ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇಕಾರ ಕುಟುಂಬದ ಗ್ರಾಮೀಣ ಭಾಗದ ಈ ಬಾಲಕಿ, ರಾಷ್ಟ್ರಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾಳೆ. ನಿರಂತರ ಅಭ್ಯಾಸ ಮಾಡಿದ್ದರ ಫಲವಾಗಿ ರಾಜ್ಯಮಟ್ಟದಲ್ಲಿ ಪೈಪೋಟಿ ಮಾಡುತ್ತಿದ್ದ ಈ ಬಾಲೆ ರಾಷ್ಟ್ರಮಟ್ಟಕ್ಕೆ ಪೈಪೋಟಿ ನೀಡಲು ಸಿದ್ಧಳಾಗಿದ್ದಾಳೆ.

ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಶ್ರಾವಣಿ ತಮ್ಮಣ್ಣಪ್ಪ ಭದ್ರನ್ನವರ 15 ವರ್ಷ ವಯೋಮಿತಿಯಲ್ಲಿ ಸ್ಪರ್ಧೆಗೆ ಅರ್ಹತೆಗಿಟ್ಟಿಸಿಕೊಂಡಿದ್ದಾಳೆ.

ಯುಕೆಜಿಯಿಂದಲೇ ರನ್ನ ಬೆಳಗಲಿಯ ಜ್ಞಾನ ಗುರುಕುಲದಲ್ಲಿ ತನ್ನ ತಾಯಿ ಶೀತಲ್‌ರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಕಲಿಯುತ್ತಾ ಪ್ರಸ್ತುತ ಯಲ್ಲಟ್ಟಿಯ ಕೊಣ್ಣೂರ ಆಂಗ್ಲಮಾಧ್ಯಮ ಶಾಲೆಯಲ್ಲಿ 9ನೇ ವರ್ಗ ಕಲಿಯುತ್ತಿದ್ದಾಳೆ. ಅಲ್ಲಿನ ಗುರುಗಳಾದ ಮಲ್ಲಿಕಾರ್ಜುನ ಬಚಡಿ ರ್ಮಾದರ್ಶನದಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದ ಪದಕಗಳನ್ನು ಪಡೆದು ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವದು ವಿಶೇಷ.

ಕೊಣ್ಣೂರ ಶಾಲೆಯಲ್ಲಿ ಊಟದ ವಿರಾಮ ಹಾಗೂ ಶಾಲೆ ಬಿಟ್ಟ ನಂತರ ಒಂದು ಗಂಟೆ ಯೋಗದ ಅಭ್ಯಾಸದಲ್ಲಿ ನಿರತನಾಗುತ್ತಿದ್ದಳು. ಕಲಿಕೆಯ ಆಸಕ್ತಿಯಿಂದ ಬಹುಬೇಗ ಯೋಗದಲ್ಲಿ ಹಿಡಿತ ಕಂಡುಕೊಂಡಳು. ಅದರ ಫಲವೇ ಇಂದು ಸಾಧನೆಗೈಯಲು ಸಾಧ್ಯವಾಗಿದೆ.


ರಾಜ್ಯ ಹಾಗೂ ರಾಷ್ಟçಮಟ್ಟದ ಸ್ಪರ್ಧೆಗಳಲ್ಲಿ ಅತ್ಯಂತ ಕಠಿಣ ಆಸನಗಳನ್ನು ಮಾಡಬೇಕಾಗುತ್ತದೆ. ಅದನ್ನು ಕಡಿಮೆ ಎಂದರೂ 10 ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದು ಮಾಡಬೇಕು. ಬೆರಳು, ಕೈ-ಕಾಲುಗಳು ಸ್ವಲ್ಪ ಓರೆಕೋರೆಯಾದರೂ ಅಂಕ ಕಡಿತಗೊಳ್ಳುತ್ತದೆ. ಇಷ್ಟೆಲ್ಲಾ ಸವಾಲುಗಳನ್ನು ಎದುರಿಸುವಂತೆ ಈತಳಿಗೆ ತರಬೇತಿ ನೀಡಲಾಗಿದೆ.

ಶ್ರಾವಣಿ ಯೋಗದೊಂದಿಗೆ ಹಾಡು, ಕ್ರೀಡೆ, ಓಟದ ಸ್ಪರ್ಧೆಯೊಂದಿಗೆ ಓದಿನಲ್ಲಿಯೂ ಮುಂಚೂಣಿಯಲ್ಲಿದ್ದಾಳೆ. ಕರ್ನಾಟಕದಿಂದ ಪ್ರತಿನಿಧಿಸಿರುವ ಯೋಗಪಟು ಬನಹಟ್ಟಿಯ ಶ್ರಾವಣಿ ತಮ್ಮಣ್ಣಪ್ಪ ಭದ್ರನ್ನವರ ಬರುವ ಜೂ.26ರಿಂದ 28ವರೆಗೆ ಉತ್ತರಾಖಂಡದಲ್ಲಿ ಜರುಗುವ ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್-2026ಲ್ಲಿ ಪಾಲ್ಗೊಳ್ಳಲಿದ್ದಾಳೆ.ಓದಿನೊಂದಿಗೆ ಯೋಗದಲ್ಲಿಯೂ ಸಾಧನೆಗೈಯುತ್ತಿರುವ ವಿದ್ಯಾರ್ಥಿ ಶ್ರಾವಣಿ ಭದ್ರನ್ನವರ ರಾಷ್ಟçಮಟ್ಟದಲ್ಲಿ ಮಿಂಚುತ್ತಿರುವದು ಹೆಮ್ಮೆಯೆನಿಸುತ್ತಿದೆ.

-ಪ್ರೊ.ಬಿ.ಕೆ. ಕೊಣ್ಣೂರ, ಪ್ರಾಚಾರ್ಯರು, ಕೆಸಿಎಸ್ ಕಾಲೇಜು, ಬನಹಟ್ಟಿ.