ಬದುಕೊಂದು ಸತ್ವ ಪರೀಕ್ಷೆ ಇದ್ದಂತೆ. ಅದು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು, ತಾಳ್ಮೆಯನ್ನು ಹಾಗೂ ವಿವೇಕವನ್ನು ಪರೀಕ್ಷೆಗೆ ಒಡ್ಡುತ್ತದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗಬಹುದು. ಆ ಸವಾಲುಗಳನ್ನು ಎದುರಿಸುವ ದೃಢ ಸಂಕಲ್ಪ ಎದೆಯಲ್ಲಿ ಗಟ್ಟಿಯಾಗಿರಬೇಕು.
ಹೊಳೆಆಲೂರು: ಸಂಸಾರ ಅಂದಾಗ ನಾಲ್ಕು ಮಾತುಗಳು ಬರುವುದು ಸಹಜ. ಸಂಸಾರದಲ್ಲಿ ಮಾತಿಗಿಂತ ಮೌನ ವಹಿಸುವುದು ಕಲಿಯಬೇಕು. ಜೀವನದಲ್ಲಿ ಸೋಲಾಗಲಿ, ಗೆಲುವಾಗಲಿ ತಾಳ್ಮೆಯಿಂದ ಇರಬೇಕು ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಸಮೀಪದ ಬಿ.ಎಸ್. ಬೇಲೇರಿ ಗ್ರಾಮದ ಸುಖಮುನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಬದುಕೊಂದು ಸತ್ವ ಪರೀಕ್ಷೆ ಇದ್ದಂತೆ. ಅದು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು, ತಾಳ್ಮೆಯನ್ನು ಹಾಗೂ ವಿವೇಕವನ್ನು ಪರೀಕ್ಷೆಗೆ ಒಡ್ಡುತ್ತದೆ. ಹೆಜ್ಜೆ ಹೆಜ್ಜೆಗೂ ಸವಾಲುಗಳು ಎದುರಾಗಬಹುದು. ಆ ಸವಾಲುಗಳನ್ನು ಎದುರಿಸುವ ದೃಢ ಸಂಕಲ್ಪ ಎದೆಯಲ್ಲಿ ಗಟ್ಟಿಯಾಗಿರಬೇಕು. ಇಲ್ಲಿ ಮಾಡಿದ ಪ್ರಯತ್ನಗಳೆಲ್ಲ ಯಶಸ್ವಿಯಾಗುವುದಿಲ್ಲ. ಇಟ್ಟ ಗುರಿಗಳೆಲ್ಲ ತಲುಪುವುದಿಲ್ಲ. ನಂಬಿದವರೆಲ್ಲರೂ ನಂಬಿಕೆಯನ್ನು ಉಳಿಸಿಕೊಳ್ಳುವುದಿಲ್ಲ. ಇದು ಅನಿಶ್ಚಿತತೆಗಳ ಸಂತೆ. ನಿಜ ಹೇಳಬೇಕೆಂದರೆ ಜೀವನದ ಬಹುತೇಕ ಸಂದರ್ಭಗಳಲ್ಲಿ ನಾವು ಬಯಸುವುದೇ ಬೇರೆ ಮತ್ತು ಆಗುವುದೇ ಬೇರೆ. ಆದರೂ ಸಹನೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳಬಾರದು ಎಂದರು.ನವಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜೀವನವು ಹುಟ್ಟು ಮತ್ತು ಸಾವುಗಳ ನಡುವಿನ ಸುಂದರ ಪಯಣ. ಇದು ಕಷ್ಟ- ಸುಖ, ನೋವು- ನಲಿವು, ಸೋಲು- ಗೆಲುವುಗಳ ಸಮ್ಮಿಶ್ರಣ. ಇದು ಜೈವಿಕವಾಗಿ ಉಸಿರಾಟ, ಬೆಳವಣಿಗೆ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಯಾಗಿದ್ದರೆ, ದಾರ್ಶನಿಕವಾಗಿ ಪ್ರೀತಿ, ಸಂಬಂಧ ಮತ್ತು ಅನುಭವಗಳ ಮೂಲಕ ಬದುಕಿನ ಅರ್ಥವನ್ನು ಹುಡುಕುವ ನಿರಂತರ ಹೋರಾಟವಾಗಿದೆ ಎಂದರು.ಕೋತಬಾಳ ಅಂಕಲಿಮಠದ ಅಡವಿಸಿದ್ದೇಶ್ವರ ಸ್ವಾಮಿಗಳು, ಪ್ರವಚನಕಾರ ವೀರಯ್ಯ ಸ್ವಾಮಿಗಳು, ರಾಮನಗೌಡ ಗೌಡಪ್ಪಗೌಡ್ರ, ಎಫ್.ಆರ್. ಪಾಟೀಲ, ಮುದಕಪ್ಪ ಯಲಿಗಾರ, ಮುತ್ತನಗೌಡ ಲಿಂಗನಗೌಡ್ರ, ಅಡಿಯಪ್ಪ, ಬಸವರಾಜ ಗೊಣ್ಣಾಗರ, ಟಾಕಪ್ಪ ಜೊಂಡಿ, ಪರಸಪ್ಪ ಸುಳಿಕೇರಿ, ರಂಗನಗೌಡ ಮುದಕನಗೌಡ್ರ, ಭೀಮನಗೌಡ ಭೀಮನಗೌಡ್ರ, ಯಲ್ಲಪ್ಪ ಚೌಡನ್ನವರ, ಸೋಮಣ್ಣ ಉಮಚಗಿ, ಎನ್.ಆರ್. ಬಾದಾಮಿ, ಮುನಯ್ಯ ವಸ್ತ್ರದ, ದೊಡ್ಡ ಹೂವಪ್ಪ ಹೊಸಮನಿ, ವಿ.ಕೆ. ಕುಲಕರ್ಣಿ, ಶಿವಪುತ್ರಪ್ಪ ಸುಳಿಕೇರಿ ಇದ್ದರು.