ಬುದ್ಧಿಯೊಂದಿಗೆ ವಿದ್ಯೆ ಸೇರಿದಾಗ ಗಂಧದ ಪರಿಮಳ-ಶ್ರೀಕಾಂತ

| Published : Jun 03 2024, 12:30 AM IST

ಸಾರಾಂಶ

ಬುದ್ಧಿಯೊಂದಿಗೆ ವಿದ್ಯೆ ಸೇರಿದಾಗ ಅದಕ್ಕೆ ಗಂಧದ ಪರಿಮಳ ಬರುತ್ತದೆ. ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಯುಳ್ಳ ಮನುಷ್ಯ ನಿರ್ಮಾಣವಾಗುತ್ತಾನೆ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ದೊಡ್ಡಕುರುಬರ ಹೇಳಿದರು.

ಹಾವೇರಿ: ಬುದ್ಧಿಯೊಂದಿಗೆ ವಿದ್ಯೆ ಸೇರಿದಾಗ ಅದಕ್ಕೆ ಗಂಧದ ಪರಿಮಳ ಬರುತ್ತದೆ. ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಯುಳ್ಳ ಮನುಷ್ಯ ನಿರ್ಮಾಣವಾಗುತ್ತಾನೆ. ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ದೊಡ್ಡಕುರುಬರ ಹೇಳಿದರು.ತಾಲೂಕಿನ ಕೋಳೂರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಜಾಥಾಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಮಾತನಾಡಿದರು. ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣ, ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ವಿಜ್ಞಾನಿಗಳ ಭಾವಚಿತ್ರ, ವಿವಿಧ ಚಿತ್ರಕಲೆಗಳು, ಅಲಂಕಾರಿಕ ಸಾಮಗ್ರಿಗಳು, ವಿವಿಧ ಶೈಕ್ಷಣಿಕ ಚಿತ್ರಗಳು, ಮಿಂಚು ಪಟ್ಟಿಗಳು ಅಕ್ಷರ ಮತ್ತು ಪದಗಳ ಪಟ್ಟಿಗಳಿಂದ ಸಿಂಗರಿಸಿದ ಎತ್ತಿನಗಾಡಿಯಲ್ಲಿ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿದರು. ಈ ವೇಳೆ ಶಿಕ್ಷಣದ ಕುರಿತಾದ ಘೋಷಣೆಗಳನ್ನು ಕೂಗುತ್ತಾ ಹಾಡುಗಳನ್ನು ಹೇಳುತ್ತಾ, ಜಾಥಾವನ್ನು ನಡೆಸಿದರು. ಶಾಲೆಯಲ್ಲಿ ಮಧ್ಯಾಹ್ನ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಊಟ ನೀಡಲಾಯಿತು.ಮುಖ್ಯೋಪಾಧ್ಯಾಯ ಬಿ.ಎಂ. ಅಂಗಡಿ, ಸಹ ಶಿಕ್ಷಕರಾದ ಬಿ.ಬಿ. ನಾಣಾಪುರ, ರಮೇಶ ಸಣ್ಮನಿ, ಟಿ.ಜೆ. ಬಡಪ್ಪನವರ, ಎಂ.ಕೆ. ಹೊನ್ನಜ್ಜರ, ನಾಗರಾಜ ಹುಡೇದ, ಎಸ್.ಪಿ. ಬೆಳ್ಳಟ್ಟಿಮಠ, ಸಹನಾ ವಡ್ನಿಕೊಪ್ಪ, ಪಾಲಕರಾದ ನಿಂಗಪ್ಪ ಹುಲಮನಿ, ಶಿವಾನಂದ ಹುರಳಿ, ಗ್ರಂಥಪಾಲಕಿ ಜಯಶ್ರೀ ಸುಣಗಾರ, ವಿರೂಪಾಕ್ಷಪ್ಪ ಸಣ್ಣಮನಿ, ಮಲ್ಲಿಕಾರ್ಜುನಗೌಡ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.