ಸಾರಾಂಶ
ಯತ್ನಾಳಗೆ ವಿಜಯಪುರದಲ್ಲೇ ತಕ್ಕಪಾಠ ಕಲಿಸ್ತೀವಿ, ಕಾಯ್ದು ನೋಡಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು
ಬಾಗಲಕೋಟೆ : ನಾನು ಬರ್ತಿನೋ, ಸಚಿವ ಶಿವಾನಂದ ಪಾಟೀಲ ಬರ್ತಾರೋ, ಒಟ್ಟಾರೆ ಯತ್ನಾಳಗೆ ವಿಜಯಪುರದಲ್ಲೇ ತಕ್ಕಪಾಠ ಕಲಿಸ್ತೀವಿ, ಕಾಯ್ದು ನೋಡಿ ಎಂದು ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಕತ್ ಇದ್ರೆ ಹುನಗುಂದಕ್ಕೆ ಬರ್ಲಿ, ನಾನೇನು ಅಂತ ತೋರಸ್ತೀನಿ. ಈಗಾಗಲೇ ಸಚಿವ ಶಿವಾನಂದ ಪಾಟೀಲ ರಾಜೀನಾಮೆ ನೀಡಿದ್ದಾರೆ, ನಮ್ಮ ರಾಜೀನಾಮೆ ಕೇಳೋಕೆ ಯತ್ನಾಳಗೆ ಯಾವುದೇ ನೈತಿಕ ಹಕ್ಕಿಲ್ಲ, ಬಿ ಫಾರ್ಮ್ ಪಡೆದು ಗೆದ್ದು ಬಂದಿದ್ದ ಪಕ್ಷವೇ ಯತ್ನಾಳರನ್ನ ಉಚ್ಛಾಟಿಸಿದೆ,
ಮೊದಲು ಆ ಪಕ್ಷಕ್ಕೆ ಯತ್ನಾಳ ರಾಜೀನಾಮೆ ನೀಡಬೇಕು, ನಾವು ಏನು ಸಹಾಯ ಮಾಡಿದಿವಿ ಅನ್ನೋದರ ಅರಿವಿಟ್ಟುಕೊಂಡು ಮಾತನಾಡಬೇಕು, ಈ ಮನುಷ್ಯ ಮೊದಲು ರಾಜೀನಾಮೆ ನೀಡಿ ವಿಜಯಪುರದಲ್ಲೇ ನಿಲ್ಲಲಿ, ವಿಜಯಪುರಕ್ಕೆ ನಾನು ಬರ್ತಿನೋ , ಶಿವಾನಂದ ಪಾಟೀಲ ಬರ್ತಾರೋ, ಆದರೆ ಶಿವಾನಂದ ಪಾಟೀಲ ಈಗಾಗಲೇ ಅಪ್ಪನಿಗೆ ಹುಟ್ಟಿದ ಕೆಲ್ಸ ಮಾಡಿದ್ದಾರೆ, ನಾನು ಮಾಡಿದ್ರೂ ಬೇರೆ ಅಲ್ಲ, ಶಿವಾನಂದ ಪಾಟೀಲ ಮಾಡಿದ್ರೂ ಬೇರೆ ಅಲ್ಲ, ಸಚಿವರು ರಾಜೀನಾಮೆ ಕೊಟ್ಟಿದ್ದಾರೆ, ಇವರು (ಯತ್ನಾಳ) ಮೊದಲು ರಾಜೀನಾಮೆ ಕೊಡಲಿ, ಆಮೇಲೆ ಯುದ್ಧ ಇದೆ, ತೋರಸ್ತೀವಿ ಎಂದು ಗುಡುಗಿದರು.
ಯತ್ನಾಳ ಮಾತನಾಡೋ ಪದ ನೋಡಿದ್ರಿ, ಇವ್ರು ಲಿಂಗಾಯತ ಧರ್ಮದಲ್ಲಿ ಜನಿಸಿರೋ ಬಗ್ಗೆ ಅನುಮಾನ ಇದೆ, ಲಿಂಗಾಯತ ಧರ್ಮದಲ್ಲಿ ಅಣ್ಣ ಬಸವಣ್ಣನವರ ಸಂಸ್ಕಾರ ಇದೆ ನಮಗೆ, ಇನ್ಮುಂದೆ ಇವರ ಚಿಲ್ಲರೆ ಮಾತಿಗೆ, ಚಿಲ್ಲರೆ ಭಾಷೆಗೆ ಉತ್ತರ ಕೊಡೋಕೆ ಹೋಗೋದಿಲ್ಲ, ನಾವು ಸಮಯಕ್ಕಾಗಿ ಕಾಯುತ್ತೇವೆ, ಸಮಯ ಬಂದಾಗ ತಕ್ಕಪಾಠ ಕಲಿಸುತ್ತೇವೆ, ಕಾಯ್ದು ನೋಡಿ ಎಂದು ಹೇಳಿದರು.
ಯತ್ನಾಳ ಅವರು ಹುನಗುಂದ ಮತಕ್ಷೇತ್ರದಲ್ಲಿ ಕಾಶಪ್ಪನವರ ವಿರೋಧಿಗಳ ಮನೆಗೆ ಹೋಗಿ ಮಾತುಕತೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಶಪ್ಪನವರ, ನೋಡ್ರಿ, ಯತ್ನಾಳ ಬಂದು ನವಲಿ ಹಿರೇಮಠ, ದೊಡ್ಡನಗೌಡ ಪಾಟೀಲ (ಚುನಾವಣೆ ಎದುರಾಳಿಗಳು) ಸೇರಿ ಯಾರ ಮನೆಗಾದ್ರೂ ಹೋಗಲಿ, ಇದು ಬಿಟ್ಟು ಇನ್ನೊಬ್ಬರು ಮನೆಗಾದ್ರೂ ಹೋಗಲಿ, ಯಾವುದೇ ವ್ಯತ್ಯಾಸ ಬೀಳೋದಿಲ್ಲ, ಹುನಗುಂದ ಕ್ಷೇತ್ರಕ್ಕೆ ಯತ್ನಾಳ ಬಂದು ನಿಲ್ತೀನಿ ಅನ್ನೋದಾದ್ರೆ ಬಂದು ನಿಲ್ಲಲಿ, ತಾಕತ್ ಇದ್ರೆ 2028ಕ್ಕೆ ಹುನಗುಂದಕ್ಕೆ ಬಂದು ನಾಮಿನೇಷನ್ ಕೊಡು, ನಾನು ಏನು ಅನ್ನೋದನ್ನ ತೋರಸ್ತೀನಿ ಎಂದು ಸವಾಲ್ ಹಾಕಿದರು.