ಗಜೇಂದ್ರಗಡ: ಬಡವರು ಮತ್ತು ಮಧ್ಯಮ ವರ್ಗದ ಪ್ರತಿಯೊಬ್ಬರ ಸ್ವಂತ ಮನೆ ಹೊಂದಬೇಕು ಎಂಬ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೊರವಿ ಡೆವಲಪರ್ಸ್ ಹಮ್ಮಿಕೊಂಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ತಾಲೂಕಿನ ಬೆಣಚಮಟ್ಟಿ ಗ್ರಾಮ ಸಮೀಪದ ಕೊರವಿ ಸಂಸ್ಥೆಯು ಶನಿವಾರ ಹಮ್ಮಿಕೊಂಡಿದ್ದ ೨೫ನೇ ಲೇಔಟ್ ಭೂಮಿಪೂಜೆಯ ಸಮಾರಂಭದಲ್ಲಿ ಮಾತನಾಡಿದರು.ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಉದಾತ್ತ ಧ್ಯೇಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಕೊರವಿ ಸಂಸ್ಥೆ ಮಾಡುತ್ತಿದೆ. ಡೆವಲಪರ್ ಎಂದರೆ ಕೊರವಿ ಎಂಬ ವಿಶ್ವಾಸಾರ್ಹ ಶಬ್ದವನ್ನು ಸಮಾಜದಲ್ಲಿ ಉಳಿಸಿಕೊಂಡಿದೆ. ಸಂಸ್ಥೆಯು ಉಚಿತ ಆರೋಗ್ಯ ಶಿಬಿರ ಸೇರಿದಂತೆ ಹಲವು ಜನಪರ ಹಾಗೂ ಕ್ರಿಯಾಶೀಲ ಯೋಜನೆಗಳನ್ನು ಸಾಕಾರಗೊಳಿಸಿದೆ. ಹೀಗಾಗಿ, ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಿರುವ ಸಂಸ್ಥೆಯು ಗುಣಮಟ್ಟದ ಕಾಮಗಾರಿಯೊಂದಿಗೆ ಅತ್ಯುತ್ತಮ ಲೇಔಟ್ ನಿರ್ಮಿಸಿ, ನಿಗದಿತ ಅವಧಿಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಇದನ್ನೊಂದು ಮಾದರಿ ಲೇಔಟ್ ಆಗಿ ರೂಪಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ರಾಜಣ್ಣ ಕೊರವಿ ಮಾತನಾಡಿ, ಗಜೇಂದ್ರಗಡ ತಾಲೂಕಿನಲ್ಲಿ ಹೊಸ ಭರವಸೆಯೊಂದಿಗೆ ಆಗಮಿಸಿರುವ ಸಾರ್ವಜನಿಕರೇ ನಮಗೆ ಆನೆ ಬಲ ತಂದಿದ್ದಾರೆ. ಗಜೇಂದ್ರಗಡದಲ್ಲಿ ಕೊರವಿ ಸಂಸ್ಥೆಯ ೨೫ನೇ ಲೇಔಟ್ ಆರಂಭಿಸುತ್ತಿರುವುದು ಅತ್ಯಂತ ವಿಶೇಷವಾಗಿದೆ. ಇಲ್ಲಿನ ಜನತೆ ನಮಗೆ ಅದ್ಭುತ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರೂ ಸ್ವಂತ ನಿವೇಶನ ಹೊಂದಬೇಕೆಂಬ ಆಸೆಯನ್ನು ಈಡೇರಿಸಲು ಕೊರವಿ ಸಂಸ್ಥೆ ಮುಂಚೂಣಿಯಲ್ಲಿದೆ. ಇಲ್ಲಿ ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ತಮ್ಮ ಬಜೆಟ್ಗೆ ತಕ್ಕಂತೆ ಉತ್ತಮ ನಿವೇಶನ ಹೊಂದಬಹುದಾಗಿದೆ. ಗುಣಮಟ್ಟಕ್ಕೆ ಕೊರವಿ ಸಂಸ್ಥೆ ಹೆಸರುವಾಸಿಯಾಗಿದ್ದು, ಇಲ್ಲಿ ಸುಸಜ್ಜಿತ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಇದು ಈ ಭಾಗದ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದರು.ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಕೊರವಿ ಸಂಸ್ಥೆಯವರು ಈ ಹಿಂದೆಯೇ ಈ ಪಟ್ಟಣಕ್ಕೆ ಬರಬೇಕಾಗಿತ್ತು. ಪ್ರಸ್ತುತ ಲೇಔಟ್ನಲ್ಲಿನ ಜಾಗವನ್ನು ಅತ್ಯುತ್ತಮ ದರ್ಜೆಯ ರಸ್ತೆ, ಚರಂಡಿ ಸೇರಿದಂತೆ ಇತರೆ ಆಧುನಿಕ ಸೌಕರ್ಯಗಳೊಂದಿಗೆ ಇವರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅತ್ಯಂತ ಕಡಿಮೆ ಹಣದಲ್ಲಿ, ಅಂದರೆ ತಿಂಗಳಿಗೆ ಕೇವಲ ೬ ಸಾವಿರ ರೂಪಾಯಿಗಳ ಸುಲಭ ಕಂತಿನಲ್ಲಿ ಗ್ರಾಹಕರಿಗೆ ಉತ್ತಮ ಪ್ಲಾಟ್ಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕೊರವಿ ಸಂಸ್ಥೆಯು ಗಜೇಂದ್ರಗಡ ಮಾತ್ರವಲ್ಲದೆ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಪ್ಲಾಟ್ ಡೆವಲಪ್ಮೆಂಟ್ ಮಾಡಿದೆ. ಅತ್ಯಂತ ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಂಡಿದೆ ಎಂದರು.
ಗದಗ ತೋಂಟದ ಸಿದ್ದರಾಮೇಶ್ವರ ಸ್ವಾಮೀಜಿ, ಮೈಸೂರು ಮಠದ ವಿಜಯ ಮಹಾಂತ ಸ್ವಾಮೀಜಿ ಹಾಗೂ ರೋಣದ ಗುರುಪಾದ ಸ್ವಾಮಿಜಿ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಆಶೀರ್ವದಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಆಗಮಿಸಿದ ಸಾರ್ವಜನಿಕರಿಗೆ, ಗಣ್ಯರಿಗೆ ಊಟದ ಜತೆಗೆ ನಗೆ ಹಬ್ಬ ಕಾರ್ಯಕ್ರಮಗಳನ್ನು ಸಂಸ್ಥೆಯು ಆಯೋಜಿಸಿತ್ತು.ಈ ವೇಳೆ ಚನ್ನು ಪಾಟೀಲ, ವೀರಣ್ಣ ಶೆಟ್ಟರ, ಉಮೇಶ ಮಲ್ಲಾಪೂರ, ವಿಶ್ವನಾಥ ಕೊರವಿ ಹಾಗೂ ಮುತ್ತು ಕಡಗದ ಸೇರಿ ಇತರರು ಇದ್ದರು.