ಬಾಲಾಜಿ ಮಂದಿರ ನೆಲಸಮಗೊಳಿಸುವ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜ್ಞಾಪನಾ ಪತ್ರವನ್ನು ತಿದ್ದುಪಡಿ ಮಾಡಿಸಿದವರು ಯಾರು ಎಂಬುದನ್ನು ಬಾಲಾಜಿ ಹಾಗೂ ವೀರಭದ್ರೇಶ್ವರ ದೇವರ ಪ್ರಮಾಣ ಮಾಡಿ ಹೇಳಲಿ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಶಾಸಕರಿಗೆ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಬಾಲಾಜಿ ಮಂದಿರ ನೆಲಸಮಗೊಳಿಸುವ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜ್ಞಾಪನಾ ಪತ್ರವನ್ನು ತಿದ್ದುಪಡಿ ಮಾಡಿಸಿದವರು ಯಾರು ಎಂಬುದನ್ನು ಬಾಲಾಜಿ ಹಾಗೂ ವೀರಭದ್ರೇಶ್ವರ ದೇವರ ಪ್ರಮಾಣ ಮಾಡಿ ಹೇಳಲಿ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಶಾಸಕರಿಗೆ ಸವಾಲು ಹಾಕಿದರು.

ಪಟ್ಟಣದ ಬಾಲಾಜಿ ಮಂದಿರದ ಮುಂಭಾಗ ಬುಧವಾರ ಸಂಜೆ ಆಯೋಜಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಗಳಲ್ಲಿ ಬಾಲಾಜಿ ದೇವಸ್ಥಾನ ನಿರ್ಮಾಣಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಅಡ್ಡಿಪಡಿಸುತ್ತಿದ್ದಾರೆ ಎಂಬ ಸುಳ್ಳು ವದಂತಿಗಳನ್ನು ಹರಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಪ್ರಿ-ಗ್ರೇಸ್ ಕಮಿಟಿಯ ದುರ್ಬಳಕೆ ಹೆಸರಿನಲ್ಲಿ, ದೇವಸ್ಥಾನ ನೆಲಸಮಕ್ಕೆ ಸಂಬಂಧಿಸಿದ ಜ್ಞಾಪನಾ ಪತ್ರವನ್ನು ಶಾಸಕರೇ ತಿದ್ದುಪಡಿ ಮಾಡಿಸಿದ್ದಾರೆ ಎಂದು ಪಾಟೀಲ್ ದೂರಿದರು.

ನನ್ನ ಬಳಿ ಇರುವುದು ಸರ್ಕಾರದ ಅಧಿಕೃತ ಜ್ಞಾಪನಾ ಪತ್ರ. ಅದರಲ್ಲಿ ರಾಜಶೇಖರ ಪಾಟೀಲ್ ಹಾಗೂ ಚಂದ್ರಶೇಖರ ಪಾಟೀಲ್ ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ. ವ್ಯಾಪಾರಸ್ಥರು ಶಕ್ತಿ ಹಾಗೂ ಸಾಮರ್ಥ್ಯ ಹೊಂದಿರುವ, ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ನಿರುಪಯುಕ್ತ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದರು.

ಜ್ಞಾಪನಾ ಪತ್ರ ತಿದ್ದುಪಡಿ ಕುರಿತು ಧಾರ್ಮಿಕ ದತ್ತಿ ಸಚಿವರು, ಇಲಾಖೆಯ ಆಯುಕ್ತರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಜ್ಞಾಪನಾ ಪತ್ರ ತಿದ್ದುಪಡಿ ಮಾಡಿರುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇನೆ ಎಂದು ರಾಜಶೇಖರ ಪಾಟೀಲ್ ತಿಳಿಸಿದರು.

ಬಾಲಾಜಿ ಮಂದಿರ ನಿರ್ಮಾಣದ ವಿಚಾರದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸ್ಥಳೀಯ ಸಮಿತಿ ರಚಿಸಿ, ಹಿರೇಮಠ ಸಂಸ್ಥಾನದ ಶ್ರೀಗಳನ್ನು ಆಹ್ವಾನಿಸಿ ಸರ್ಕಾರದ ನಿಯಮಾನುಸಾರ ಸಾರ್ವಜನಿಕ ಸ್ಥಳದಲ್ಲಿ ಸಭೆ ಆಯೋಜಿಸಿ, ಮುಂದಿನ ನಿರ್ಧಾರ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಬಾಲಾಜಿ ಮಂದಿರ ನಿರ್ಮಾಣಕ್ಕೆ ಪಾಟೀಲ್ ಪರಿವಾರದಿಂದ ವೈಯಕ್ತಿಕವಾಗಿ 26 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು. ಶಾಸಕರು ಬಾಲಾಜಿ ಮಂದಿರ ನಿರ್ಮಾಣಕ್ಕೆ ₹30 ಲಕ್ಷ ಮಂಜೂರು ಮಾಡಿರುವುದಾಗಿ ಹೇಳುತ್ತಿದ್ದಾರೆ, ಆದರೆ ಆ ಹಣ ಸಮುದಾಯ ಭವನಕ್ಕೆ ಸಂಬಂಧಿಸಿದ್ದು ಎಂದರು.