ದೇಶದ ಅಖಂಡತೆ, ಏಕತೆ ಬಂದಾಗ ಎಲ್ಲರೂ ಒಂದೇ

| Published : Apr 25 2025, 11:51 PM IST

ಸಾರಾಂಶ

ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ 26 ಜನರ ಕುಂಟುಂಬಗಳ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಾಶ್ಮೀರದಲ್ಲಿ ನಡೆದ ಘಟನೆಯು ವಿಶ್ವವೇ ಭಾರತದ ಕಡೆಗೆ ನೋಡುವಂತೆ ಆಗಿದೆ. ಭಾರತದ ಜನ ಶಾಂತಿ ಪ್ರೀಯರು, ಸೌರ್ಹಾದತೆಯಿಂದ ಬಾಳುವವರು, ಬೇರೆಯವರನ್ನು ಸಹ ಸಹೋದರತೆಯಿಂದ ಕಾಣುತ್ತೇವೆ. ಆದರೆ ಅದೇ ನಮ್ಮ ದೌರ್ಬಲ್ಯ ಎಂದು ತಿಳಿದರೇ ಭಾರತೀಯರು ಅದನ್ನು ಖಂಡಿಸುತ್ತವೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಪೆಹಲ್ಗಾಮ್‌ದಲ್ಲಿ ಹಿಂದೂಗಳ ಮೇಲೆ ಉಗ್ರರು ನಡೆಸಿದ ಉಗ್ರರ ದಾಳಿ ಖಂಡಿಸಿ ಚಿಕ್ಕೋಡಿಯಲ್ಲಿ ಬಿಜೆಪಿ ಜಿಲ್ಲಾ ಘಟಕ, ಕೆಎಲ್‌ಇ, ಸಿಎಲ್‌ಇ, ಸಿಟಿಇ ಶಿಕ್ಷಣ ಸಂಸ್ಥೆಗಳು, ವಕೀಲರ ಸಂಘ, ಐಎಂಎ ಸೇರಿದಂತೆ ವಿವಿಧ ಸಂಘನೆಗಳು ನಡೆಸಿದ ಮೇಣಬತ್ತಿ ಹಿಡಿದು ಶಾಂತಿಯುತವಾಗಿ ಪ್ರತಿಭಟಿಸಲಾಯಿತು. ಬಳಿಕ ಗಾಂಧಿ ಕಟ್ಟೆಯ ಬಳಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಜಾತಿ, ಮತಗಳನ್ನು ಮೀರಿ ಭಾರತ ನಮ್ಮದು ಎಂದು ತಿಳಿದುಕೊಂಡು ಅಖಂಡತೆ, ಏಕತೆ ಬಂದಾಗ ಎಲ್ಲರೂ ಒಂದು, ಒಂದೇ ತಾಯಿಯ ಮಕ್ಕಳು ಎಂಬ ಭಾವನೆಯಿರಬೇಕೆಂದರು.

ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮೀಜಿ ಮಾತನಾಡಿ, ಪಹಲ್ಗಾಮ್‌ದಲ್ಲಿ ಸುಮಾರು 26 ಅಮಾಯಕ ಭಾರತೀಯರ ಮೇಲೆ ಭಯೋತ್ಪಾದನಾ ಗುಂಡಿನ ದಾಳಿ ನಡೆಸಿರುವ ಉಗ್ರರ ದುಷ್ಕೃತ್ಯವನ್ನು ಭಾರತೀಯರಾದ ನಾವೇಲ್ಲರೂ ಒಗ್ಗಟ್ಟಾಗಿ ಖಂಡಿಸೋಣ ಎಂದರು. ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ 26 ಜನರ ಕುಂಟುಂಬಗಳ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ ಎಂದು ಪೂಜ್ಯರು ಸಾಂತ್ವನ-ಸಮಾಧಾನದ ಸಂದೇಶ ಅನುಗ್ರಹಿಸಿದರು.

ಚಿಕ್ಕೋಡಿ ಪಟ್ಟಣದ ಆರ್.ಡಿ.ಕಾಲೇಜ್ ಕಾಲೇಜ್ ಮೈದಾನದಿಂದ ಹೊರಟ ಮೆರವಣಿಗೆ ಕೆ.ಸಿ.ರಸ್ತೆಯ ಯಶವಂತ ಚಿತ್ರಮಂದಿರ ಬಳಿ ಇರುವ ಗಾಂಧಿ ಕಟ್ಟೆಯ ಬಳಿ ಮೆಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಭೆ ನಡೆಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಕಾರ್ಜುನ ಕೋರೆ, ಆರ್.ಎಸ್.ಎಸ್.ಮುಖಂಡ ಸಂಜಯ ಅಡಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಅಪ್ಪಾಸಾಹೇಬ ಚೌಗಲಾ, ವರ್ಧಮಾನ ಸದಲಗೆ, ಎಂ.ಎ.ಪಾಟೀಲ, ಸಂಜಯ ಕವಟಗಿಮಠ, ಮಲ್ಲಿಕಾರ್ಜುನ ಕವಟಗಿಮಠ, ಪ್ರವೀಣ ಕಾಂಬಳೆ, ಬಾಬು ಮಿರ್ಜೆ, ಚಂದ್ರಶೇಖರ ಅರಭಾಂವಿ, ಡಾ.ಸುರೇಶ ಉಕ್ಕಲಿ, ದರ್ಶನ ಪೂಜಾರಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಾಗರ ಬಿಸ್ಕೋಪ್ ನಿರೂಪಿಸಿದರು.