ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಪಾಲೂರು ಗ್ರಾಮದ ಸೂದನ ದೊಡ್ಡ ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ದೈವಗಳ ಆರಾಧನೋತ್ಸವ ಸಾಂಪ್ರದಾಯಿಕ ಹಾಗೂ ಶ್ರದ್ಧಾ ಭಕ್ತಿಯಿಂದ ಭಾನುವಾರ ಸಂಪನ್ನಗೊಂಡಿತು.

ಐದು ವರ್ಷಕ್ಕೊಮ್ಮೆ ನಡೆಸಲಾಗುವ ದೇವರ ಸೇವೆ ಹಾಗೂ ಮೂರ್ತಿ ದೈವಕೋಲಗಳ ಅಂಗವಾಗಿ ಶನಿವಾರ ಬೆಳಿಗ್ಗೆ ಸೂದನ ಕುಟುಂಬದ ದೊಡ್ಡ ಮನೆಯಲ್ಲಿ ಕುಲದೇವರಾದ ಶ್ರೀ ವೆಂಕಟರಮಣ ದೇವರ ಹರಿಸೇವೆ ಪೂಜಾ ವಿಧಿ ವಿಧಾನಗಳು ಜರುಗಿದವು.

ರಾತ್ರಿ ಮೂರ್ತಿ ದೈವಕೋಲಗಳು ಜರುಗಿ ಭಾನುವಾರ ಅಂಗರ, ಗುಳಿಗ, ವಿಷ್ಣುಮೂರ್ತಿ ದೈವ ಕೋಲಗಳು ನೆರವೇರಿದವು. ಬಳಿಕ ದೈವಗಳ ಬಾರನೆ ಸೇವೆ ಜರುಗಿತು. ಆನಂತರ ಸೇರಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ಸೂದನ ಕುಟುಂಬದ ಹಿರಿಯರಾದ ಪಳಂಗಪ್ಪ, ಪಂಡಿನ ಅಧ್ಯಕ್ಷ ಮೋಹನ, ಕಾರ್ಯದರ್ಶಿ ಗೋಪಾಲ, ನಿರ್ದೇಶಕರು ಉಪಸ್ಥಿತರಿದ್ದರು.