ಸಾರಾಂಶ
ಹುಬ್ಬಳ್ಳಿ:
ಲೋಕಾಯುಕ್ತದೊಂದಿಗೆ ಮುಖ್ಯಮಂತ್ರಿಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂಬ ಆರ್. ಅಶೋಕ ಹೇಳಿಕೆಗೆ ಕಿಡಿಕಾರಿದ ಡಿಸಿಎಂ ಡಿ.ಕೆ. ಶಿವಕುಮಾರ, ಬಿಜೆಪಿ ಕಾಲದಲ್ಲಿ ನೇಮಕವಾದ ಲೋಕಾಯುಕ್ತರ ಬಗ್ಗೆಯೇ ಅವರಿಗೇ ನಂಬಿಕೆ ಇಲ್ಲ. ಇನ್ನು ಯಾರ ಮೇಲೆ ಅವರಿಗೆ ನಂಬಿಕೆ ಇದೆ ಎಂದು ಪ್ರಶ್ನಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್ ಅವರು ಮ್ಯಾಚ್ ಫಿಕ್ಸಿಂಗ್ ಎನ್ನುವ ಪದ ಬಳಸಿರುವುದು ನ್ಯಾಯಾಂಗ ಮತ್ತು ನ್ಯಾಯಪೀಠಕ್ಕೆ ಮಾಡಿರುವ ಅಪಮಾನ. ಇದು ಸಾಂವಿಧಾನಿಕ ಹುದ್ದೆಗಳಾದ ಲೋಕಾಯುಕ್ತ ಮತ್ತು ಅಧಿಕಾರಿಗಳ ಸ್ಥಾನಕ್ಕೆ ದೊಡ್ಡ ಅಗೌರವ. ಇವು ರಾಜಕೀಯದವರು ನೇಮಕ ಮಾಡುವ ಹುದ್ದೆಗಳಲ್ಲ, ಸಾಂವಿಧಾನಿಕ ಹುದ್ದೆಗಳು ಎಂದ ಅವರು, ಆರ್. ಅಶೋಕ ಮೇಲೆ ಲೋಕಾಯುಕ್ತವು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತ ಅಧಿಕಾರಿಗಳು ಕೇವಲ 2 ಗಂಟೆ ಮುಖ್ಯಮಂತ್ರಿಗಳನ್ನು ವಿಚಾರಣೆ ಮಾಡಿದರು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆ ವೇಳೆ ಯಾವ ಪ್ರಶ್ನೆಯನ್ನು ಕೇಳಿದರು ಎಂಬುದು ವಿಚಾರಣೆಗೆ ಒಳಪಟ್ಟವರಿಗೆ ಗೊತ್ತಿರುತ್ತದೆ. ಇದರ ಬಗ್ಗೆ ನೂರಾರು ಜನ ನೂರಾರು ರೀತಿ ಮಾತನಾಡುತ್ತಾರೆ. ಮತ್ತೆ ತನಿಖೆಗೆ ಕರೆಯಬಹುದಲ್ಲವೇ? ಇದರ ಬಗ್ಗೆ ನಿಮಗೆ ಏನು ಗೊತ್ತು? ಎಂದರು. ಮುಖ್ಯಮಂತ್ರಿಗಳು ಲೋಕಾಯುಕ್ತಕ್ಕೆ ಗೌರವ ಕೊಟ್ಟು, ಅಧಿಕಾರಿಗಳು ಕರೆದರು ಎಂದು ಅವರ ಕಚೇರಿಗೆ ಹೋಗಿ ಉತ್ತರ ಕೊಟ್ಟು ಬಂದಿದ್ದಾರೆ. ಕಾನೂನಿಗೆ ಗೌರವ ಕೊಡುವ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದಾರೆ ಎಂದು ಎಲ್ಲರೂ ಸಂತೋಷ ಪಡಬೇಕು ಎಂದು ಹೇಳಿದರು.ಬಿಜೆಪಿ ಬಗ್ಗೆ ಆಕ್ರೋಶ:
ಶಿಗ್ಗಾಂವಿ ಕ್ಷೇತ್ರವನ್ನು ಕಾರ್ಯಕರ್ತರಿಗೆ ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದರಂತೆ, ಕೊಟ್ಟ ಮಾತಿನಂತೆ ಬಿಜೆಪಿಯವರು ನಡೆದು ಕೊಳ್ಳಲಿಲ್ಲವಂತೆ. ಹೀಗಾಗಿ ಮತದಾರರು ಸಹ ಬಿಜೆಪಿ ಮೇಲೆ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಶಿಗ್ಗಾಂವಿಯಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಿಗ್ಗಾಂವಿ ಉಪಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಮತಕ್ಕಿಂತ ಹೆಚ್ಚಿನ ಮತಗಳಿಂದ ಈ ಉಪಚುನಾವಣೆಯನ್ನು ನಾವು ಗೆಲ್ಲುತ್ತೇವೆ ಎಂದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಹೆಸರನ್ನು ಬರೆದಿಟ್ಟು ಎಸ್ಡಿಎ ಆತ್ಮಹತ್ಯೆ ಪ್ರಕರಣದಿಂದ ಹಾಗೂ ಇತರ ಭ್ರಷ್ಟಾಚಾರ ಆರೋಪಗಳಿಂದ ಸರ್ಕಾರಕ್ಕೆ ಮುಜುಗರವಾಗುತ್ತಿಲ್ಲವೇ ಎಂದು ಕೇಳಿದಾಗ, ಚುನಾವಣೆ ಹೊತ್ತಿನಲ್ಲಿ ಇಂಥ ಆರೋಪಗಳು ಸಾಮಾನ್ಯ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಸಚಿವರ ಆಪ್ತರಾಗಲಿ, ನೀವಾಗಲಿ, ನಾನಾಗಲಿ, ರಸ್ತೆಯಲ್ಲಿ ಹೋಗುವ ಯಾರಾದರಾಗಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.