ನಮ್ಮ ಸಂಸ್ಕೃತಿ, ಆಚಾರ ವಿಚಾರ ಹಾಗೂ ಸಂಪ್ರದಾಯಗಳನ್ನು ಎಂದಿಗೂ ಮರೆಯಬಾರದು. ಅದನ್ನು ಉಳಿಸಿಕೊಂಡು ಹೋಗುವ ಮನೋಭಾವ ಎಲ್ಲರಲ್ಲಿಯೂ ಇರಬೇಕು. ಹೀಗಾಗಿ ನಮ್ಮ ಸಂಘ ಮತ್ತು ಜಿವಿಕೆ ಪ್ರತಿಷ್ಠಾನದಿಂದ ಬಾಗಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಗೌರಿ ಗಣೇಶ ಹಬ್ಬದ ಅಂಗವಾಗಿ ಜಿಲ್ಲಾ ಭುವನ ವಿಶ್ವಕರ್ಮ ಸಮಾಜ ಹಾಗೂ ಜಿವಿಕೆ ಪ್ರತಿಷ್ಠಾನ ವತಿಯಿಂದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.ಸುಭಾಷ್ ನಗರದ ಭುವನ ವಿಶ್ವಕರ್ಮ ಸಮಾಜ ಸಂಘದ ಕಚೇರಿ ಆವರಣದಲ್ಲಿ ಸಮಾಜದ ಅಧ್ಯಕ್ಷ ಎನ್.ಬಸವರಾಜು, ಪ್ರತಿಷ್ಠಾನದ ಅಧ್ಯಕ್ಷ ಆರ್.ವಾಸು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತ್ತೈದೆಯರಿಗೆ ಸೀರೆ, ಬಳೆ, ಅರಿಸಿಣ, ಕುಂಕುಮ, ಹೂವು ನೀಡಿ ಗೌರಿ ಹಬ್ಬಕ್ಕೆ ಶುಭ ಕೋರಲಾಯಿತು.
ಸಮಾಜದ ಅಧ್ಯಕ್ಷ ಎಂ.ಬಸವರಾಜು ಮಾತನಾಡಿ, ಗೌರಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರಿಗೂ ಸಕಲ ಸಂಪತ್ತನ್ನು ದೇವರು ನಿಮಗೆ ಕರುಣಿಸಲು ಎಂದು ಆಶಿಸಿದರು.ನಮ್ಮ ಸಂಸ್ಕೃತಿ, ಆಚಾರ ವಿಚಾರ ಹಾಗೂ ಸಂಪ್ರದಾಯಗಳನ್ನು ಎಂದಿಗೂ ಮರೆಯಬಾರದು. ಅದನ್ನು ಉಳಿಸಿಕೊಂಡು ಹೋಗುವ ಮನೋಭಾವ ಎಲ್ಲರಲ್ಲಿಯೂ ಇರಬೇಕು. ಹೀಗಾಗಿ ನಮ್ಮ ಸಂಘ ಮತ್ತು ಜಿವಿಕೆ ಪ್ರತಿಷ್ಠಾನದಿಂದ ಬಾಗಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾಜದ ಗೌರವಾಧ್ಯಕ್ಷ ಬಿ.ವಿ.ಸೋಮಣ್ಣ ಮಾತನಾಡಿ, ಸಮಾಜದಲ್ಲಿ ನಮ್ಮ ಸಮುದಾಯವು ಸಂಘಟಿತರಾಗಬೇಕು. ಹಬ್ಬ ಸಂಪ್ರದಾಯಗಳನ್ನು ಬಿಡದೆ ಆಚರಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು, ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಡೆ ಗಮನ ಹರಿಸಬೇಕು. ವಿಶ್ವಕರ್ಮ ಜಯಂತಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.ಈ ವೇಳೆ ಜಿವಿಕೆ ಪ್ರತಿಷ್ಠಾನದ ಅಧ್ಯಕ್ಷ ಆರ್.ವಾಸು, ಸಮಾಜದ ಪದಾಧಿಕಾರಿಗಳಾದ ವಿ.ಸಿ.ಗೋವಿಂದರಾಜು, ಕೆ.ಸಿ.ಶ್ರೀನಿವಾಸ, ವೀರಪ್ಪಚಾರ್, ಮಾಸ್ಟರ್ ಶ್ರೀನಿವಾಸ್ ಚಾರ್ , ಅರಕೇಶ, ಆನಂದ್, ಜೈಕುಮಾರ್, ಈರಣ್ಣ, ವೆಂಕಟಾಚಾರಿ, ಪುಷ್ಪಾ, ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಸರಾಳು ಹೋಬಳಿ ಗ್ರಾಮಗಳ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ: ಎಂ.ಎಂ.ಫೌಂಡೇಶನ್ ಆಗ್ರಹಕನ್ನಡಪ್ರಭ ವಾರ್ತೆ ಮಂಡ್ಯಹೇಮಾವತಿ ನಾಲೆಗಳ ಮೂಲಕ ಬಸರಾಳು ಹೋಬಳಿ ಗ್ರಾಮಗಳ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿ ಜನ, ಜಾನುವಾರುಗಳ ಕುಡಿಯುವ ನೀರಿಗೆ ನೆರವಾಗಬೇಕು ಎಂದು ಎಂ.ಎಂ.ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರು ಅವರು, ಮಂಡ್ಯ ತಾಲೂಕಿಗೆ ಸೇರಿರುವ ಬಸರಾಳು ಹೋಬಳಿಯ ಬಹುತೇಕ ಗ್ರಾಮಗಳು ಮಳೆಯಾಶ್ರಿತ ಒಣಭೂಮಿಯಾಗಿದ್ದು, ಹೇಮಾವತಿ ಯೋಜನೆ ಅಚ್ಚುಕಟ್ಟು ಹಾಗೂ ನಾಲಾ ವ್ಯಾಪ್ತಿಗೆ ಒಳಪಟ್ಟಿವೆ. ಹಲವು ವರ್ಷಗಳಿಂದ ಸಮರ್ಪಕವಾಗಿ ನೀರು ಹರಿಯದೆ ಕೆರೆ–ಕಟ್ಟೆಗಳು ಬರಿದಾಗಿ ಈ ಭಾಗದ ರೈತರು, ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.ಬಹುತೇಕ ಗ್ರಾಮಸ್ಥರು ರೈತರು ಕೃಷಿ, ಪಶುಪಾಲನೆ ಹಾಗೂ ಜನ–ಜಾನುವಾರುಗಳ ಕುಡಿಯುವ ನೀರಿಗಾಗಿ ಮುಖ್ಯವಾಗಿ ಕೆರೆ–ಕಟ್ಟೆಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಮಳೆ ಕೊರತೆಯಿಂದ ಈಗಾಗಲೇ ಅನೇಕ ಕೆರೆ–ಕಟ್ಟೆಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿ ತೀವ್ರ ನೀರಿನ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ.ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ ಲಭ್ಯವಿರುವ ನೀರಿನ ಪ್ರಮಾಣ ಪರಿಶೀಲಿಸಿ ಬಸರಾಳು ಹೋಬಳಿಯ ಕೆರೆ–ಕಟ್ಟೆಗಳಿಗೆ ಆದ್ಯತೆ ಮೇರೆಗೆ ಹೇಮಾವತಿ ನಾಲೆಗಳ ಮೂಲಕ ನೀರು ಹರಿಸಿ ತುಂಬಿಸಬೇಕು ಎಂದು ಒತ್ತಾಯಿಸಿದ್ದಾರೆ.ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಬೋರ್ ವೆಲ್ ಗಳ ಮೂಲಕ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಜನ, ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ವಿಳಂಬ ಮಾಡದೆ, ಶಾಸಕರು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಕೆರೆ–ಕಟ್ಟೆಗಳಿಗೆ ನೀರು ಹರಿಸಬೇಕು ಎಂದು ಮಹಾಲಿಂಗೇಗೌಡ ಆಗ್ರಹಿಸಿದ್ದಾರೆ.