ಭ್ರಷ್ಟಾಚಾರದ ಬಗ್ಗೆ ಶಾಸಕರು ಯಾವಾಗ ಪ್ರತಿಭಟಿಸುತ್ತಾರೆ?

| Published : Apr 05 2025, 12:46 AM IST

ಭ್ರಷ್ಟಾಚಾರದ ಬಗ್ಗೆ ಶಾಸಕರು ಯಾವಾಗ ಪ್ರತಿಭಟಿಸುತ್ತಾರೆ?
Share this Article
  • FB
  • TW
  • Linkdin
  • Email

ಸಾರಾಂಶ

ಹಾಲಿನ ದರ ಹೆಚ್ಚಳ ಮಾಡಿರುವುದನ್ನೇ ದೊಡ್ಡದೆಂದು ಬಿಂಬಿಸುತ್ತಾ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿರುವ ತುಮಕೂರು ಗ್ರಾಮಾಂತರ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಯಾವಾಗ ಪ್ರತಿಭಟನೆ ನಡೆಸುತ್ತಾರೆ ಎಂದು ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಹಾಲಿನ ದರ ಹೆಚ್ಚಳ ಮಾಡಿರುವುದನ್ನೇ ದೊಡ್ಡದೆಂದು ಬಿಂಬಿಸುತ್ತಾ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿರುವ ತುಮಕೂರು ಗ್ರಾಮಾಂತರ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಯಾವಾಗ ಪ್ರತಿಭಟನೆ ನಡೆಸುತ್ತಾರೆ ಎಂದು ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಪ್ರಶ್ನಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ನೂರಾರು ಕೋಟಿ ರೂಗಳ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಕೆರೆಗಳ ನಿರ್ವಹಣೆಗೆಂದು ಬಂದ 1 ಕೋಟಿ ರು ಅನುದಾನವನ್ನು ಕಾಮಗಾರಿ ನಡೆಸದೆ ಬಿಲ್ ಪಾವತಿ ಮಾಡಿದ್ದಾರೆ. ನಾಗವಲ್ಲಿ ಅಮಾನಿಕೆರೆ, ಕುಚ್ಚಂಗಿ ಕೆರೆ ನಿರ್ವಹಣೆ ಸೇರಿದಂತೆ ಒಟ್ಟು 9 ಕೆರೆಗಳ ನಿರ್ವಹಣೆಗೆ 1 ಕೋಟಿ ರು ಅನುದಾನ ಬಂದಿದ್ದು, ಇದನ್ನು ಟೆಂಡರ್ ಕೆರೆದು ಅರ್ನಹರಿಗೆ ಟೆಂಡರ್ ನೀಡಲಾಗಿದೆ ಎಂದು ಆಪಾದಿಸಿದರು.ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳಿಗೆ ನೀಡಬೇಕಾಗಿದ್ದ ಮೀಸಲು ಪಾಲಿಸಿಲ್ಲ. ಹೆಸರಿಗಷ್ಟೇ ಪರಿಶಿಷ್ಟ ಎಂದು ನಮೂದಿಸಿ, ಬೇರೆಯವರಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಸರಕಾರ ಗುತ್ತಿಗೆ ಕೆಲಸದ ಮೂಲಕ ಎಸ್ಸಿ, ಎಸ್ಟಿ ಜನರನ್ನು ಮೇಲೆತ್ತಬೇಕೆಂಬ ಆಶಯಕ್ಕೆ ಕೊಡಲಿಪೆಟ್ಟನ್ನು ಅಧಿಕಾರಿಗಳು ನೀಡಿದ್ದಾರೆ. ಇಷ್ಟು ರಾಜಾರೋಷವಾಗಿ ತಪ್ಪು ಮಾಡಲು ಯಾರು ಕಾರಣ. ಇವರಿಗೆ ಕುಮ್ಮಕ್ಕು ನೀಡಿದವರು ಯಾರು ಎಂಬುದು ತನಿಖೆಯಿಂದ ಹೊರಬೇಕು. ಸರಕಾರದ ನಿಯಮ ಪಾಲಿಸದ ಅಧಿಕಾರಿಗಳವಿರುದ್ಧ ಎಫ್.ಐ.ಆರ್. ಹಾಕಿ ಜೈಲಿಗೆ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಡಿ.ಸಿ.ಗೌರಿಶಂಕರ್ ಒತ್ತಾಯಿಸಿದರು.

ಹೆಗ್ಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1.10 ಕೋಟಿ ರೂಗಳ ಕಾಮಗಾರಿಯನ್ನು ನಡೆಸದೆ ಬಿಲ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇವರೆಲ್ಲರ ವಿರುದ್ದ ತನಿಖೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ಈಗಾಗಲೇ ಸದನದಲ್ಲಿ ಪ್ರಸ್ತಾಪವಾಗಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೂರಾರು ಕೋಟಿ ರೂಗಳ ಕಾಮಗಾರಿ ನಡೆದಿದ್ದು, ಎಲ್ಲಿಯೂ ಕೂಡ ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂದರು. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಂದಿಗೂ ೫೨ ಹಳ್ಳಿಗಳಲ್ಲಿ ಸ್ಮಶಾನವಿಲ್ಲ. ಆ ಊರಿನಲ್ಲಿ ಯಾರಾದರೂ ಸತ್ತರೇ ರಸ್ತೆ ಬದಿಯಲ್ಲೋ, ಕೆರೆ ಅಂಗಳಲ್ಲೋ ಹೂಳಬೇಕಾದ ಸ್ಥಿತಿ ಇದೆ.ದುರ್ಗದಹಳ್ಳಿ ಘಟನೆ ನಮ್ಮ ಕಣ್ಣಮುಂದೆಯೇ ಇದೆ. ಆಗಿದ್ದರೂ ಸ್ಮಶಾನಗಳಿಗೆ ಆದ್ಯತೆಯ ಮೇಲೆ ಭೂಮಿ ನೀಡುವಲ್ಲಿ ಶಾಸಕರ ವಿಫಲರಾಗಿದ್ದಾರೆ. ಮೊದಲು ಇದರ ಬಗ್ಗೆ ಹೋರಾಟ ಮಾಡಲಿ, ಆ ನಂತರ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲಿ ಎಂದರು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನಾರಾಯಣಪ್ಪ, ಕೆಂಪಣ್ಣ,ಊರುಕೆರೆ ಉಮೇಶ್, ನರುಗನಹಳ್ಳಿ ವಿಜಯಕುಮಾರ್,ರಮೇಶ್ ಇನ್ನಿತರರು ಉಪಸ್ಥಿತರಿದ್ದರು.