ಭಾರತದಲ್ಲಿ ಪ್ರತಿಭಾನ್ವಿತರಿದ್ದಾರೆ. ಸಬಲ ಸಂಸ್ಥೆಗಳಿವೆ. ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ಬೇರೆಡೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಮಾತ್ರ ನಾವು ಬಳಸದೆ ನಮ್ಮದೆಯಾದ ಪರಿಹಾರಗಳನ್ನು ರಚಿಸುವುದು ತುರ್ತಾಗಿದೆ.
ಧಾರವಾಡ:
ಅವಕಾಶ ಹುಡುಕುವುದು ಮಾತ್ರವಲ್ಲದೆ ಅವಕಾಶ ಸೃಷ್ಟಿಸುವ ಯುವ ಎಂಜನಿಯರ್ಗಳ ಅಗತ್ಯತೆ ಹೆಚ್ಚಿದೆ ಎಂದು ರಾಷ್ಟ್ರೀಯ ಅನುಸಂಧಾನ ಸಂಶೋಧನಾ ಪ್ರತಿಷ್ಠಾನದ ಪ್ರಾಧ್ಯಾಪಕ ಪ್ರೊ. ಭೀಮಸಿಂಗ್ ಹೇಳಿದರು.ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) 7ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ಭಾರತದಲ್ಲಿ ಪ್ರತಿಭಾನ್ವಿತರಿದ್ದಾರೆ. ಸಬಲ ಸಂಸ್ಥೆಗಳಿವೆ. ದೊಡ್ಡ ಮಾರುಕಟ್ಟೆ ಇದೆ. ಹೀಗಾಗಿ ಬೇರೆಡೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಮಾತ್ರ ನಾವು ಬಳಸದೆ ನಮ್ಮದೆಯಾದ ಪರಿಹಾರಗಳನ್ನು ರಚಿಸುವುದು ತುರ್ತಾಗಿದೆ. ಪ್ರಸ್ತುತ ತಾವು ಪಡೆದ ಪದವಿ ನಿಮ್ಮ ಸಾಧನೆಗೆ ಸಿಕ್ಕ ಮನ್ನಣೆ ಮಾತ್ರವಲ್ಲ, ಅದು ನಿಮ್ಮಿಂದ ಏನೋ ನಿರೀಕ್ಷಿಸುತ್ತಿರುವ ಜ್ಞಾಪನೆ ಎಂದ ಅವರು, ದೇಶಕ್ಕೆ ಉದ್ಯೋಗಾಕಾಂಕ್ಷಿಗಳಷ್ಟೇ ಬೇಕಾಗಿಲ್ಲ. ಚಿಂತಕರ, ಉದ್ಯೋಗ ಸೃಷ್ಟಿಸುವವರ ಅಗತ್ಯತೆ ಇದೆ. ತಮ್ಮ ಜ್ಞಾನ ಮತ್ತು ತಂತ್ರಜ್ಞಾನ ಸಮಸ್ಯೆಗಳ ಪರಿಹಾರದ ಸಂಪತ್ತಾಗಿ ಪರಿವರ್ತಿಸಬಲ್ಲವರು ಬೇಕಾಗಿದ್ದಾರೆ ಎಂದರು.
ನಿಮ್ಮ ಹಿನ್ನೆಲೆ ನಿಮ್ಮ ಭವಿಷ್ಯ ನಿರ್ಧರಿಸುವುದಿಲ್ಲ. ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆ ನಿಮ್ಮ ಬದುಕನ್ನು ನಿರ್ಧರಿಸಲಿದೆ. ದೊಡ್ಡ ಅವಕಾಶಗಳು ಅಸ್ತಿತ್ವದಲ್ಲಿರುವ ಸಮಸ್ಯೆಗಳ ಒಳಗೆ ಅಡಗಿರುತ್ತವೆ. ಏನು ತಪ್ಪಾಗಿದೆ? ಎಂದು ಕೇಳುವ ಬದಲು, ಅದನ್ನು ಹೇಗೆ ಸರಿಪಡಿಸಬಹುದು ಎಂಬುದರ ಬಗ್ಗೆಯೂ ಯೋಚಿಸಬೇಕು. ಇಂದು ಒಂದು ಸಣ್ಣ ಯೋಜನೆಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಯು ನಾಳೆ ಕಂಪನಿಯ ಸ್ಥಾಪಕನಾಗಬಹುದು. ಸಂಶೋಧನಾ ಕಲ್ಪನೆಯು ಉತ್ಪನ್ನವಾಗಬಹುದು. ತರಗತಿಯ ಚರ್ಚೆಯು ಜೀವನವನ್ನು ಬದಲಾಯಿಸುವ ತಂತ್ರಜ್ಞಾನವಾಗಬಹುದು. ಹೀಗಾಗಿ ಸಮಸ್ಯೆಯನ್ನು ಗುರುತಿಸಿ ಪರಿಹರಿಸುವ ದೃಢಸಂಕಲ್ಪವನ್ನು ಪದವೀಧರರು ಹೊಂದಬೇಕು ಎಂದರು.ಇಂಧನ, ನೀರು ನಿರ್ಣಾಯಕ:
ಟಾಟಾ ಪವರ್ ರಿನಿವೆಬಲ್ ಮೈಕ್ರೋಗ್ರಿಡ್ ಸಿಇಒ ಮನೋಜ ಗುಪ್ತಾ ಮಾತನಾಡಿ, ಪ್ರಸ್ತುತ ದೇಶದ ಬೆಳವಣಿಗೆಗೆ ಇಂಧನ ಮತ್ತು ನೀರು ನಿರ್ಣಾಯಕ. ಆದ್ದರಿಂದ ಕಡಿಮೆ ವೆಚ್ಚದಲ್ಲಿ ಶುದ್ಧ ನೀರು ಒದಗಿಸುವ ತಂತ್ರಜ್ಞಾನ ರೂಪಿಸಬೇಕು. ಕಡಿಮೆ ಇಂಧನ ಬಳಸುವ ಮತ್ತು ಇಂಧನ ಸ್ವಾವಲಂಬನೆ ಸಾಧಿಸುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.ಪ್ಯಾನ್ ಐಐಟಿ ಅಧ್ಯಕ್ಷ ಪ್ರಭಾತಕುಮಾರ ಮಾತನಾಡಿ, ಪ್ರತಿಭೆ ಕೇವಲ ವೈಯಕ್ತಿಕ ಆಸ್ತಿ ಅಲ್ಲ. ಅದು ರಾಷ್ಟ್ರದ ಅಮೂಲ್ಯ ಸಂಪತ್ತು. ಅದನ್ನು ದೇಶದ ಪ್ರಗತಿಗೆ ಬಳಸಬೇಕು. ದೇಶ ನಿರ್ಮಾಣವೇ ಐಐಟಿಯ ಉದ್ದೇಶ. ಕೇವಲ ಸ್ಟಾರ್ಟ್ ಅಪ್ ಕಟ್ಟಿ, ಲಾಭ ಮಾಡಿಕೊಂಡು ಅದರಿಂದ ಹೊರಬರುವ ಮನೋಭಾವನೆ ಬೇಡ. ಬದಲಿಗೆ ಸಂಶೋಧನೆ ಆಗಬೇಕಿದೆ ಎಂದು ಪ್ರತಿಪಾದಿಸಿದರು.
ಧಾರವಾಡ ಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶರದಕುಮಾರ ಸರಾಫ್, ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿದರು.------------
ಬಾಕ್ಸ್..ಗೌಡಾ ಸ್ವೀಕರಿಸಿದ ಸುಧಾ ಮೂರ್ತಿ...
ರಾಜ್ಯಸಭಾ ಸದಸ್ಯರು, ಇನ್ಫೋಸಿಸ್ ಸಂಸ್ಥಾಪಕಿ ಡಾ. ಸುಧಾಮೂರ್ತಿ ಅವರಿಗೆ ಧಾರವಾಡ ಐಐಟಿಯು ಮೊದಲ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ಧಾರವಾಡ ಕಸೂತಿ ಸೀರೆ ಧರಸಿ ಬಂದ ಅವರು ಪದವಿ ಸ್ವೀಕರಿಸಿದರು. ಇದು ನನಗೆ ಸಿಕ್ಕ 27 ಗೌರವಗಳಿಗಿಂತಲೂ ಹೆಚ್ಚು ಖುಷಿ ತಂದಿದೆ. ಪದವಿಯಷ್ಟೇ ಮುಖ್ಯವಲ್ಲ. ಧೈರ್ಯ ಮುಖ್ಯ. ಸೋಲಿಗೆ ಅಂಜದಿರಿ. ಪ್ರತಿಯೊಂದು ಸೋಲು ಯಶಸ್ಸಿನ ಮೊದಲ ಹೆಜ್ಜೆ. ಪದವಿ ಪಡೆದುಕೊಂಡವರಿಗೆ ಯಾವುದೇ ನಿಗದಿತ ಪಠ್ಯಕ್ರಮ ಇರುವುದಿಲ್ಲ. ಪ್ರತಿಯೊಂದು ದಿನವೂ ಒಂದು ಪರೀಕ್ಷೆಯಾಗಿದೆ. ಇದು ನಿಮ್ಮ ಅಳತೆಗೋಲಾಗಲಿದೆ. ಜೀವನ ಸರಳವೂ ಅಲ್ಲ, ಕಠಿಣವೂ ಅಲ್ಲ. ಅದು ಇವೆರಡರ ಮಿಶ್ರಣ. ನಿಮ್ಮ ಕೆಲಸ, ವೃತ್ತಿಪರ ನೈತಿಕತೆಯನ್ನು ಪ್ರೀತಿಸುತ್ತ ಪ್ರತಿ ದಿನವನ್ನು ಆನಂದಿಂದ ಕಳೆಯುತ್ತ ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.313 ಪದವಿ ಪ್ರದಾನಘಟಿಕೋತ್ಸವದಲ್ಲಿ 313 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಗಣ್ಯರಿಂದ ಸ್ವೀಕರಿಸಿದರು. 207 ವಿದ್ಯಾರ್ಥಿಗಳು ಬಿಟೆಕ್ ಪದವಿ, 13 ಬಿಎಸ್, 56 ಎಂ.ಟಿಕ್, 12 ಎಂಎಸ್, 24 ಪಿಎಚ್.ಡಿ ಮತ್ತು ಒಂದು ಪಿಜಿ ಡಿಪ್ಲೊಮಾ ಪಡೆದರು. ಅತ್ಯಧಿಕ ಸಿಪಿಐಗಾಗಿ ಭಾರತದ ರಾಷ್ಟ್ರಪತಿ ಚಿನ್ನದ ಪದಕವನ್ನು ಕಂಪ್ಯೂಟರ್ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಆರ್. ಅಮೋಘ್ಗೆ ಪಡೆದರು. ಒಟ್ಟಾರೆ ಕಾರ್ಯಕ್ಷಮತೆಗಾಗಿ ನಿರ್ದೇಶಕರ ಚಿನ್ನದ ಪದಕವನ್ನು ಅದೇ ಶಾಖೆಯ ಸಿದ್ಧಾರ್ಥ್ ಸಿಂಗ್ ಪಡೆದರು.ಸಮಸ್ಯೆಗೆ ಪರಿಹಾರ ಬೇಕು..
ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗಬಾರದು. ಜನರ ಸಮಸ್ಯೆ ಪರಿಹರಿಸಿ ಅವರ ಜೀವನ ಸುಧಾರಿಸಬೇಕು. ಪ್ರಬಂಧ ಪ್ರಕಟಿಸುವುದಷ್ಟೇ ಸಂಶೋಧನೆಯ ಉದ್ದೇಶವಲ್ಲ. ಈ ಜ್ಞಾನ ಪ್ರಯೋಗಾಲಯದಿಂದ ಸಮಾಜದತ್ತ ಚಲಿಸಿದಾಗ ಮಾತ್ರ ಅದು ಯಶಸ್ಸುಗೊಂಡಂತೆ. ಜನರ ಜೀವನ ಸುಧಾರಿಸುವ ತಂತ್ರಜ್ಞಾನ ಕಾಗದದ ಮೇಲೆ ಉಳಿದಿರುವ ತಂತ್ರಜ್ಞಾನಕ್ಕಿಂತ ಹೆಚ್ಚು ಮೌಲ್ಯಯುತ.ಪ್ರೊ. ಭೀಮಸಿಂಗ್, ರಾಷ್ಟ್ರೀಯ ಅನುಸಂಧಾನ ಸಂಶೋಧನಾ ಪ್ರತಿಷ್ಠಾನದ ಪ್ರಾಧ್ಯಾಪಕ