ದಲಿತರಿಗೆ ಕಾಂಗ್ರೆಸ್‌ ಕೊಟ್ಟ ಕೊಡುಗೆ ಏನು?

| Published : Dec 29 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದಲಿತರ ಪರವಾಗಿದ್ದೇವೆ ಎಂದು ಹೇಳುವ ಕಾಂಗ್ರೆಸ್‌ನವರು ದಲಿತರ ಸಲುವಾಗಿ ಮೊಸಳೆ ಕಣ್ಣೀರು ಹಾಕುವ ಪ್ರವೃತ್ತಿ ರೂಢಿಸಿಕೊಂಡಿದೆ. ದಲಿತರಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆ ಏನು? ದಲಿತರ ಉದ್ಧಾರ ಮಾಡುತ್ತೇವೆ ಎಂದು ಬಾಯಲ್ಲಿ ಹೇಳಿದ್ದೇ ಬಂತು, ಇದುವರೆಗೂ ಏನೂ ಮಾಡಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದಲಿತರ ಪರವಾಗಿದ್ದೇವೆ ಎಂದು ಹೇಳುವ ಕಾಂಗ್ರೆಸ್‌ನವರು ದಲಿತರ ಸಲುವಾಗಿ ಮೊಸಳೆ ಕಣ್ಣೀರು ಹಾಕುವ ಪ್ರವೃತ್ತಿ ರೂಢಿಸಿಕೊಂಡಿದೆ. ದಲಿತರಿಗೆ ಕಾಂಗ್ರೆಸ್ ಕೊಟ್ಟ ಕೊಡುಗೆ ಏನು? ದಲಿತರ ಉದ್ಧಾರ ಮಾಡುತ್ತೇವೆ ಎಂದು ಬಾಯಲ್ಲಿ ಹೇಳಿದ್ದೇ ಬಂತು, ಇದುವರೆಗೂ ಏನೂ ಮಾಡಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲಿತರನ್ನು ವೋಟಿಗಾಗಿ ಉಪಯೋಗ ಮಾಡಿಕೊಂಡಿದ್ದು, ದಲಿತರಿಗೆ ಏನನ್ನು ಮಾಡದೆ, ಹೀನಾಯವಾಗಿ ನಡೆಸಿಕೊಳ್ಳುತ್ತ ಬಂದಿದೆ. ಡಾ.ಅಂಬೇಡ್ಕರಿಗೆ ಅವಮಾನ ಮಾಡಿದ್ದಲ್ಲದೇ, ಅಂಬೇಡ್ಕರ ಅವರನ್ನು ಸೋಲಿಸಿದವರಿಗೆ ಪ್ರಶಸ್ತಿ ಕೊಟ್ಟರು. ಇದೀಗ ದೊಡ್ಡದಾಗಿ ದಲಿತರ ಪರ ಎಂದು ಮೊಸಳೆ ಕಣ್ಣೀರು ಸುರಿಸುವುದನ್ನು ಬಿಡಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ತಿರುಚಿ ಅವರು ರಾಜೀನಾಮೆ ಕೊಡಬೇಕು ಎಂದು ಹೇಳುವ ಇವರ ನಾಟಕ ಬಹಳ‌ ದಿನ ನಡೆಯಲ್ಲ. ಕಾಂಗ್ರೆಸ್ ಮೊಸಳೆ ಕಣ್ಣೀರಿಗೆ ಜನರು ಮನಸೋಲಬಾರದು ಎಂದು ಜಿಗಜಿಣಗಿ ಮನವಿ ಮಾಡಿದರು. ಕಾಂಗ್ರೆಸ್ ನವರು ಒಳಸಂಚಿನಿಂದ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ ಅವರ ಅಂತಿಮ ಸಂಸ್ಕಾರಕ್ಕೆ ಆರು ಅಡಿ ಜಾಗ ಕೊಡದೆ, ಈಗ ದಲಿತರ ಪರ ಮಾತನಾಡುವ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದು ಕಿಡಿ ಕಾರಿದರು.

ನಾನು ಮನಮೋಹನ ಸಿಂಗ್ ಕಾಲಿಗೆ ಬಿದ್ದಿದ್ದೆ:

ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಸಂಸದ ರಮೇಶ ಜಿಗಜಿಣಗಿ, ಮನಮೋಹನಸಿಂಗ್ ಅವರು ತುಂಬಾ ಒಳ್ಳೆಯವರು, ಅವರನ್ನು ಯಾರ್‍ಯಾರೋ ಯಾವುದೋ ರೀತಿ ಬಳಸಿಕೊಂಡರು. ಅವರು ದೇಶಕ್ಕೆ ಆರ್ಥಿಕ ನೀತಿಯ ಹಾದಿ ಹಾಕಿ ಕೊಟ್ಟವರು.

ದೇಶಕ್ಕೆ ಆರ್ಥಿಕ ನೀತಿ ಹಾಕಿ ಕೊಟ್ಟವರು ಮಾಜಿ ಪ್ರಧಾನಿ ಮನಮೋಹನಸಿಂಗ್. ಇವರಿಗೆ ಭಾರತ ರತ್ನ ಕೊಡ್ತಾರೆ ಎಂದರೆ ನಾನು ಸಪೋರ್ಟ್ ಮಾಡುತ್ತೇನೆ, ಇಂದಲ್ಲ ನಾಳೆ‌ ಅವರಿಗೆ ಭಾರತರತ್ನ ಕೊಟ್ಟೆ ಕೊಡುತ್ತಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ ಕುಚಬಾಳ ಮಾತನಾಡಿ, ಅಂಬೇಡ್ಕರ ಅವರ ಬಗ್ಗೆ ನಿರಂತರ ಅವಮಾನಗಳನ್ನ, ಅಪಮಾನ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಇಂದು ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅಮಿತ್ ಶಾ ಅವರ ಹೇಳಿಕೆ ತಿರುಚಿ ಹೀಗೆ ಹೆಸರು ಹಾಳು ಮಾಡುತ್ತಿದ್ದಾರೆ. ಅಂಬೇಡ್ಕರ ಅವರನ್ನು ಜೀವಿತಾವಧಿಯಲ್ಲಿ ಹಾಗೂ ನಿಧನದ ಬಳಿಕ ಅವರ ಬಗ್ಗೆ ಇವರು ಮಾಡಿದ ವರ್ತನೆ, ಅವಮಾನ ಏನು ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳಬೇಕು. ದೇಶಕ್ಕೆ ಸಂವಿಧಾನ ಕೊಟ್ಟವರನ್ನು ಎರಡು ಬಾರಿ ಸೋಲಿಸಿ ಅಪಮಾನ ಮಾಡಿದ್ದಾರೆ. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ, ಮೃತದೇಹ ಸಾಗಿಸಲು ವಿಮಾನ ಕೊಡಲಿಲ್ಲ. 1961ರಲ್ಲಿ ನೆಹರು ಅವರು ಪ್ರಧಾನಿ ಆದಾಗ, ಅಂಬೇಡ್ಕರ ಅವರು ಮೀಸಲಾತಿ ಕೊಟ್ಟಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಅಲ್ಲದೆ ಗಾಂಧಿ ಕುಟುಂಬದವರು ತಮಗೆ ತಾವೇ ಭಾರತರತ್ನ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಎಲ್ಲರಿಗೂ ನ್ಯಾಯ ಒದಗಿಸಿದ ಅಂಬೇಡ್ಕರ ಅವರಿಗೆ ಯಾವುದು ಪ್ರಶಸ್ತಿ ಕೊಡಲಿಲ್ಲ. ಒಂದು ಸ್ಮಾರಕ ಕಟ್ಟಲಿಲ್ಲ. ಯಾವ ನೈತಿಕತಯಿಂದ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಂದರೆ ಅದು ಸುಡುವ ಮನೆ ಎಂದು ಅಂಬೇಡ್ಕರ ಆಗಲೇ ಹೇಳಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ‌ ಸಾಸನೂರ, ರಮೇಶ ಭೂಸನೂರ, ಮುಖಂಡರಾದ ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ವಿಜುಗೌಡ ಪಾಟೀಲ, ಮಳುಗೌಡ ಪಾಟೀಲ, ಪ್ರೇಮಾನಂದ‌ ಬಿರಾದಾರ, ಶಿವರುದ್ರ ಬಾಗಲಕೋಟ, ಸಂಜಯ ಐಹೊಳ್ಳಿ, ವಿವೇಕಾನಂದ ಡಬ್ಬಿ, ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.

ಕೋಟ್‌

ಇಂಡಿ ತಾಲೂಕಿನ 76 ಹಳ್ಳಿಗಳಿಗೆ ಕುಡಿಯಲು ನೀರು ಇರಲಿಲ್ಲ. ಒಮ್ಮೆ ಅವರ ಭೇಟಿಗೆ ತೆರಳಿದ್ದೆ, ನನಗೆ ಅಂದೇ ಅಪಾಯಿಂಟಮೆಂಟ್ ಕೊಟ್ಟರು. ಸಮಸ್ಯೆ ಕೇಳಿದ ತಕ್ಷಣ ನೀರಿನ ಸಮಸ್ಯೆ ಬಗೆಹರಿಸಲು ಸಂಬಂಧಿಸಿದವರಿಗೆ ತಿಳಿಸಿದರು. ಆಗ ನಾನು ವಿರೋಧ ಪಕ್ಷದಲ್ಲಿದ್ದರೂ ಜನರಿಗಾಗಿ ಒಂದೇ ಮಾತಿಗೆ ಕೆಲಸ ಮಾಡಿಕೊಟ್ಟ ಮನಮೋಹನಸಿಂಗ್ ಅವರ ಕಾಲಿಗೆ ಬಿದ್ದಿದ್ದೆ.

ರಮೇಶ ಜಿಗಜಿಣಗಿ, ಸಂಸದ--------