ಸಾರಾಂಶ
ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರ ‘ನುಡಿಗೋಲು-3’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಮಾವಳ್ಳಿ ಶಂಕರ್, ಲೇಖಕಿ ಡಾ. ಎಂ.ಎಸ್. ಆಶಾದೇವಿ ಮತ್ತಿತರರು ಇದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಜನಪರವಾಗಿ ನಡೆದುಕೊಳ್ಳದೆ ಅಧೋಗತಿಗೆ ಇಳಿದಿದೆ ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.ಶನಿವಾರ ನಗರದಲ್ಲಿ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರ ‘ನುಡಿಗೋಲು-3’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕಸಾಪದಲ್ಲಿ ಪ್ರಸ್ತುತ ಅಧಿಕಾರದಲ್ಲಿ ಕೂತಿರುವವರ ವಿರುದ್ಧ ಹೋರಾಡಬೇಕಾದ ಸಂದರ್ಭ ಬಂದಿದೆ ಎಂದರು.ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಭಾಷೆ ಅಥವಾ ಯಾವುದೇ ಚಳವಳಿಗಳಿಗೆ ಮಣ್ಣಿನ ಗುಣವಿರುತ್ತದೆ. ನೆಲ, ಜಲ, ಭಾಷೆಗಳ ನಡುವೆ ಸಾವಯವವಾದ ಸಂಬಂಧಗಳಿರುತ್ತವೆ. ಈ ಸಂಬಂಧ ಕಡಿದು ಅದರ ಮೇಲೆ ದಬ್ಬಾಳಿಕೆ ಮಾಡುವ ಪ್ರಭುತ್ವ ಮಣಿಸದೆ ಹೋದರೆ ದೇಶವೇ ಸ್ಮಶಾನ ಸದೃಶವಾಗುತ್ತದೆ. ಸಂವಿಧಾನದ ಮೇಲೆ ದಾಳಿಗಳಾಗುತ್ತಿರುವಾಗ ಬರಹಗಾರರು, ಚಿಂತಕರು ನಿರ್ಲಿಪ್ತರಾಗುವ ಮುಖೇನ ದೊಡ್ಡ ಅನ್ಯಾಯವನ್ನು ಎಸಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕ ಕುರಿತು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಮಾತನಾಡಿ, ಈ ಪುಸ್ತಕದಲ್ಲಿ ಕರ್ನಾಟಕದ ಸಾಂಸ್ಕೃತಿಕ ಸವಾಲುಗಳು ಮತ್ತು ಅದನ್ನು ಎದುರಿಸುತ್ತಿರುವ ಆಧುನಿಕರ ನಡುವಿನ ಸಂಘರ್ಷ ತಿಳಿಯುತ್ತದೆ ಎಂದರು.ರೈತ ಸಂಘದ ನಾಯಕಿ ಸುನಂದಾ ಜಯರಾಮ್ ಮಾತನಾಡಿದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಬಿ. ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಜಾಣಗೆರೆ ವೆಂಕಟರಾಮಯ್ಯ ಅವರು ಪ್ರಾಸ್ತಾವಿಕ ಮಾತನಾಡಿದರು.