ಶಾಮನೂರು ಕುಟುಂಬ ತಗೊಂಡು ನಾನೇನು ಮಾಡಲಿ?: ಲೋಕಿಕೆರೆ ನಾಗರಾಜ

| Published : May 16 2025, 01:46 AM IST

ಶಾಮನೂರು ಕುಟುಂಬ ತಗೊಂಡು ನಾನೇನು ಮಾಡಲಿ?: ಲೋಕಿಕೆರೆ ನಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಶಾಮನೂರು ಕುಟುಂಬ ತಗೊಂಡು ನಾನೇನು ಮಾಡಲಿ? ನೀವು ಆ ಕುಟುಂಬಕ್ಕೆ ಅಭಿಮಾನಗಳಾಗಿದ್ದರೆ ಇರಿ. ಸಚಿವ, ಸಂಸದರು, ಶಾಸಕರ ಬಗ್ಗೆ ನಾನು ನೇರವಾಗಿ ಪ್ರಶ್ನೆ ಮಾಡಿದರೆ ನೀವ್ಯಾಕೆ ಮಾತನಾಡುತ್ತೀರಿ? ಸಂಬಂಧಿಸಿದವರು ಅದಕ್ಕೆ ಉತ್ತರಿಸಲಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಕಾಂಗ್ರೆಸಿಗರಿಗೆ ಟಾಂಗ್ ನೀಡಿದ್ದಾರೆ.

- ನನ್ನ ಟೀಕಿಸಿದವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಲೀಡ್‌ ಕೊಡಿಸಿದ್ದೀರಿ ಎಂದು ಪ್ರಶ್ನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಮನೂರು ಕುಟುಂಬ ತಗೊಂಡು ನಾನೇನು ಮಾಡಲಿ? ನೀವು ಆ ಕುಟುಂಬಕ್ಕೆ ಅಭಿಮಾನಗಳಾಗಿದ್ದರೆ ಇರಿ. ಸಚಿವ, ಸಂಸದರು, ಶಾಸಕರ ಬಗ್ಗೆ ನಾನು ನೇರವಾಗಿ ಪ್ರಶ್ನೆ ಮಾಡಿದರೆ ನೀವ್ಯಾಕೆ ಮಾತನಾಡುತ್ತೀರಿ? ಸಂಬಂಧಿಸಿದವರು ಅದಕ್ಕೆ ಉತ್ತರಿಸಲಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನೋಡಲು ಸೈಲೆಂಟ್ ಆಗಿದ್ದೇನೆ. ಅಷ್ಟೇ ವೈಲೆಂಟ್ ಸಹ ಆಗುತ್ತೇನೆ. ನಾನು ಮಾತನಾಡಿದ್ದು, ಪ್ರಶ್ನಿಸಿದ್ದು ನೇರವಾಗಿ ಸಚಿವರು, ಜಿಲ್ಲಾಡಳಿತವನ್ನು. ಇದಕ್ಕೆ ಉತ್ತರಿಸಬೇಕಾದವರೂ ಸಚಿವರು. ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿತ್ತು. ಆದರೆ, ಸ್ವಂತ ಅಸ್ತಿತ್ವವೇ ಇಲ್ಲದ ಕೆಲ ಕಾಂಗ್ರೆಸ್ಸಿಗರು ಮನಬಂದಂತೆ ಮಾತನಾಡಿದ್ದಾರೆ. ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ನನಗೆ ಇನ್ನೂ ಬಚ್ಚಾ ಅಂದಿದ್ದಾರೆ. ಗಡಿಗುಡಾಳ ಮಂಜುನಾಥ, ಎ.ನಾಗರಾಜ, ಕೆ.ಚಮನ್ ಸಾಬ್ ಹೀಗೆ ನನ್ನನ್ನು ಟೀಕಿಸಿದವರು ವಿಧಾನಸಭೆ- ಲೋಕಸಭೆ ಚುನಾವಣೆಯಲ್ಲಿ ತಮ್ಮ ನಾಯಕರಿಗೆ ಎಷ್ಟು ಲೀಡ್ ಕೊಡಿಸಿದ್ದಾರೆಂದು ಮೊದಲು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ನೀವು ಪ್ರಬುದ್ಧ ರಾಜಕಾರಣಿ ಆಗಿದ್ದರೆ ನಿಮ್ಮದೇ ಪಕ್ಷದ ಬಿ ಫಾರಂ ತಂದು, ಚುನಾವಣೆಗೆ ಸ್ಪರ್ಧಿಸಿ ನೋಡೋಣ. 12 ವರ್ಷದಿಂದ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘ ಅಧ್ಯಕ್ಷನಾಗಿ, 3 ವರ್ಷ ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷನಾಗಿದ್ದೇನೆ. ರೈತ ಮೋರ್ಚಾ ಜಿಲ್ಲಾಧ್ಯಕ್ಷನಾಗಿ 4 ವರ್ಷ ಕೆಲಸ ಮಾಡಿದ್ದೇನೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ನಿಮ್ಮ ನಾಯಕರ ವಿರುದ್ಧ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, 70 ಸಾವಿರ ಮತ ಪಡೆದಿದ್ದೇನೆ ಎಂದು ನಾಗರಾಜ ಹೇಳಿದರು.

ಗಡಿಗುಡಾಳ ಮಂಜುನಾಥ ನಿಮ್ಮ ವಾರ್ಡಲ್ಲೇ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ನಾಯಕರಿಗೆ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಲೀಡ್ ಕೊಡಿಸಿದ್ದೀರಿ? ನನ್ನ ಬಗ್ಗೆ ಎಪಿಎಂಸಿ ಮಾರ್ಕೆಟ್‌, ಬ್ಯಾಂಕ್‌ನ ಏನೋ ದಾಖಲೆ ಇವೆಯೆಂದೆಯೆಲ್ಲಾ, ಅವನ್ನೆಲ್ಲಾ ದಾಖಲೆ ಸಮೇತ ಬೇಗನೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ 2018ರಲ್ಲಿ ನಿಮ್ಮ ನಾಯಕರು ಸೋತ ನಂತರ ಸೇಡು ತೀರಿಸಿಕೊಳ್ಳಲು ನನಗೆ ಹೇಗೆಲ್ಲಾ ವ್ಯವಹಾರದಲ್ಲಿ ಕಿರುಕುಳ ಕೊಟ್ಟಿದ್ದೀರೆಂದು ಬಹಿರಂಗಪಡಿಸುವೆ. ನಿಮ್ಮ ನಾಯಕರ ವಿರುದ್ಧದ ಕೇಸ್‌ ಹೇಗೆ ಮುಚ್ಚಿ ಹಾಕಿದ್ದೀರಿ ಎಂಬ ಬಗ್ಗೆ 400 ಪುಟಗಳ ಸಾಕ್ಷ್ಯ ಸಮೇತ ಬಿಜೆಪಿ ರಾಜ್ಯ ಮುಖಂಡರ ಸಮಕ್ಷಮ ಬೆಂಗಳೂರಿನಲ್ಲಿ ನಾನು ಬಹಿರಂಗಪಡಿಸುವೆ ಎಂದು ಸವಾಲು ಹಾಕಿದರು.

ಪಕ್ಷದ ಮುಖಂಡರಾದ ಬಿ.ಎಂ. ಸತೀಶ ಕೊಳೇನಹಳ್ಳಿ, ಪಾಲಿಕೆ ಮಾಜಿ ಸದಸ್ಯ ಎಸ್.ಮಂಜುನಾಥ ನಾಯ್ಕ, ಶ್ರೀನಿವಾಸ, ಡಿ.ವಿ.ಜಯರುದ್ರಪ್ಪ, ಎಂ.ಆರ್. ನಾಗಣ್ಣ, ಕುಂಬಾರ ಜಯಣ್ಣ, ಪ್ರವೀಣ ಜಾಧವ್, ಎನ್.ಜಯಣ್ಣ, ಸತೀಶ, ಮಂಜುನಾಥ್, ರವಿ, ರಾಜು ತೋಟಪ್ಪ, ಚೇತನ ಇತರರು ಇದ್ದರು.

- - -

(ಕೋಟ್‌) ಸಚಿವರ ವಿರುದ್ಧ ನಾನು ಧ್ವನಿ ಎತ್ತುತ್ತಿದ್ದಂತೆ ದಾವಣಗೆರೆಯಲ್ಲಿ ಯಾಕೆ 28 ಇಸ್ಪೀಟ್ ಕ್ಲಬ್ ಬಂದಾದವು? ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮರಳು ಟೆಂಡರ್ ಯಾಕೆ ಮುಂದೂಡಿತು? ಎ.ನಾಗರಾಜ, ಕೆ.ಚಮನ್ ಸಾಬ್‌, ಗಡಿಗುಡಾಳ್ ಮಂಜುನಾಥ ಹೇಗೆಲ್ಲಾ ದುಡ್ಡು ಮಾಡಿದ್ದಾರೆಂಬುದು ಗೊತ್ತಿಲ್ಲವೇ? ನನ್ನ ಮಾತಿನ ಮೇಲೆ ನಂಬಿಕೆ ಇಲ್ಲದಿದ್ದರೆ ಗಣಿ ಅಧಿಕಾರಿಯೊಬ್ಬರಿಗೆ ತಮಗೆ ತಿಂಗಳಿಗೆ ಬೇಡ, ವರ್ಷದ್ದೆಲ್ಲಾ ಒಂದೇ ಸಲಕ್ಕೆ ಬೇಕೆಂಬುದು, ವಿಧಾನಸಭೆ-ಲೋಕಸಭೆ ಚುನಾವಣೆಗೆ ನೂರಾರು ಕೋಟಿ ಖರ್ಚು ಮಾಡಿದ್ದೇನೆಂದು ನಿಮ್ಮ ನಾಯಕರೇ ಹೇಳಿಲ್ಲವೇ ಕೇಳಿ ನೋಡಿ?

- ಲೋಕಿಕೆರೆ ನಾಗರಾಜ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ

- - -

-15ಕೆಡಿವಿಜಿ6:

ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.