ಕಡೂರುಸರ್ಕಾರದ ಸಂಬಳ ಪಡೆವ ಅಧಿಕಾರಿಗಳು, ನೌಕರರೇ ಸರ್ಕಾರಿ ಆಸ್ತಿ ಉಳಿಸಲು ಮುಂದಾಗದಿದ್ದರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ಬೇಸರ ವ್ಯಕ್ತಪಡಿಸಿದರು.

ಹಿರೇನಲ್ಲೂರು ಗ್ರಾಮದಲ್ಲಿ ಶಾಸಕರ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರದ ಸಂಬಳ ಪಡೆವ ಅಧಿಕಾರಿಗಳು, ನೌಕರರೇ ಸರ್ಕಾರಿ ಆಸ್ತಿ ಉಳಿಸಲು ಮುಂದಾಗದಿದ್ದರೆ ಅದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ಬೇಸರ ವ್ಯಕ್ತಪಡಿಸಿದರು. ಗುರುವಾರ ಹಿರೇನಲ್ಲೂರು ಗ್ರಾಮದಲ್ಲಿ ಶಾಸಕರ ನಡೆ ಪಂಚಾಯಿತಿ ಕಡೆ ಕಾರ್ಯಕ್ರಮದಲ್ಲಿ ಆಸ್ಪತ್ರೆ ಜಾಗ ಒತ್ತುವರಿ ಮಾಡಿರುವ ಕುರಿತು ಉದ್ಭವಿಸಿದ ಪ್ರಶ್ನೆಗೆ ಸಭೆಯಲ್ಲಿ ಹಾಜರಿದ್ದ ತಾಲೂಕು ಆಡಳಿತವನ್ನು ಪ್ರಶ್ನಿಸಿದರು. ತಹಸೀಲ್ದಾರ್‌, ಇಒ ಮತ್ತು ಟಿಎಚ್‌ಒ ಇರುವ ಜಾಗವನ್ನಾದರೂ ಉಳಿಸಲು ಅಳತೆ ಮಾಡಿ ಬೇಲಿ ಹಾಕಬೇಕು. ಅದಕ್ಕೆ ಕಲ್ಲುಕಂಬ ಮತ್ತು ತಂತಿ ಬೇಲಿ ನಾನೇ ಕೊಡಿಸುತ್ತೇನೆ. ಈಗಲೇ ಅಳತೆಗೆ ದಿನಾಂಕ ನಿಗದಿ ಪಡಿಸಿ ಎಂದು ತಾಕೀತು ಮಾಡಿದರು.ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ ದತ್ತಾತ್ರಿ ಮಾಹಿತಿ ನೀಡಿ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ.ನಂ.117ರಲ್ಲಿ 4.55ಎಕರೆ ಭೂಮಿ ಇದೆ ಜಾಗ ಗುರುತಿಸಿದರೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಅವಕಾಶವಿದೆ ಎಂದರು. ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಂಡು ನಿರಂತರ ಆರೋಗ್ಯ ಸೇವೆ ಒದಗಿಸಲು ಮುಂದಾಗುವುದಾಗಿ ಶಾಸಕರು ತಿಳಿಸಿದರು.

ಹಿರೇನಲ್ಲೂರು ಗ್ರಾಮದಲ್ಲಿ ಸ್ಮಶಾನ ಭೂಮಿ ನೀಡುವಂತೆ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಗೆ ಸ.ನಂ 163ರಲ್ಲಿ ಭೂಮಿ ಮಂಜೂರಾಗಿದೆ. ಸ್ಥಳ ಗುರುತಿಸಬೇಕು ಎಂದು ಪಿಡಿಒ ಮಾಹಿತಿ ನೀಡಿದರು. ವಿದ್ಯುತ್‌ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಕೃಷಿಕರ ಅಳಲಿಗೆ ಉತ್ತರಿಸಿದ ಮೆಸ್ಕಾಂ ಬೀರೂರು ಎಇಇ ವೀಣಾ, ಇಲ್ಲಿ 8 ಫೀಡರ್‌ಗಳಿವೆ, 10 ಮೆಗಾವ್ಯಾಟ್‌ ಸಾಮರ್ಥ್ಯ ದಿಂದ 20ಮೆಗಾವ್ಯಾಟ್‌ಗೆ ಏರಿಸಲು ಅನುಮೋದನೆಗೆ ಕಳಿಸಲಾಗಿದೆ. ಇರುವ ಸಾಮರ್ಥ್ಯಕ್ಕೆ ಮೀರಿ ಎರಡರಷ್ಟು ಐಪಿ ಸೆಟ್‌ಗಳಿವೆ. ಅನಧಿಕೃತ ಬಳಕೆಯಿಂದ ಸಮಸ್ಯೆಯಾಗುತ್ತಿದೆ ಎಂದು ಶಾಸಕರ ಗಮನಕ್ಕೆ ತಂದರು. ನೀವು ಮಾಹಿತಿ ಕೊಡಿ, ಸಚಿವರು ಅಥವಾ ಮೆಸ್ಕಾಂ ಎಂಡಿಯವರ ಜತೆ ಮಾತನಾಡುತ್ತೇನೆ ಎಂದು ಆನಂದ್‌ ತಿಳಿಸಿದರು.ವಿಶ್ವೇಶ್ವರಯ್ಯ ಜಲನಿಗಮದ ಎಂಜಿನಿಯರ್‌ ಹಿರೇನಲ್ಲೂರು, ಆಡಿಗೆರೆ, ಕೇದಿಗೆರೆ ಎಲ್ಲ ಕಡೆಗೂ ಬಹುತೇಕ ಪೈಪ್‌ ಅಳವಡಿಕೆ ಮುಕ್ತಾಯವಾಗಿದೆ. ಇನ್ನು 2 ತಿಂಗಳಲ್ಲಿ ದೊಡ್ಡಘಟ್ಟ ರಿಸೀವಿಂಗ್‌ ಚೇಂಬರ್‌ಗೆ ನೀರು ಹರಿಸುವ ಟ್ರಯಲ್‌ ನಡೆಯಲಿದೆ ಎಂದರು. ಗ್ರಾಮದ ಕೇದಿಗೆರೆ ರಸ್ತೆಯಲ್ಲಿ ಇರುವ ಮದ್ಯದಂಗಡಿ ಸ್ಥಳಾಂತರಕ್ಕೆ ಪೊಲೀಸರು ಮತ್ತು ಅಬಕಾರಿಯವರು ಸೂಕ್ತ ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು. ಈ ವೇಳೆ 90ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ತಹಸೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ತಾಪಂತಿ ಇಒ ಸಿ.ಆರ್‌.ಪ್ರವೀಣ್‌, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್‌, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಟಿ.ಕಲ್ಲೇಶ್‌, ಬಿಸಿಎಂ ಅಧಿಕಾರಿ ದೇವರಾಜ್‌, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು. 26ಕೆಕೆಡಿಯು4.ಕಡೂರು ತಾಲೂಕು ಹಿರೇನಲ್ಲೂರಿನಲ್ಲಿ ಶಾಸಕರ ನಡೆ ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಆನಂದ್‌ಗೆ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.