ್ರಾಕ್ಷಿಯ ತಳಿಯಿಂದ ವಿಜಯಪುರ ದ್ರಾಕ್ಷಿ ಬೆಳೆಗಾರರ ಆದಾಯ ಮೂರು ಪಟ್ಟು ಹೆಚ್ಚಾಗುತ್ತದೆ. ಇದರಿಂದ ರೈತರ ಆರ್ಥಿಕ ಬಲವರ್ಧನೆ ಆಗುತ್ತದೆ. ಈ ಮೂಲಕ ಸಿದ್ದೇಶ್ವರ ಸ್ವಾಮೀಜಿಯವ ಕನಸು ನನಸಾಗಿದೆ. ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟದರ್ಜೆಯ ಔರಾ-36 ತಳಿಯ ದ್ರಾಕ್ಷಿಯ ಬೆಳೆ ತಿಕೋಟಾದಲ್ಲಿಯೂ ಕಂಗೊಳ್ಳಿಸುತ್ತಿದೆ ಎಂದರು.ಇದೇ ವೇಳೆ ತಿಕೋಟಾದಲ್ಲಿ ತಾವು ಬೆಳೆದಿದ್ದ ಕ್ಯಾಲಿಫೋರ್ನಿಯಾದ ದ್ರಾಕ್ಷಿಯನ್ನು ಸಚಿವ ಎಂ.ಬಿ.ಪಾಟೀಲರಿಗೆ ತಿನಿಸಿ ಬೆಳೆಗಾರರು ಸಂಭ್ರಮಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣವೇಣಿ ಎಫ್ಬಿಒ ಪದಾಧಿಕಾರಿಗಳಾದ ಸಂದೀಪ ಪಾಟೀಲ, ಸಚೀನ ಪಾಟೀಲ, ರೈತರಾದ ಸಂದೀಪ ಪಾಟೀಲ, ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ ಉಪಸ್ಥಿತರಿದ್ದರು.ಸಿದ್ದೇಶ್ವರ ಶ್ರೀಗಳು ನಮಗೆ ಮಾರ್ಗದರ್ಶನ ಮಾಡಿದಂತೆ, 2013-18ರಲ್ಲಿ ನಾನು ನೀರಾವರಿ ಮಂತ್ರಿಯಾದ ಮೇಲೆ ಹಲವು ಯೋಜನೆಗಳ ಮೂಲಕ ₹14 ಸಾವಿರ ಕೋಟಿ ಮೌಲ್ಯದ ಯೋಜನೆಗಳಲ್ಲಿ 100 ಟಿಎಂಸಿ ಯಷ್ಟು ನೀರಿನ ಯೋಜನೆಗಳನ್ನು ಆರಂಭಿಸಲಾಗಿದೆ. ಆಲಮಟ್ಟಿ ಡ್ಯಾಂನಿಂದ ಸುಮಾರು ಒಂದು ಸಾವಿರ ಕಿ.ಮೀ ಮುಖ್ಯ ಕಾಲುವೆಗಳು, ಬಿಡಿ ಕಾಲುವೆಗಳು, ಉಪ ಕಾಲುವೆಗಳು ಮಾಡಲಾಗಿದೆ. ಅನೇಕ ನೀರಾವರಿ, ಕೆರೆ ತುಂಬುವ ಯೋಜನೆಗಳನ್ನು ರೂಪಿಸಲಾಗಿದೆ. ಇದೀಗ ತಿಕೋಟಾದ ರೈತರು ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಈ ದ್ರಾಕ್ಷಿ ತಳಿ ಬೆಳೆದಿದ್ದು, ಅವರ ಆದಾಯ ಮೂರುಪಟ್ಟು ಹೆಚ್ಚಾಗಲಿದೆ. ನೀರಾವರಿ ಆಗಿರುವುದರಿಂದ ಹೈನುಗಾರಿಕೆ ಆಗಬೇಕು, ಹೊಸಹೊಸ ಕೃಷಿ ವಿಧಾನಗಳು ಹಾಗೂ ಹೊಸಹೊಸ ಬೆಳೆಗಳು ಬರಬೇಕು ಎಂದು ಪ್ರಯತ್ನಿಸುತ್ತಿದ್ದೇವೆ.
- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ವಿಜಯಪುರ