ಮಾತೃಭಾಷೆ ಕನ್ನಡವನ್ನು ಮರೆಯಬಾರದು

| Published : Jun 21 2025, 12:49 AM IST

ಸಾರಾಂಶ

ನಾವು ನಿತ್ಯ ಬದುಕಿನಲ್ಲಿ ವ್ಯವಹಾರಿಕವಾಗಿ ಅನೇಕ ಭಾಷೆಗಳನ್ನು ಕಲಿತರೂ ಮಾತೃಭಾಷೆ ಕನ್ನಡವನ್ನು ಮರೆಯಬಾರದು ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕಮಟಗಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಾವು ನಿತ್ಯ ಬದುಕಿನಲ್ಲಿ ವ್ಯವಹಾರಿಕವಾಗಿ ಅನೇಕ ಭಾಷೆಗಳನ್ನು ಕಲಿತರೂ ಮಾತೃಭಾಷೆ ಕನ್ನಡವನ್ನು ಮರೆಯಬಾರದು ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕಮಟಗಿಮಠ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಖೋತ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾತೃಭಾಷೆಯಲ್ಲಿ ಯಾರು ಪ್ರಾವಿಣ್ಯತೆ ಹೊಂದಿರುತ್ತಾರೋ ಅವರು ಜಗತ್ತಿನ ಎಲ್ಲ ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.ಶಿಕ್ಷಣವು ಸಮಾಜದ ಪ್ರಗತಿಗೆ ಮೂಲಾಧಾರವಾಗಿದ್ದು, ಉನ್ನತ ಶಿಕ್ಷಣವು ಇಂದಿನ ಯುವ ಪೀಳಿಗೆಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಜ್ಞಾನವನ್ನು ಸಂಗ್ರಹಿಸಲು ಸಹಕಾರಿಯಾಗಿದೆ. ಕೆ.ಎಲ್.ಇ ಸಂಸ್ಥೆಯು 110 ವರ್ಷಗಳ ಹಿಂದೆ ಸಪ್ತರ್ಷಿಗಳ ಆರ್ಶೀವಾದದ ಫಲವಾಗಿ ಹುಟ್ಟಿಕೊಂಡಿದೆ. ಇಂದು ನಮ್ಮ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಯತ್ನದ ಫಲವಾಗಿ 35 ಸಂಸ್ಥೆಗಳಿಂದ ದೇಶ ಮತ್ತು ವಿದೇಶಗಳಲ್ಲಿ 315ಕ್ಕೂ ಅಧಿಕ ಸಂಸ್ಥೆಗಳನ್ನು ಒಳಗೊಂಡಿರುವ ಹೆಮ್ಮರವಾಗಿ ಬೆಳೆದಿದೆ ಎಂದರು.1. 50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣದ ಜೊತೆಗೆ ನೀಟ್ ಪರೀಕ್ಷೆ, ಐಐಟಿ, ಸಿಇಟಿ, ವೈದ್ಯಕೀಯ, ಡೆಂಟಲ್, ನರ್ಸಿಂಗ್, ಫಿಜಿಯೋಥೇರೆಪಿ ಇವುಗಳ ಸ್ಫಧಾತ್ಮಕ ಪರೀಕ್ಷೆ ಎದುರಿಸಲು ಅವಶ್ಯಕವಾದಂತಹ ಮಹಾವಿದ್ಯಾಲಯಗಳನ್ನು ಬೆಳಗಾವಿ, ಗೋಕಾಕ, ಹುಬ್ಬಳ್ಳಿ, ಧಾರವಾಡ, ನಿಪ್ಪಾಣಿ, ಚಿಕ್ಕೋಡಿಯಲ್ಲಿ ಈಗಾಗಲೇ ಸ್ವತಂತ್ರ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಲಾಗಿದೆ. ಈಗ ಅಥಣಿಯಲ್ಲಿಯೂ ಆರಂಭವಾಗಿರುವ ಈ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಲಾಭವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೋರಿದರು.ಶೇಗುಣಸಿಯ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಅಂಬೇಡ್ಕರ್ ಅವರು ಹೇಳುವಂತೆ ಶಿಕ್ಷಣ ಎನ್ನುವುದು ಹುಲಿ ಹಾಲಿದಂತೆ ಅದನ್ನು ಕುಡಿದವನು ಗರ್ಜಿಸಬೇಕು. ನಾವು ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಬಹಳ ಅಗತ್ಯ. ಇಂತಹ ಶಿಕ್ಷಣ ಮತ್ತು ಮಾರ್ಗದರ್ಶನವನ್ನು ಎಲ್ಲ ಶಾಲಾ ಕಾಲೇಜಿನ ಶಿಕ್ಷಕರು ಮತ್ತು ಮಕ್ಕಳ ಪಾಲಕರು ಮಾಡಬೇಕಾದ ಅಗತ್ಯವಿದೆ. ಭವ್ಯ ಭಾರತ ಕಟ್ಟುವ ದೇಶಭಕ್ತರನ್ನ ರೂಪಿಸುವ ಮಹಾವಿದ್ಯಾಲಯಗಳು ಬೇಕಾಗಿದೆ. ಶಾಲಾ ಕಾಲೇಜುಗಳು ಕೇವಲ ಕಟ್ಟಡವಲ್ಲ, ಅವು ನಿಜವಾದ ಜ್ಞಾನ ದೇಗುಲಗಳು. ವಿದ್ಯಾರ್ಥಿಗಳು ಇಲ್ಲಿ ಶ್ರದ್ಧೆ ಮತ್ತು ಸತತ ಪ್ರಯತ್ನದಿಂದ ಅಧ್ಯಯನ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕ ದಯಾನಂದ ಮುನ್ನೊಳ್ಳಿ, ಪದವಿ ಪೂರ್ವ ಕಾಲೇಜುಗಳ ಅಕಾಡೆಮಿಯ ಮುಖ್ಯಸ್ಥ ಟಿ. ಮಲ್ಲಿಕಾರ್ಜುನ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜ, ಸದಸ್ಯರಾದ ಎಸ್.ಜಿ.ಮಮದಾಪೂರ, ಪ್ರಕಾಶ ಪಾಟೀಲ, ವಿಜಯಕುಮಾರ ಬುರ್ಲಿ, ಶಿವಶಂಕರ ಹಂಜಿ, ಅಲ್ಲಪ್ಪಣ್ಣ ನಿಡೋಣಿ,. ಶ್ರೀಶೈಲ ಸಂಕ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸ್ವತಂತ್ರ ಪದವಿ ಪೂರ್ವ ಪ್ರಾಚಾರ್ಯ ಶ್ರೀನಿವಾಸ ಕನಪರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಶ್ರದ್ದಾ ಪಾಟೀಲ, ಗಿರೀಶ ನಿರೂಪಿಸಿದರು. ಲೋಕಸಾಯಿ ವಂದಿಸಿದರು.