ಕೊಡಗನ್ನು ಮಾದರಿ ಜಿಲ್ಲೆಯನ್ನಾಗಿಸುತ್ತೇವೆ: ಸಚಿವ ಭೋಸರಾಜು ಭರವಸೆ

| Published : Jan 07 2024, 01:30 AM IST

ಕೊಡಗನ್ನು ಮಾದರಿ ಜಿಲ್ಲೆಯನ್ನಾಗಿಸುತ್ತೇವೆ: ಸಚಿವ ಭೋಸರಾಜು ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಟ್ಟಂಗಾಲ ಹೆಗಡೆ ಸಮಾಜ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು, ವಿರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಉಸ್ತುವಾರಿ ಸಚಿವ ಭೋಸರಾಜು ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡಗು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಾಗಬೇಕು. ಸರ್ಕಾರ ರಚನೆಯಾಗಿ ಕೆಲವು ತಿಂಗಳು ಕಳೆದರೂ ಐದು ಜನೋಪಯೋಗಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ರಾಜ್ಯದ ಜನತೆಯಿಂದ ಮೆಚ್ಚುಗೆ ಪಡೆದಿದೆ. ಮುಂದೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನಗಳನ್ನು ಹಂತ ಹಂತವಾಗಿ ನೀಡಿ ಮಾದರಿ ಜಿಲ್ಲೆಯನ್ನಾಗಿಸುತ್ತೇವೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೇಳಿದರು.

ಬಿಟ್ಟಂಗಾಲ ಹೆಗಡೆ ಸಮಾಜ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಆಯೋಜಿಸಲಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು, ವಿರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಕಾರ್ಯಕರ್ತರು ಪಕ್ಷದ ಬೆನ್ನಲುಬು, ಪಕ್ಷವು ಎಲ್ಲಾ ವರ್ಗದ ಹಿರಿಯ ಕಿರಿಯ ಕಾರ್ಯಕರ್ತರನ್ನು ಸಮಾನವಾಗಿ ಕಂಡು ವಿವಿಧ ಸಮಿತಿಗಳಲ್ಲಿ ಸದಸ್ಯರನ್ನು ಆಯ್ಕೆಗೊಳಿಸಲು ಪಕ್ಷ ವರಿಷ್ಟರು ಅದೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಮಿತಿಗಳು ರಚನೆಗೊಂಡು ಆಯ್ಕೆ ಪ್ರಕ್ರಿಯೆಗಳು ನಡೆಯಲಿದೆ ಎಂದರು.

ರಾಜ್ಯ ಅಕಾಲಿಕ ಮಳೆ ಮತ್ತು ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಗಳು ಸ್ವತಃ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡಿದ್ದರೂ ಇಂದಿನ ವರೆಗೆ ಯಾವುದೇ ಪರಿಹಾರ ಬಂದಿಲ್ಲ. ರಾಜ್ಯದ ಜನಪ್ರಿಯ ಯೋಜನೆಗಳಿಂದ ಸುಮಾರು ಶೇ.೬೦ರಷ್ಟು ಫಲಾನುಭವಿಗಳು ಸಹಾಯಧನವನ್ನು ಪಡೆದುಕೊಂಡಿದ್ದಾರೆ. ಎರಡು ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ರೈತ ಸಮಸ್ಯೆ, ವಿದ್ಯುತ್ ಅಭಿವೃದ್ಧಿಗಳತ್ತ ಗಮನ ಹರಿಸಿ ಹಂತ ಹಂತವಾಗಿ ಅನುದಾನಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಸಭೆಯಲ್ಲಿ ಹೇಳಿದರು.

* ಗ್ಯಾರಂಟಿಯಿಂದ ಪ್ರಯೋಜನ

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ೨೦ ವರ್ಷಗಳಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಮಂದಗತಿಯಲ್ಲಿ ಸಾಗಿ ಯಾವುದಕ್ಕೂ ಶಾಶ್ವತ ಪರಿಹಾರ ದೊರಕಲು ಅಸಾಧ್ಯವಾಗಿದೆ. ಜನಪರ ಯೋಜನೆಗಳಾದ ಐದು ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದಿರುವ ದೇಶದ ಪ್ರಥಮ ರಾಜ್ಯವಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ೭೦ ಕೋಟಿ ಮಹಿಳೆಯರು ಲಾಭವನ್ನು ಪಡೆದಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆಗಳಿಂದ ಅನುಕೂಲವಾಗಿದೆ. ಆರ್ಥಿಕವಾಗಿ ಸಫಲತೆಯನ್ನು ಪಡೆದಿದ್ದಾರೆ ಎಂದರು.

ಹಿರಿಯ ಮತ್ತು ಕಿರಿಯ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಸರ್ಕಾರದ ಅಧೀನದಲ್ಲಿರುವ ಎಲ್ಲ ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಕಾರ್ಯಕರ್ತರು ಮಂದೆ ಬರುವ ಚುನಾವಣೆಗಳಲ್ಲಿ ಸಕ್ರಿಯರಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಂಘಟಿತರಾಗಿ ಚುನಾವಣೆ ಎದುರಿಸಬೇಕು. ಪಕ್ಷದ ಅಭ್ಯರ್ಥಿಯನ್ನು ಜಯಶಾಲಿಯಾಗಿಸಬೇಕು ಎಂದು ಮನವಿ ಮಾಡಿದರು.

* ವಿಶೇಷ ಪ್ಯಾಕೇಜ್‌ಗೆ ಪ್ರಯತ್ನಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕಾರ್ಯಕರ್ತರು ಪಕ್ಷದ ಒಡನಾಡಿಗಳು, ಕಾರ್ಯಕರ್ತರಿಲ್ಲದೆ ಯಾವುದನ್ನು ಸಾಧಿಸಲು ಅಸಾಧ್ಯ. ಈ ಹಿಂದೆ ಎಂ.ಎಲ್.ಸಿ. ಚುನಾವಣೆಯಲ್ಲಿ 100 ಮತಗಳ ಅಂತರಿಂದ ಸೋಲು ಕಂಡಿದ್ದೇನೆ, ಆದರೆ ಪಕ್ಷದ ಕಾರ್ಯಕರ್ತರು ಎದೆಗುಂದದೆ ತಮ್ಮ ಅವಿರತ ಶ್ರಮದಿಂದ ಎರಡು ಕ್ಷೇತ್ರಗಳು ಪಕ್ಷದ ಪಾಲಾಗಿದೆ. ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮೂಲ ಧ್ಯೇಯವಾಗಿದ್ದು, ವಿರಾಜಪೇಟೆ ಶಾಸಕರು ಮತ್ತು ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ವಿಶೇಷ ಪ್ಯಾಕೇಜ್ ತರುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಸಭೆಯಲ್ಲಿ ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ, ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ.ಕೆ. ಮಂಜುನಾಥ್, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿದರು.ಪೊನ್ನಂಪೇಟೆ ತಾಲೂಕು ಹೊರಾಟಗಾರ ಎರ್ಮು ಹಾಜಿ, ಹಿರಿಯ ಕಾಂಗ್ರೆಸಿಗರಾದ ಪಿ.ಕೆ. ಪೊನ್ನಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ನಗರ ಯೂತ್ ಅಧ್ಯಕ್ಷ ಸಯ್ಯದ್ ಶಬೀರ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೆರಿರ ನವೀನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೆ.ಪಿ.ಸಿ.ಸಿ. ಸದಸ್ಯರು ಉಪಸ್ಥಿತರಿದ್ದರು.ವಿರಾಜಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಸ್ವಾಗತಿಸಿದರು. ಶಶಿಧರನ್ ನಿರೂಪಿಸಿ, ವಂದಿಸಿದರು. ಕೆ.ಪಿ.ಸಿ.ಸಿ ಸದಸ್ಯರು, ಡಿ.ಸಿ.ಸಿ ಪದಾಧಿಕಾರಿಗಳು ವಿವಿಧ ಘಟಕಗಳ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಪುರಸಭೆ ಚುನಾಯಿತ ಪ್ರತಿನಿಧಿಗಳು, ವಿವಿಧ ವಲಯ ಅಧ್ಯಕ್ಷರು, ಮೂರು ಬ್ಲಾಕ್‌ಗಳ ವಲಯ ಅಧ್ಯಕ್ಷರು, ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.