ಸಾರಾಂಶ
ಮಾದಕ ವಸ್ತುಗಳ ಸಾಗಾಣೆ ಅಥವಾ ಮಾರಾಟ ಹಾಗೂ ಸೇವನೆ ಕೂಡ ಅಪರಾಧ ಎಂಬುದನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ಈ ವ್ಯಸನಕ್ಕೆ ಯುವಜನತೆ ಹೆಚ್ಚಾಗಿ ಬಲಿಯಾಗುತ್ತಿರುವುದು ದೇಶದ ಅಭಿವೃದ್ದಿಗೆ ಮಾರಕವಾಗುತ್ತಿದೆ. ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂಬುದನ್ನು ಮರೆಯಬಾರದು.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ದೇಶದ ಅಭಿವೃದ್ದಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆ ತಡೆಗಟ್ಟುವುದು ಕೇವಲ ಸರ್ಕಾರ ಅಥವಾ ಅಧಿಕಾರಿಗಳ ಜವಾಬ್ದಾರಿ ಎಂಬ ಭಾವನೆಯನ್ನು ಬಿಟ್ಟು ಪ್ರತಿಯೊಬ್ಬರೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಮುಂದಾಗಬೇಕು ಎಂದು ಗುಡಿಬಂಡೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಣೇಶ್ ತಿಳಿಸಿದರು.ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುಡಿಬಂಡೆ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲೆಗಳ ಸಹಯೋಗದಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ಮದ್ಯ ವಸ್ತುಗಳ ಸೇವನೆಯನ್ನು ನಿಯಂತ್ರಿಸದೆ ಹೋದರೆ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟ ಎಂದರು.
ಮಾದಕ ವಸ್ತು ಸೇವನೆ ಅಪರಾಧಮಾದಕ ವಸ್ತುಗಳ ಸಾಗಾಣೆ ಅಥವಾ ಮಾರಾಟ ಹಾಗೂ ಸೇವನೆ ಕೂಡ ಅಪರಾಧ ಎಂಬುದನ್ನು ತಿಳಿದುಕೊಳ್ಳಬೇಕು. ಮುಖ್ಯವಾಗಿ ಈ ವ್ಯಸನಕ್ಕೆ ಯುವಜನತೆ ಹೆಚ್ಚಾಗಿ ಬಲಿಯಾಗುತ್ತಿರುವುದು ದೇಶದ ಅಭಿವೃದ್ದಿಗೆ ಮಾರಕವಾಗುತ್ತಿದೆ. ಇಂದಿನ ಯುವಕರೇ ನಾಳಿನ ಪ್ರಜೆಗಳು ಎಂಬುದನ್ನು ಮರೆಯಬಾರದು. ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾಗದೇ ಓದಿನ ಕಡೆಗೆ ಗಮನ ಹರಿಸಬೇಕು. ಮಾದಕ ವಸ್ತುಗಳ ಬಳಕೆ ಅಥವಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸರಿಗೆತಿಳಿಸುವಂತೆ ಕೋರಿದರು.
ಬಳಿಕ ಶಿಕ್ಷಣ ಇಲಾಖೆಯ ಟಿಪಿಒ ಮುರಳಿ ಮಾತನಾಡಿ, ಮೋಜಿಗಾಗಿ ಒಂದು ಬಾರಿ ಈ ಚಟಕ್ಕೆ ದಾಸರಾದರೇ, ಇಡೀ ಜೀವನವೇ ಹಾಳಾದಂತೆ. ಈ ವ್ಯಸನಕ್ಕೆ ಬಲಿಯಾದ ಅನೇಕ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಮುಖ್ಯವಾಗಿ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಪರಿಣಮಿಸಲಿದೆ. ಆದ್ದರಿಂದ ಇದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಹೊಣೆ ಎಂದರು.